ಕರಾವಳಿಯಲ್ಲಿ ಮುಂಜಾನೆ ಮಂಜು, ತಂಪೆರೆದ ಇಬ್ಬನಿ
ಮಂಗಳೂರು, ಡಿಸೆಂಬರ್ 1: ನಗರ ಫುಲ್ ಕೂಲ್.. ಕೂಲ್. ಮಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮುಂಜಾನೆ ಭಾರೀ ಮಂಜು ಕವಿದ ವಾತಾವರಣ ಮಾತ್ರವಲ್ಲದೆ ಜತೆಗೆ ಚಳಿ, ಇಬ್ಬನಿಯನ್ನೂ ಕಾಣಬಹುದು. ಬಿಸಿಲಿನ ಝಳ ಹೇಳಿಕೊಳ್ಳುವಂತಿಲ್ಲ. ಮುಂಜಾನೆ ಮಂಜು, ಇಬ್ಬನಿ ಚಳಿ ಇದ್ದರೂ ಬುಧವಾರ ಬೆಳಿಗ್ಗೆ ಸುಮಾರು ಒಂಭತ್ತು ಗಂಟೆಯ ತನಕ ದಟ್ಟ ಮಂಜು ಹೊಗೆಯಾಡುತ್ತಿತ್ತು. ಬೆಳ್ಳಂಬೆಳಗ್ಗೆ ವಾಯು ವಿಹಾರಕ್ಕೆ ಬರುವವರು ಮಂಜಿನಲ್ಲಿ ಪಕ್ಕದಲ್ಲಿದ್ದವರನ್ನೇ ಕಾಣಲಾಗದ ಸ್ಥಿತಿಯಲ್ಲಿದ್ದರು.
ಹೆದ್ದಾರಿಯಲ್ಲಿ ವಾಹನಗಳ ಚಾಲಕರು ಹೆಡ್ ಲೈಟ್ ಹಾಕಿಕೊಂಡು ವಾಹನ ಚಲಾಯಿಸುವ ಪರಿಸ್ಥಿತಿ ಕಂಡು ಬಂತು. ಎಂದಿನಂತೆ ಬಾನಂಗಳದಿ ಉದಯಿಸುತ್ತಿದ್ದ ಸೂರ್ಯ ಮುಂಜಾನೆ 8 ಆದರೂ ತನ್ನ ದರ್ಶನ ನೀಡಲಿಲ್ಲ. ಆದರೆ, ಇಬ್ಬನಿ ಮಾತ್ರ ನಗರವನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇದಲ್ಲದೆ ಚಳಿ, ಸುರಿಯುವ ಇಬ್ಬನಿ ಮಧ್ಯೆ ಚಲಿಸುವ ಮೂಲಕ ಜನರು ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡರು. ಮಾರ್ಗಶಿರದ ಚಳಿಯನ್ನು ಎಲ್ಲರೂ ಸ್ವಾಗತಿಸಿದರು.[ನ್ಯೂ ಇಂಗ್ಲೆಂಡ್ನಲ್ಲಿ ಮನೆ ಮಾಡಿ ಸ್ನೋಗೆ ಅಂಜಿದೊಡೆಂತಯ್ಯ]

ದೊಡ್ಡ-ದೊಡ್ಡ ಕಟ್ಟಡಗಳನ್ನು ಸಹ ಇಬ್ಬನಿ ಆವರಿಸಿತ್ತು. ಹತ್ತು ಅಡಿ ಅಂತರದಲ್ಲಿ ಯಾರಿದ್ದಾರೆ? ಏನಿದೆ? ಎಂಬುದು ಕಾಣುವಷ್ಟರ ಮಟ್ಟಿಗೆ ಎಲ್ಲವೂ ಇಬ್ಬನಿಮಯವಾಗಿತ್ತು. ಮಳೆ ಇಲ್ಲದ ಮಂಜು ನಗರದ ಜನರನ್ನು ತಬ್ಬಿಬ್ಬುಗೊಳಿಸಿತು. ಮಂಜು ಕವಿದ ವಾತಾವರಣ ಕರಾವಳಿಯ ವಿವಿಧೆಡೆ, ಮಾತವಲ್ಲದೆ ಉಡುಪಿಯಲ್ಲೂ ಕಾಣಿಸಿತ್ತು.

ಇಂದು ಕೂಡಾ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣ ಮುಂದುವರಿದಿತ್ತು. ವಾತಾವರಣದ ವೈಪರೀತ್ಯದಿಂದ ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀಳುವುದಂತೂ ನಿಜ. ಈ ಹಿನ್ನಲೆಯಲ್ಲಿ ಬೆಳಿಗ್ಗೆ ಬೇಗ ಕೆಲಸಕ್ಕೆ ಹೋಗುವವರು , ವಾಕಿಂಗ್ ಹೋಗುವವರು ಸ್ವೆಟರ್ ಹಾಕಿ ಹೋಗುವುದು ಉತ್ತಮ. ಮಂಜು ಕವಿದ ವಾತಾವರಣ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೂ ಕಷ್ಟಕರ. ಮುಂಜಾನೆ ಹವಾಮಾನ ತಾಪಮಾನ ಸುಮಾರು 24 ಡಿಗ್ರಿ ಇತ್ತು, ಈಗ 32ಡಿಗ್ರಿ ಆಗ್ರಿದೆ. ಬಿಸಿಲಿನ ಬಿಸಿ ನಗರದಲ್ಲಿ ಕಾಣಿಸುತ್ತಿದೆ.

ಇನ್ನು ವನ್ ಇಂಡಿಯಾ ಜತೆ ಮಾತನಾಡಿದ ಡಾ. ವೆಂಕಟೇಶ್ (ವೈದ್ಯ) , ಬೆಳ್ಳಂಬೆಳಗ್ಗೆ ವಾಕಿಂಗ್ ಹೋಗುವವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು . ಉಬ್ಬಸ, ಡಯಾಬಿಟೀಸ್ ಇರುವವರು ಬೆಳಿಗ್ಗೆ ವಾಕಿಂಗ್ ಗೆ ಹೋಗುವಾಗ ಮಫ್ಲರ್ ಧರಿಸುವುದು ಒಳ್ಳೆಯದು, ಇಲ್ಲದಿದ್ದಲ್ಲಿ ಕನಿಷ್ಟ ಪಕ್ಷ ಶಾಲು ಹಾಕಿದರೂ ಆಗಬಹುದು. ವಾಕಿಂಗ್ ಮುಗಿಸಿ ಮನೆಗೆ ಹೋದ ಬಳಿಕ ಬಿಸಿ ನೀರು ಸ್ನಾನ ಅಥವಾ ಬಿಸಿ ನೀರು ಸೇವನೆ ಮಾಡುವುದು ಉತ್ತಮ. ಹವಾಮಾನ ವೈಪರೀತ್ಯದಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀಳದಂತೆ ಕಾಳಜಿ ವಹಿಸುವುದು ಒಳಿತು '' ಎಂದರು.












Click it and Unblock the Notifications