ಬೆಳ್ಳಂಬೆಳಗ್ಗೆ ಹಳೆಯಂಗಡಿ ಪಂಚಾಯತ್ ಕಚೇರಿ ಮೇಲೆ ಎಸಿಬಿ ದಾಳಿ
ಮಂಗಳೂರು, ಸೆಪ್ಟೆಂಬರ್. 11: ಮಂಗಳೂರು ಹೊರವಲಯದ ಹಳೆಯಂಗಡಿ ಗ್ರಾಮ ಮಂಚಾಯತ್ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಮಂಗಳವಾರ ಮುಂಜಾನೆ ಕಚೇರಿ ತೆರೆಯುತ್ತಿದ್ದಂತೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ತನಿಖೆ ಆರಂಭಿಸಿದೆ.
ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ 2015 - 16 ನೇ ಸಾಲಿನಲ್ಲಿ ಬೀದಿ ದೀಪ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪ ಕೇಳಿಬಂದಿತ್ತು. ಈ ಅವ್ಯವಹಾರದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಅಬುಬುಕರ್ ಹಾಗೂ ಕಾರ್ಯದರ್ಶಿ ಕೇಶವ ಎಂಬುವವರು ಶಾಮೀಲಾಗಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ ಪಡೆದ ಲಂಚ ಎಷ್ಟು ಗೊತ್ತಾ?
ಪಂಚಾಯತ್ ವ್ಯಾಪ್ತಿಯ ಕೆಲ ಭಾಗಗಳಲ್ಲಿ ಕೇವಲ ಎರಡು ತಿಂಗಳ ಹಿಂದೆ 700 ಸಿಎಫ್ಎಲ್ ಬಲ್ಬ್ ಗಳನ್ನೂ ಬದಲಾಯಿಸಲಾಗಿತ್ತು. ಸಿಎಫ್ಎಲ್ ಗೆ ಒಂದು ವರ್ಷದ ವಾರಂಟಿ ಇದ್ದರೂ ಹೊಸ ದೀಪಗಳನ್ನು ಅಳವಡಿಸಲಾಗಿತ್ತು. ಬಲ್ಬ್ ಖರೀದಿ ಬಗ್ಗೆ ಸರಿಯಾದ ಬಿಲ್ ದಾಖಲೆ ಇರಲಿಲ್ಲ.
ಅಲ್ಲದೆ ಬದಲಾಯಿಸಿದ್ದಾರೆ ಎನ್ನಲಾದ ಹಳೆ ಬಲ್ಬ್ ಗಳು ಇರಲಿಲ್ಲ. ಈ ಬಗ್ಗೆ ಗ್ರಾಮದ ರಮೇಶ್ ಅಂಚನ್ ಎಂಬುವವರು ಎಸಿಬಿಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಪಂಚಾಯತ್ ಕಚೇರಿಯ ಕಡತಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಎಸಿಬಿಗೆ ಸಿಕ್ಕಿ ಬಿದ್ದ 7 ಅಧಿಕಾರಿಗಳು
ತನಿಖೆ ಸಂದರ್ಭದಲ್ಲಿ ಅಬುಬುಕರ್ ಹಾಗು ಕೇಶವ ಅವರನ್ನು ಎಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.