ಶಿಶಿಲದ ಲಕ್ಷಾಂತರ ಮೀನುಗಳ ಮಾರಣಹೋಮಕ್ಕೆ ಇಂದಿಗೆ 25 ವರ್ಷಗಳು
ಮಂಗಳೂರು, ಮೇ 25: ಅದು 1996ರ ಮೇ 25ನೇ ತಾರೀಖು, ಪಶ್ಚಿಮ ಘಟ್ಟದ ತಪ್ಪಲಿನ ಸುಂದರ ಗ್ರಾಮ ಶೋಕ ಸಾಗರದಲ್ಲಿ ಮುಳುಗಿತ್ತು. ತನ್ನೂರಿನ ದೇವರ ಪ್ರೀತಿಯ ಮೀನುಗಳು ಎಂದು ಕರೆಯಲ್ಪಡುತ್ತಿದ್ದ ಕಪಿಲಾ ನದಿಯ ಮೀನುಗಳು ಒದ್ದಾಡಿ ಪ್ರಾಣಬಿಟ್ಟಿದ್ದವು.
ಲಕ್ಷಾಂತರ ಮೀನುಗಳ ಮಾರಣಹೋಮ ಇಡೀ ಗ್ರಾಮವನ್ನೇ ಗರಬಡಿದಂತೆ ಮಾಡಿತ್ತು. ಇದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ದೇವರ ಮೀನುಗಳ ಮಾರಣಹೋಮ ನಡೆದು (ಮೇ 25, 1996) ಇಂದಿಗೆ 25 ವರ್ಷಗಳಾಗಿವೆ. ಆದರೆ ಆ ದಿನಗಳ ಭೀಕರತೆಗೆ ಇಂದಿಗೂ ಗ್ರಾಮದ ಜನರು ಮಮ್ಮಲ ಮರುಗುತ್ತಿದ್ದಾರೆ.
ಶಿಶಿಲ ದೇವಸ್ಥಾನದ ಪಕ್ಕದಲ್ಲೇ ಇರುವ ದೇವರ ಮೀನುಗಳು
ಕುದುರೆಮುಖ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿರುವ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಪ್ರಮುಖ ಆಕರ್ಷಣೆ ದೇವರ ಮೀನುಗಳು. ಕಪಿಲಾ ನದಿ ದಂಡೆಯಲ್ಲಿರುವ ಶಿಶಿಲ ದೇವಸ್ಥಾನದ ಪಕ್ಕದಲ್ಲೇ ಇರುವ ದೇವರ ಮೀನುಗಳು ಅಂತಾ ಪೊರುವಾಲು ಎಂಬು ಜಾತಿಯ ಮೀನುಗಳನ್ನು ಜನ ಆರಾಧಿಸುತ್ತಿದ್ದಾರೆ. ಜನ ಇಂದಿಗೂ ಪ್ರೀತಿಯಿಂದ ಆ ಮೀನುಗಳಿಗೆ ಮಂಡಕ್ಕಿ ಹಾಕಿ ಮಿನುಗಳು ಆಹಾರ ತಿನ್ನುವ ಅಂದ ನೋಡುತ್ತಾರೆ. ಲಕ್ಷಾಂತರ ಮೀನುಗಳು ಒಂದೆಡೆ ಸೇರಿದಾಗ ಉಂಟಾಗುವ ಕಂಪನ ಭಕ್ತರ ಮನಸ್ಸನ್ನು ಮುದಗೊಳಿಸುತ್ತದೆ.
25 ವರ್ಷಗಳ ಹಿಂದೆ ನಡೆದ ಭೀಕರತೆ
ಆದರೆ, ಈ ಸುಂದರ ಅನುಭವಕ್ಕೆ ಕಳೆದ 25 ವರ್ಷಗಳ ಹಿಂದೆ ನಡೆದ ಭೀಕರತೆ ಎಂದಿಗೂ ಕಪ್ಪು ಚುಕ್ಕೆಯಾಗಿ ನೆನಪಲ್ಲಿ ಉಳಿಯುತ್ತದೆ. 1996ರ ಮೇ25 ರಂದು ಶಿಶಿಲದ ದೇವಸ್ಥಾನದ ದೇವರ ಗುಂಡಿಗೆ ರಾತ್ರಿ ದುಷ್ಕರ್ಮಿಗಳು ಎಂಡೋಸಲ್ಫಾನ್ ವಿಷ ಹಾಕಿದ್ದು, ಆಹಾರ ಎಂದು ಭಾವಿಸಿ ಲಕ್ಷಾಂತರ ಮೀನುಗಳು ವಿಷ ಸೇವಿಸಿದವು. ಬೆಳಗಿನ ವೇಳೆಗೆ ಕ್ಷೇತ್ರದ ಅರ್ಚಕರು ಬಂದು ನೋಡಿದಾಗ ಇಡೀ ಕಪಿಲಾ ದೇವರ ಗುಂಡಿಯಲ್ಲಿ ಲಕ್ಷಾಂತರ ಮೀನುಗಳ ಮಾರಣಹೋಮ ನಡೆದಿದ್ದು, ಇಡೀ ಗ್ರಾಮಸ್ಥರನ್ನು ಶೋಕ ಸಾಗರದಲ್ಲೇ ಮುಳುಗುವಂತೆ ಮಾಡಿತ್ತು.
