ಹೆಚ್ಚಾದ ಕಡಲ್ಕೊರೆತ-ಯುಟಿ ಖಾದರ್ -ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪ-ಬಡವಾದ ಸಂತ್ರಸ್ತ!"
ಮಂಗಳೂರು, ಜುಲೈ 9: ಕರಾವಳಿಯಲ್ಲಿ ಮಳೆ ಬಿರುಸನ್ನು ಪಡೆದಿದೆ. ಅದರಲ್ಲೂ ಅರಬ್ಬೀ ಸಮುದ್ರ ಭೋರ್ಗರೆಯುತ್ತಿದೆ. ಕಡಲು ಪ್ರಕ್ಷುಬ್ಧವಾಗಿ ರಕ್ಕಸ ಗಾತ್ರದ ಅಲೆಗಳು ದಡ್ಡಕ್ಕೆ ಅಪ್ಪಳಿಸುತ್ತಿದೆ. ಅರಬ್ಬೀ ಸಮುದ್ರದ ಕಡಲ ಅಬ್ಬರಕ್ಕೆ ಮಂಗಳೂರಿನ ಹಲವು ಕಡಲಕಿನಾರೆಗಳು ಭಾರೀ ಕಡಲ್ಕೊರೆತಕ್ಕೀಡಾಗಿದೆ. ಜನ ರಸ್ತೆ ಸಂಪರ್ಕ ಇಲ್ಲದೇ, ಮನೆ ಸಮುದ್ರ ಪಾಲಾಗುವ ಆತಂಕದಲ್ಲೇ ದಿನದೂಡುತ್ತಿದ್ದಾರೆ. ಜನರ ಕಷ್ಟಕ್ಕೆ ಹೆಗಲಾಗಬೇಕಾಗಿದ್ದ ಜನಪ್ರತಿನಿಧಿಗಳು ಮಾತ್ರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಆಡಳಿತ ರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಉಳ್ಳಾಲ ಶಾಸಕ, ಮಾಜಿ ಸಚಿವ ಯುಟಿ ಖಾದರ್, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಾಮಗಾರಿಯ ಅಗತ್ಯವಿದೆ. ಆದರೆ ಈ ಶಾಶ್ವತ ಕಾಮಗಾರಿ ವರ್ಷಂಪ್ರತಿಯೂ ಸರಿಯಾಗಿ ನಿರ್ವಹಣೆಯಾಗದಿದ್ದಲ್ಲಿ ಕಡಲ್ಕೊರೆತಕ್ಕೊಡ್ಡಿರುವ ಕಲ್ಲುಗಳು ನಿಲ್ಲವುದಿಲ್ಲ. ಅದನ್ನು ನಿರ್ವಹಣೆ ಮಾಡಲು ಸರಕಾರ ಪ್ರತೀ ಬಜೆಟ್ ನಲ್ಲೂ ಅನುದಾನ ಮೀಸಲಿರಿಸಬೇಕು. ಈ ವಿಚಾರವನ್ನು ಮೊದಲು ಸರಕಾರ ಅರ್ಥಮಾಡಿಕೊಳ್ಳಲಿ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ಉಳ್ಳಾಲದಲ್ಲಿ ಹೆಚ್ಚಾದ ಕಡಲ್ಕೊರೆತ; ಕೊಚ್ಚಿ ಹೋದ ರಸ್ತೆ, ಮನೆಗಳು
ಕೋಟೆಪುರ, ಮೊಗವೀರಪಟ್ಣ, ಕೋಡಿ, ಹಿಲರಿ ನಗರ, ಕೈಕೊ ಮೊದಲಾದ ಕಡೆ ತಡೆಗೋಡೆ ನಿರ್ಮಿಸಿದ ಬಳಿಕ ಕಡಲ್ಕೊರೆತ ನಿಯಂತ್ರಣಕ್ಕೆ ಬಂದಿದೆ. ಆದರೆ, ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದಿದ್ದರೆ, ಇಲ್ಲಿ ನಿರ್ಮಿಸಿರುವ ಶಾಶ್ವತ ತಡೆಗೋಡೆಗಳು ಹೆಚ್ಚು ಬಾಳಿಕೆ ಬರುವುದಿಲ್ಲ. ಇವುಗಳ ವಾರ್ಷಿಕ ನಿರ್ವಹಣೆಗೆ 5 ರಿಂದ 6ಕೋಟಿ ರೂಪಾಯಿಗಳಷ್ಟು ಅನುದಾನದ ಅಗತ್ಯ ಇದೆ. ಇದಕ್ಕಾಗಿ ಪ್ರತಿ ವರ್ಷವೂ ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ಕಾಂಗ್ರೆಸ್ ಅವಧಿಯಲ್ಲಿ ಹಾನಿ ಉಂಟಾಗಿಲ್ಲ
ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಇಂತಹ ಯಾವುದೇ ಹಾನಿ ನಡೆಯುವುದಕ್ಕೆ ಅವಕಾಶ ಕೊಟ್ಟಿಲ್ಲ. ನಮ್ಮ ಸರಕಾರ ಎಡಿಬಿ ಯೋಜನೆಯಲ್ಲಿ ಸದಾ ಕಡಲ್ಕೊರೆತಕ್ಕೊಳಗಾಗುತ್ತಿದ್ದ ಉಳ್ಳಾಲದ ಕೋಟೆಪುರ, ಕೋಡಿ, ಮೊಗವೀರಪಟ್ಣ, ಸುಭಾಷ್ ನಗರ, ಕೈಕೊ, ಹಿಲರಿ ನಗರದಲ್ಲಿ ಶಾಶ್ವತ ಪರಿಹಾರದ ಕಾಮಗಾರಿ ನಡೆಸಿತ್ತು. ಆ ಬಳಿಕ 7-8 ವರ್ಷಗಳಲ್ಲಿ ಈವರೆಗೆ ಯಾವುದೇ ಕಡಲ್ಕೊರೆತಗಳು ಈ ಪ್ರದೇಶಗಳಲ್ಲಿ ಸಂಭವಿಸಿಲ್ಲ. ಇದೀಗ ಈ ಕಾಮಗಾರಿಯನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದಲ್ಲಿ ಮೂರ್ನಾಲ್ಕು ವರ್ಷಗಳಲ್ಲಿ ಇಲ್ಲೂ ಕಡಲ್ಕೊರೆತವಾಗುತ್ತದೆ ಎಂದಿದ್ದಾರೆ.
ಕರಾವಳಿಯಲ್ಲಿ ಮಳೆ ಅಬ್ಬರ, ರೆಡ್ ಅಲರ್ಟ್ ಘೋಷಣೆ ಬಂಟ್ವಾಳಕ್ಕೆ ಸಚಿವರ ಭೇಟಿ
ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿ ಅಗತ್ಯ
60 ವರ್ಷಗಳಲ್ಲಿ ಕಾಂಗ್ರೆಸ್ ಕಡಲ್ಕೊರೆತಕ್ಕೆ ಏನು ಪರಿಹಾರ ಒದಗಿಸಿದೆ ಎಂದು ಕೇಳುವ ಬದಲು ಬಿಜೆಪಿ ಸರಕಾರ ಈಗೇನು ಮಾಡುತ್ತಿದೆ ಎಂದು ಹೇಳಲಿ. ಮೀನುಗಾರಿಕಾ ಸಚಿವ ಎಸ್.ಅಂಗಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಇಬ್ಬರೂ ಕರಾವಳಿಯವರು. ಇವರು ಮಳೆಹಾನಿಗೊಳಗಾದ ಜನರ ಸಮಸ್ಯೆಗಳನ್ನು ಆಲಿಸಲು ವಾರದ ಬಳಿಕ ಕಂದಾಯ ಸಚಿವರೊಂದಿಗೆ ಬರಬೇಕೆ. ಕಡಲ್ಕೊರೆತದ ವಿಚಾರದಲ್ಲಿ ಕಂದಾಯ ಸಚಿವರಿಗೆ ಏನೂ ಮಾಡಲು ಸಾಧ್ಯವಿಲ್ಲ. ಅದು ಬಂದರು ಸಚಿವರ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಮೀನುಗಾರರಿಗೆ ಬೇಕಾಗಿರುವ ಈ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿಯ ಬಗ್ಗೆ ಸಚಿವರು ಚಿಂತನೆ ನಡೆಸಬೇಕಾಗಿದೆ. ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ಒದಗಿಸಬೇಕೇ ಹೊರತು ರಾಜಕೀಯ ಮಾತನಾಡಿದರೆ ಜನರಿಗೆ ಪರಿಹಾರ ಸಾಧ್ಯವಿಲ್ಲ ಎಂದು ಯು.ಟಿ.ಖಾದರ್ ಹೇಳಿದರು.
