ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ
ಮಂಗಳೂರು, ಅಕ್ಟೋಬರ್. 03: ಕಸ ತ್ಯಾಜ್ಯದಿಂದ ರೋಸಿ ಹೋದ ಗ್ರಾಮಸ್ಥನೋರ್ವ ದೇವರ ಮೊರೆ ಹೋದ ಪ್ರಸಂಗ ಮಂಗಳೂರು ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಹೊರವಲಯದಲ್ಲಿ ಬಂದು ಕಸ ಎಸೆಯುವವರಿಗೆ 3 ಧರ್ಮದ ದೇವರುಗಳ ಬ್ಯಾನರ್ ಕಟ್ಟಿ ಗ್ರಾಮಸ್ಥ ಎಚ್ಚರಿಕೆ ನೀಡಿದ್ದಾನೆ.
ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಎಲ್ಲೆಡೆ ಭರದಿಂದ ಸಾಗಿದೆ. ದೇಶದೆಲ್ಲೆಡೆ ಸ್ವಚ್ಛ ಭಾರತ್ ಅಭಿಯಾನ ನಡೆಸಲಾಗುತ್ತಿದೆ. ಆದರೆ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಮಾತ್ರ ಇಂದಿಗೂ ಬುದ್ಧಿ ಬಂದಿಲ್ಲ. ಎಲ್ಲೆಡೆ ಬಿಸಾಡುವ ತಾಜ್ಯ, ಕಸ ಸಮಸ್ಯೆಗೆ ಪರಿಹಾರ ಶೂನ್ಯ ಎಂಬಂತಾಗಿದೆ.
ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಕಸ ಸಮಸ್ಯೆ ವಿಲೇವಾರಿ ಕಷ್ಟ ಕಷ್ಟ . ತಮ್ಮ ಮನೆಯ ಕಸ ವಿಲೇವಾರಿ ಮಾಡಲು ಕಸವನ್ನು ಬೇರೆಯವರ ಮನೆ ಹತ್ತಿರ ಬಿಸಾಡಿ ಹೋಗುವುದು ಸರ್ವೇ ಸಾಮಾನ್ಯವಾಗಿದೆ.
ಇಂತಹ ಸಮಸ್ಯೆಯೊಂದಕ್ಕೆ ಮುಕ್ತಿ ಹಾಡಲು ಮಂಗಳೂರು ಹೊರವಲಯದ ಬಜ್ಪೆ ಮರವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಥೊನಿ ಕಟ್ಟೆ ಎಂಬಲ್ಲಿ ವ್ಯಕ್ತಿಯೋರ್ವ ತನ್ನ ಮನೆಯ ಮುಂದೆ ಜನರು ಕಸ ಬೀಸಾಡಿ ಹೋಗುತ್ತಿರುವುದರಿಂದ ರೋಸಿ ಹೋಗಿದ್ದರು. ಈ ಸಮಸ್ಯೆಯಿಂದ ಮುಕ್ತಿ ಕಾಣಲು ಅವರು ಈಗ ದೇವರ ಮೊರೆ ಹೋಗಿದ್ದಾರೆ. ಕನ್ ಫ್ಯೂಸ್ ಆದ್ರ? ಅದಕ್ಕೂ ಮುನ್ನ ಈ ಲೇಖನ ಓದಿ ನಿಮಗೆ ತಿಳಿಯುತ್ತದೆ...

ಹಿಂದೂಗಳಿಗೆ ಕೊಟ್ಟಿರುವ ಎಚ್ಚರ
ಕಸ ಬಿಸಾಡುತ್ತಿದ್ದ ಸ್ಥಳದಲ್ಲಿ ಮೂರು ಧರ್ಮಗಳ ದೇವರ ಬ್ಯಾನರ್ ಹಾಕಿದ್ದು, ಅದರಲ್ಲಿ ಕಸ ಬಿಸಾಡಿದವರಿಗೆ ದೇವರು ಕಠಿಣ ಶಿಕ್ಷೆ ವಿಧಿಸಲಿದ್ದಾರೆ ಎಂದು ಬರೆದಿದ್ದಾರೆ. ಹಿಂದೂಗಳು ಈ ಜಾಗದಲ್ಲಿ ಕಸಕಡ್ಡಿಗಳನ್ನು ಹಾಕಿದರೆ ಮನೆಗೆ ಶನಿ ಕೂಡಲೇ ಪ್ರವೇಶವಾಗುತ್ತದೆ. ಮುಂದಿನ 14 ವರ್ಷ ಕಠಿಣ ಕಷ್ಟ ಅನುಭವಿಸುತ್ತಾರೆ ಎಂದು ಬ್ಯಾನರ್ ನಲ್ಲಿ ಎಚ್ಚರಿಸಲಾಗಿದೆ.

ಮುಸಲ್ಮಾನರಿಗೆ, ಕ್ರೈಸ್ತರಿಗೆ ಕೊಟ್ಟ ಎಚ್ಚರಿಕೆ ಹೀಗಿದೆ
ಅದೇ ರೀತಿ ಈ ಜಾಗದಲ್ಲಿ ಮುಸಲ್ಮಾನರು ಕಸಕಡ್ಡಿ ಹಾಕಿದರೆ ಮನೆಗೆ ' ಅಲ್ಲ ' ಕಠಿಣ ಕಷ್ಟಗಳನ್ನು ನೀಡುತ್ತಾನೆ. ಅಂತೆಯೇ ಕ್ರೈಸ್ತರು ಈ ಜಾಗದಲ್ಲಿ ತ್ಯಾಜ್ಯ ತಂದು ಸುರಿದರೆ ' ಯೇಸು ' ಕಠಿಣ ಕಷ್ಟಗಳನ್ನು ನೀಡುತ್ತಾನೆ ಎಂದು ಎಚ್ಚರಿಸಲಾಗಿದೆ.

ಯಶಸ್ವಿಯಾದ ಉಪಾಯ
ಗ್ರಾಮಸ್ಥನ ಈ ಹೊಸ ಪ್ರಯೋಗ ಇದೀಗ ಯಶಸ್ವಿಯಾಗಿದ್ದು, ಮನೆಯ ಮುಂದೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಬಿಸಾಡುತ್ತಿದ್ದ ಕಸಕ್ಕೆ ಮುಕ್ತಿ ದೊರೆತಿದೆ.

ಶುಭಾಶಯ ಪತ್ರ ಕೊಟ್ಟ ಮಕ್ಕಳು
ಬೆಂಗಳೂರಿನಲ್ಲಿಯೂ ಎಲ್ಲೆಂದರಲ್ಲಿ ಕಸ ಸುರಿಯುವವರು, ಗಲೀಜು ಮಾಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಇಂಥವರಿಗೆ ಶುಭಾಶಯ ಪತ್ರ ನೀಡುವ ಮೂಲಕ ಗಲೀಜು ಮಾಡದಂತೆ ಮನವಿ ಮಾಡಲು ಈ ಹಿಂದೆ ಬೆಂಗಳೂರಿನ ಸರಕಾರಿ ಶಾಲೆ ಮಕ್ಕಳು ಮುಂದಾಗಿದ್ದರು. ಈ ಶುಭಾಶಯ ಪತ್ರವೂ ತ್ಯಾಜ್ಯ ಹಾಗೂ ಮರಬಳಕೆ ಕಾಗದದಿಂದ ಸಿದ್ಧವಾಗಿದ್ದು ವಿಶೇಷವಾಗಿತ್ತು.












Click it and Unblock the Notifications