ಕುವೈತ್ನಿಂದ ಮತ್ತೆ ಮಂಗಳೂರು ಬಂದರಿಗೆ ಬಂತು 190 ಎಂಟಿ ಆಕ್ಸಿಜನ್ ನೌಕೆ
ಮಂಗಳೂರು, ಮೇ 25: ದೇಶದ ಕೋವಿಡ್ ಸೋಂಕಿತರ ಆಕ್ಸಿಜನ್ ಸಮಸ್ಯೆ ನೀಗಿಸಲು ಅರಬ್ ರಾಷ್ಟ್ರಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.
ಕುವೈತ್ನಿಂದ ಮತ್ತೆ ಆಕ್ಸಿಜನ್ ಮತ್ತು ಮೆಡಿಕಲ್ ಉಪಕರಣಗಳನ್ನು ಹೊತ್ತು ತಂದಿರುವ ಭಾರತೀಯ ನೌಕಾಸೇನೆಯ ಯುದ್ಧ ನೌಕೆ ಐಎನ್ಎಸ್ ಶಾರ್ದೂಲ್ ನವ ಮಂಗಳೂರು ಬಂದರನ್ನು ತಲುಪಿದೆ. ಎಡಿಜಿಪಿ ಪ್ರತಾಪ್ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಬರಮಾಡಿಕೊಂಡರು.
ಐಎನ್ಎಸ್ ಶಾರ್ದೂಲ್ನಲ್ಲಿ 190 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದ್ದು, ಯುದ್ಧ ನೌಕೆಯಿಂದ ಯಶಸ್ವಿಯಾಗಿ ಕೆಳಗಿಳಿಸಲಾಗಿದೆ. ಕುವೈತ್ ಮತ್ತು ಫುಝಿ ದೇಶದಿಂದ ಆಕ್ಸಿಜನ್ ನೆರವು ನೀಡಲಾಗಿದ್ದು, ನೌಕೆಯಲ್ಲಿ ಎರಡು ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್, 2 ಸೆಮಿ ಲಿಕ್ವಿಡ್, 1200 ಆಕ್ಸಿಜನ್ ಸಿಲಿಂಡರ್ಗಳು ಒಳಗೊಂಡಿದೆ.

ಅರಬ್ ರಾಷ್ಟ್ರಗಳಿಂದ ನಿರಂತರವಾಗಿ ಆಕ್ಸಿಜನ್ ನೆರವು ಸಿಗುತ್ತಿದ್ದು, ಇದು ಮಂಗಳೂರಿಗೆ ಬಂದ 5ನೇ ಭಾರತೀಯ ನೌಕಾ ಸೇನೆಯ ಯುದ್ಧ ನೌಕೆಯಾಗಿದೆ. ನೌಕೆಗಳು ಬಂದ ಸಂದರ್ಭದಲ್ಲಿ ನವ ಮಂಗಳೂರು ಬಂದರಿನ ಎಲ್ಲಾ ಕಾರ್ಯ ಚಟುವಟಿಕೆಗಳು ಸ್ಥಗಿತಗೊಳಿಸಿ ನೌಕೆಯಿಂದ ಆಕ್ಸಿಜನ್ ಲಿಫ್ಟ್ ಮಾಡುವ ಕೆಲಸ ನಡೆಸಲಾಯಿತು.
ಹೀಗೆ ಸಂಗ್ರಹಿಸಲಾದ ಆಕ್ಸಿಜನ್ ಸಿಲಿಂಡರ್ಗಳನ್ನು ರಾಜ್ಯ ಸರ್ಕಾರದ ಸೂಚನೆಯಂತೆ ಅವಶ್ಯಕತೆ ಇರುವ ಜಿಲ್ಲೆಗಳಿಗೆ ಕಳುಹಿಸುವ ಕೆಲಸವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾಡಲಿದೆ.












Click it and Unblock the Notifications