ನೇತ್ರಾವತಿಯಲ್ಲಿ ಮುಳುಗಿ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು
ಮಂಗಳೂರು, ಸೆಪ್ಟೆಂಬರ್ 04 : ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದೆ. ಮೃತಪಟ್ಟವರು ನಗರದ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು.
ಮೃತಪಟ್ಟವರನ್ನು ಬೆಳ್ತಂಗಡಿಯ ವಿಖಿಲ್ (21), ಚಿತ್ರದುರ್ಗದ ಶ್ರೀರಾಮ್ ( 21) ಹಾಗೂ ಬಿಹಾರ ಮೂಲದ ಶುಭಂ (21) ಎಂದು ಗುರುತಿಸಲಾಗಿದೆ. ನೀರಿನಲ್ಲಿ ಮುಳುಗುತ್ತಿದ್ದ ಇನ್ನಿಬ್ಬರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ.

ನಗರದ ಅಡ್ಯಾರ್ನ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ 5ನೇ ಸೆಮಿಸ್ಟರ್ನ 8 ವಿದ್ಯಾರ್ಥಿಗಳ ತಂಡ ಇಂದು ನೇತ್ರಾವತಿ ನದಿಗೆ ಈಜಲು ತೆರಳಿತ್ತು. ಅರ್ಕುಳ ಇನೋಳಿ ಎಂಬಲ್ಲಿ ವಿದ್ಯಾರ್ಥಿಗಳು ನದಿಗೆ ಇಳಿದಿದ್ದರು. ಈ ಸಂದರ್ಭದಲ್ಲಿ ಮೂವರು ವಿದ್ಯಾರ್ಥಿಗಳು ನದಿಯಲ್ಲಿ ಈಜಲಾಗದೆ ನೀರು ಪಾಲಾಗಿದ್ದಾರೆ.
ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿರುವುದನ್ನು ನಿರ್ಲಕ್ಷಿಸಿದ ವಿದ್ಯಾರ್ಥಿಗಳು, ಈಜಲು ತೆರಳಿರುವುದು ದುರಂತಕ್ಕೆ ಕಾರಣ. ನೀರು ಪಾಲಾದ ವಿದ್ಯಾರ್ಥಿಗಳ ಶವಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಮುಳುಗು ತಜ್ಞರ ಸಹಾಯವನ್ನು ಪಡೆಯಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಧಾವಿಸಿರುವ ಕೊಣಾಜೆ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದುವರೆಗೂ ಹುಡುಕಾಟ ನಡೆಸಿದಾಗ ವಿಖಿಲ್ ಶವ ಪತ್ತೆಯಾಗಿದೆ. ಇನ್ನೂ ಎರಡು ಶವಕ್ಕಾಗಿ ಶೋಧ ಮುಂದುವರೆದಿದೆ.











Click it and Unblock the Notifications