ಅನ್ಯಧರ್ಮೀಯ ಯುವತಿ ಜೊತೆ ಪಯಣ; ಮಂಗಳೂರಿನಲ್ಲಿ ಯುವಕನ ಮೇಲೆ ಹಲ್ಲೆ
ಮಂಗಳೂರು, ಏಪ್ರಿಲ್ 2: ಅನ್ಯ ಧರ್ಮೀಯ ಯುವತಿಯೊಂದಿಗೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ 23 ವರ್ಷದ ಯುವಕನನ್ನು ಥಳಿಸಿ ಇರಿದಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಗುರುವಾರ ರಾತ್ರಿ ಸುಮಾರು 9.30ರ ಸಮಯದಲ್ಲಿ ಕಾರಿನಲ್ಲಿ ಬಂದ ಕೆಲವರು ಬಸ್ ತಡೆಹಿಡಿದಿದ್ದಾರೆ. ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ಯುವಕ ಹಾಗೂ ಯುವತಿಯನ್ನು ವಾಹನದಿಂದ ಕೆಳಗೆ ಇಳಿಸಿದ್ದಾರೆ. ಯುವಕನನ್ನು ಥಳಿಸಿ ಆತನನ್ನು ಇರಿದಿದ್ದಾರೆ. ಇದನ್ನು ತಡೆಯಲು ಬಂದ ಯುವತಿ ಮೇಲೂ ಹಲ್ಲೆ ನಡೆದಿದ್ದು, ಆಕೆಗೆ ಗಾಯಗಳಾಗಿವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿ ಕುಮಾರ್ ಹೇಳಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಏಳೆಂಟು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಾಲ್ವರು ಭಜರಂಗದಳದವರು ಈ ಘಟನೆಯಲ್ಲಿ ತೊಡಗಿಕೊಂಡ ಮಾಹಿತಿಯಿದ್ದು, ಶೀಘ್ರವೇ ಅವರನ್ನು ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಹಾಡಹಗಲೇ ನಡುರಸ್ತೆಯಲ್ಲಿ ಎಐಎಂಐಎಂ ಮುಖಂಡನ ಬರ್ಬರ ಹತ್ಯೆ
ಯುವತಿಯು ಬೆಂಗಳೂರಿಗೆ ತೆರಳುತ್ತಿದ್ದು, ಆಕೆಯೊಂದಿಗೆ ಯುವಕನೂ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ. ಅವರಿಬ್ಬರೂ ಕ್ಲಾಸ್ಮೇಟ್ ಗಳಾಗಿದ್ದು, ಹಲವು ವರ್ಷಗಳಿಂದ ಪರಿಚಿತರಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಗೆ ಕಾರಣರಾದವರ ವಿರುದ್ಧ ಕೊಲೆ ಯತ್ನ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಹಾಯಕ ಕಮಿಷನರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.