ಮಂಗಳೂರು; ವಲಸೆ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ
ಮಂಗಳೂರು, ಮೇ 19 : ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಗಳೂರು ನಗರದಲ್ಲಿ ವಲಸೆ ಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸಿದರು. ತವರು ರಾಜ್ಯಕ್ಕೆ ವಾಪಸ್ ಹೋಗಲು ವ್ಯವಸ್ಥೆ ಮಾಡಬೇಕು ಎಂದು ಕಾರ್ಮಿಕರು ಬೇಡಿಕೆ ಮುಂದಿಟ್ಟಿದ್ದಾರೆ.
ಮಂಗಳವಾರ ಮಂಗಳೂರು ನಗರದ ಮಿಲಾಗ್ರಿಸ್ ಕಾಲೇಜಿನ ಬಳಿ ಸುಮಾರು 400 ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿದರು. ನಗರದ ಸ್ಥಳೀಯ ಕಾಲೇಜುಗಳಲ್ಲಿ ವಾಸ್ತವ್ಯ ಹೂಡಿರುವ ಇವರು, ತಕ್ಷಣ ತಮ್ಮನ್ನು ವಾಪಸ್ ಕಳಿಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಮಾಡಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಸ್ಥಳಕ್ಕೆ ಆಗಮಿಸಿದರು. ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ವಾಪಸ್ ಆಗಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆಯನ್ನು ನೀಡಿದರು. ಬಳಿಕ ಕಾರ್ಮಿಕರು ಪ್ರತಿಭಟನೆ ವಾಪಸ್ ಪಡೆದು ವಾಸ್ತವ್ಯ ಹೂಡಿದ್ದ ಜಾಗಕ್ಕೆ ವಾಪಸ್ ಆದರು.
ಲಾಕ್ ಡೌನ್ ಪರಿಣಾಮ ಕರ್ನಾಟಕದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲಿನ ಮೂಲಕ ತವರು ರಾಜ್ಯಕ್ಕೆ ವಾಪಸ್ ಕಳಿಸಲಾಗುತ್ತಿದೆ. ಆದರೆ, ಕಾರ್ಮಿಕರು ವಾಪಸ್ ಹೋಗುವ ರಾಜ್ಯದ ಒಪ್ಪಿಗೆಯೂ ಬೇಕಾದ ಕಾರಣ ವಿಳಂಬವಾಗುತ್ತಿದೆ.
ಬೆಂಗಳೂರು, ಮಂಗಳೂರು ಸೇರಿದಂತೆ ಇತರ ಜಿಲ್ಲೆಯಲ್ಲಿಯೂ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟದಿಂದ ವಾಪಸ್ ಆಗಲು ಇದುವರೆಗೂ 5 ಲಕ್ಷ ವಲಸೆ ಕಾರ್ಮಿಕರು ನೋಂದಣಿ ಮಾಡಿಸಿದ್ದಾರೆ.












Click it and Unblock the Notifications