ದ್ವೇಷದ ಹಿನ್ನೆಲೆಯಲ್ಲಿ ವಿಷ ಹಾಕಿದ್ದರು
ಈ ದೇವಸ್ಥಾನದ ಎರಡು ಕಿ.ಮೀ ಸುತ್ತಮುತ್ತ ಕಪಿಲಾ ನದಿಯಲ್ಲಿ ಮೀನುಗಾರಿಕಾ ನಿಷೇಧವನ್ನು 1922ರಲ್ಲೇ ಬ್ರಿಟಿಷ್ ಸರ್ಕಾರ ಮಾಡಲಾಗಿತ್ತು. ದೇವರ ಭಯ-ಭಕ್ತಿಯಿಂದ, ಮೀನುಗಾರಿಕಾ ನಿಷೇಧಿಂದ ಲಕ್ಷಾಂತರ ಮೀನುಗಳು ದೇವಸ್ಥಾನದ ಬಳಿಯ ದೇವರ ಗುಂಡಿಯಲ್ಲಿದ್ದವು. ಈ ಕರಾಳ ದಿನ ನಡೆಯುವ ಮೂರು ದಿನಗಳ ಹಿಂದೆ, ಮೂರು ಜನ ಬೇರೆ ಊರಿನ ಯುವಕರು ದೇವರ ಗುಂಡಿಯ ಪಕ್ಕದಲ್ಲೇ ಗಾಳ ಹಾಕಿ ಮೀನು ಹಿಡಿಯುತ್ತಿದ್ದರು.
ಈ ವಿಚಾರ ಗ್ರಾಮಸ್ಥರಿಗೆ ಗೊತ್ತಾಗಿ ಹಿಗ್ಗಾಮುಗ್ಗಾ ಹೊಡೆದು ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದರು. ಇದೇ ದ್ವೇಷದಲ್ಲಿ ದೇವರ ಗುಂಡಿಗೆ ಎಂಡೋಸಲ್ಫಾನ್ ವಿಷ ಹಾಕಿರುವ ಶಂಕೆಯೂ ವ್ಯಕ್ತವಾಗಿತ್ತು. ಪೊಲೀಸ್ ತನಿಖೆಯಲ್ಲಿ ದ್ವೇಷದ ಹಿನ್ನೆಲೆಯಲ್ಲಿ ವಿಷ ಹಾಕಿರುವುದು ಗೊತ್ತಾಗಿದ್ದು, ಮಾನವ ದ್ವೇಷಕ್ಕೆ ಅಮಾಯಕ ಮೀನುಗಳು ನರಳಿ ನರಳಿ ಸಾವನ್ನಪ್ಪಿದ್ದವು.
ಕರಾಳ ನೆನಪಲ್ಲೇ ಇರುವ ಗ್ರಾಮಸ್ಥರು
ಮೀನುಗಳು ಸಾವಿನ ಸಂಖ್ಯೆ ಲಕ್ಷಕ್ಕೂ ದಾಟಿತ್ತು. ಒಂದು ಸಾವಿರ ಜನ ಗ್ರಾಮಸ್ಥರು 15 ದಿನಗಳ ಕಾಲ ಪ್ರತಿದಿನ ನದಿಯಿಂದ ಸತ್ತ ಮೀನುಗಳನ್ನು ಹೊರತೆಗೆಯುತ್ತಿದ್ದರು. ನದಿ ದಂಡೆಯಲ್ಲಿ ಲಕ್ಷಾಂತರ ಸತ್ತ ಮೀನುಗಳ ರಾಶಿ ಹಾಕಲಾಗಿತ್ತು. ಸುಮಾರು 15 ಲೋಡ್ ಸತ್ತ ಮೀನುಗಳು ಸಿಕ್ಕಿದ್ದು, ಸುಮಾರು 4 ಕಿ.ಮೀ ನದಿಯುದ್ದಕ್ಕೂ ಮೀನುಗಳ ಶವ ಕಂಡುಬಂದಿತ್ತು. ಈ ಎಲ್ಲಾ ಘಟನೆಯಾಗಿ ಇಂದಿಗೆ 25 ವರ್ಷಗಳಾದರೂ ಗ್ರಾಮಸ್ಥರು ಆ ಕರಾಳ ನೆನಪಲ್ಲೇ ಇದ್ದಾರೆ.
ಮತ್ಸ್ಯ ದುರಂತದಲ್ಲಿ ಮಡಿದ ಮೀನುಗಳಿಗೆ ಗ್ರಾಮಸ್ಥರು ಮತ್ಸ್ಯ ಸ್ಮಾರಕವನ್ನು ಮಾಡಿದ್ದಾರೆ. ಪ್ರತಿ ವರ್ಷ ಮೇ 25 ರಂದು ವಿಶೇಷ ಪೂಜೆ ಮಾಡಲಾಗುತ್ತದೆ. ಮತ್ಸ್ಯ ಸಂರಕ್ಷಣಾ ಸಮಿತಿಯನ್ನು ಗ್ರಾಮಸ್ಥರೇ ಮಾಡಿದ್ದಾರೆ. ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದ್ದು, ಇದೀಗ ದೇವರ ಗುಂಡಿಯಲ್ಲಿ ಮೀನುಗಳ ಕಲರವ ಕಾಣುತ್ತಿದೆ.