ಮೌಲಾನ ನಿದ್ರೆಗೆ ಆಸರೆಯಾದ ಹಿಂದೂ ಯುವಕ, ಫೇಸ್ಬುಕ್ನಲ್ಲಿ ವೈರಲ್
ಮಂಗಳೂರು, ಜೂನ್ 7: ದಕ್ಷಿಣ ಕನ್ನಡ ಅಥವಾ ಮಂಗಳೂರು ಅಂದ್ರೆ ಯಾವಾಗಲೂ ಕೋಮು ಗಲಭೆ, ಹೊಡೆದಾಟ, ಬಡಿದಾಟದ ಸುದ್ದಿಗಳೇ ಹೆಚ್ಚಾಗಿ ವರದಿಯಾಗುತ್ತವೆ. ಮಂಗಳೂರಿನ ಬಗ್ಗೆ ಹೊರಗಿನವರಲ್ಲಿ ಇದು ಕೆಟ್ಟ ಅಭಿಪ್ರಾಯ ಮೂಡಿಸಿದ್ದೂ ಇದೆ. ಇದರ ಮಧ್ಯೆ ಮಂಗಳೂರಿನಲ್ಲಿಯೂ ಕೋಮು ಸಾಮರಸ್ಯ ಇದೆ ಅಂತ ತೋರಿಸಿಕೊಡುವ ಅಪರೂಪದ ಘಟನೆಗಳು ನಡೆಯುತ್ತಿರುತ್ತವೆ. ಅದಕ್ಕೆ ಈ ಘಟನೆಯೂ ಸಾಕ್ಷಿ.
ಮಂಗಳೂರಿನಿಂದ ಬಾಲಕೃಷ್ಣ ಶೆಟ್ಟಿ ಎಂಬುವವರು ವಿಟ್ಲ ಕಡೆಗೆ ಪ್ರಯಾಣ ಮಾಡುತ್ತಿದ್ದ ಸಂದರ್ಭ ತನ್ನ ಹೆಗಲ ಮೇಲೆ ಮಲಗಿದ ಮುಸ್ಲಿಂ ಧರ್ಮೀಯರೊಬ್ಬರ ಕಥೆಯನ್ನು ಹಂಚಿಕೊಂಡಿದ್ದರು. ರಂಜಾನ್ ಉಪವಾಸದಿಂದ ಬಳಲಿ ಬೆಂಡಾಗಿದ್ದ 'ಮುತಅಲ್ಲಿಂ' ಅಂದರೆ ಧಾರ್ಮಿಕ ವಿಷಯವನ್ನು ಕಲಿಯುವ ಹಿರಿಯ ವ್ಯಕ್ತಿಯೊಬ್ಬರು ತನ್ನ ಹೆಗಲಿಗೆ ಒರಗಿ ನಿದ್ದೆ ಮಾಡಿದ ಘಟನೆಯನ್ನು ಅವರು ಹಂಚಿಕೊಳ್ಳುತ್ತಿದ್ದಂತೆ ಅದು ಫೇಸ್ಬುಕ್ಕಿನಲ್ಲಿ ವೈರಲ್ ಆಗಿದೆ.

ಬಾಲಕೃಷ್ಣ ಅವರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಹಂಚಿಕೊಂಡ ಘಟನೆಯ ಸಂಕ್ಷಿಪ್ತ ಕನ್ನಡ ಅನುವಾದ ಹೀಗಿದೆ, "ನಾನು ಮಂಗಳೂರಿನಿಂದ ವಿಟ್ಲಕ್ಕೆ ತೆರಳುತ್ತಿದ್ದ ಸಂದರ್ಭ ನನ್ನ ಬಳಿ ಮೌಲಾನ ಒಬ್ಬರು ಕುಳಿತಿದ್ದರು. ರಂಜಾನ್ 10ನೇ ಉಪವಾಸದ ವೇಳೆ ತೀವ್ರವಾಗಿ ಬಳಲಿದ್ದರು. ಈ ವೇಳೆ ತನಗೆ ಗೊತ್ತಿಲ್ಲದಂತೆ ನನ್ನ ಭುಜದ ಮೇಲೆ ಒರಗಿ ಮಲಗಿದ್ದರು. ಆಗ ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆ ಮಾಡಿರಲಿಲ್ಲ. ಮಲಗುವ ವೇಳೆ ಅವರು ನನ್ನ ಧರ್ಮ ಕೇಳಿರಲಿಲ್ಲ. ಕಲ್ಲಡ್ಕ ತಲುಪುವ ವೇಳೆ ನನ್ನ ಭುಜದ ಮೇಲೆ ಸರಿಯಾಗಿ ಮಲಗಿ ಎಂದೆ. ಈ ವೇಳೆ ಅವರ ಕೃತಜ್ಞತಾ ಭಾವ ನೋಡಿ ಆನಂದಪಟ್ಟೆ. ಧರ್ಮಕ್ಕಿಂದ ಮಾನವೀಯತೆ ಗೌರವಿಸಿ" ಎಂಬ ಪೋಸ್ಟ್ ಹಾಕಿದ್ದಾರೆ.
ಸಾವಿರಕ್ಕಿಂತಲೂ ಅಧಿಕ ಶೇರ್
ಈ ಫೇಸ್ಬುಕ್ ಪೋಸ್ಟನ್ನು 3,389ಕ್ಕಿಂತಲೂ ಹೆಚ್ಚಿನ ಜನ ಶೇರ್ ಮಾಡಿದ್ದಾರೆ. ಜೊತೆಗೆ 12 ಸಾವಿರಕ್ಕಿಂತಲೂ ಅಧಿಕ ಲೈಕ್ಗಳು ಬಂದಿದೆ. ಇದಲ್ಲದೆ ಸುಮಾರು ಮೂರು ಸಾವಿರ ಜನ ಇದಕ್ಕೆ ಕಮೆಂಟ್ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ವಾಟ್ಸಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋ ಮತ್ತು ಸಂದೇಶ ಹರಿದಾಡುತ್ತಿದೆ. ಈ ಮೂಲಕ ಧರ್ಮ ಧರ್ಮ ಎಂದು ಹೊಡೆದಾಡುವವರಿಗೆ ಸಂದೇಶ ನೀಡುವ ಪ್ರಯತ್ನ ಮಾಡುತ್ತಿದ್ದಾರೆ.












Click it and Unblock the Notifications