ಶಾಶ್ವತ ಪರಿಹಾರದ ಭರವಸೆ
ಮಂಗಳೂರು ಹೊರವಲಯದ ಉಳ್ಳಾಲ ಭಾಗದಲ್ಲಿ ಕಡಲ್ಕೊರೆತ ಮುಂದುವರಿದಿದ್ದು,ಉಳ್ಳಾಲದ ಬಟ್ಟಪ್ಪಾಡಿ ಪ್ರದೇಶ ಸಂಪೂರ್ಣ ಹಾನಿಯಾಗಿದೆ. ಬಟ್ಟಪ್ಪಾಡಿ ಸಂಪರ್ಕ ರಸ್ತೆಯನ್ನು ಕಡಲು ಸಂಪೂರ್ಣ ನುಂಗಿ ಹಾಕಿದೆ. ಕಡಲಕೊರೆತ ಸಂಭವಿಸಿದ ಬಟ್ಟಪ್ಪಾಡಿ ಪ್ರದೇಶಕ್ಕೆ ಕಂದಾಯ ಸಚಿವ ಆರ್ ಅಶೋಕ್ ಭೇಟಿ ನೀಡಿದ್ದರು. ಈ ಸಂಧರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಡಲ್ಕೊರೆತ ದಿಂದ ಈ ಭಾಗದಲ್ಲಿ ಹಲವಾರು ಮನೆಗಳು ಅಪಾಯದಲ್ಲಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿದ್ದೇನೆ. ಜೊತೆಗೂ ಮಾತನಾಡುತ್ತೆನೆ. ಈ ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣವಾಗಬೇಕು. ಈ ಕುರಿತು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದರು.
ಕಾಂಗ್ರೆಸ್ ಪ್ರಶ್ನಿಸಿದ ಅಶೋಕ್
ವಿರೋಧಪಕ್ಷದ ಉಪನಾಯಕರಾಗಿ ಯು ಟಿ ಖಾದರ್ ಈ ರೀತಿ ಮಾತನಾಡುವುದು ಸರಿಯಲ್ಲ. ಯುಟಿ ಖಾದರ್ ಚುನಾವಣೆಯ ದೃಷ್ಟಿಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಇವರ ಕಾಂಗ್ರೆಸ್ ಸರ್ಕಾರ ಇರಬೇಕಾದರೆ ಯಾಕೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿಲ್ಲ. ಆಗ ಕಡಲು ಇತ್ತು. ಕಡಲ್ಕೊರೆತವೂ ಇತ್ತು, ಇವರ ಕಾಂಗ್ರೆಸ್ ಸರ್ಕಾರನೂ ಇತ್ತು. ಆಗ ಈ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಬಿಜೆಪಿ ಸರಕಾರ ಇಂತಹ ಸಮಸ್ಯೆಗಳಲ್ಲಿ ಯಾವುದೇ ರೀತಿಯನ್ನು ರಾಜಕಾರಣ ಮಾಡಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ ಭರವಸೆ ನೀಡಿದ್ದಾರೆ.
Recommended Video