ಮಂಗಳೂರು ಬೆಳೆಸಿದ ಕೆನರಾ ಸಂಸ್ಥೆ ಸಂಸ್ಥಾಪಕರ ಜನ್ಮದಿನಾಚರಣೆ
ಮಂಗಳೂರು, ನವೆಂಬರ್ 20: ಮಂಗಳೂರಿನ ಶಿಕ್ಷಣ ಸಂಸ್ಥೆಗಳ ಮುಕುಟ ಪ್ರಾಯವಾಗಿರುವ ಕೆನರಾ ಸಮೂಹ ಸಂಸ್ಥೆಗಳ ಸಂಸ್ಥಾಪಕಾರದ ಅಮ್ಮೆಂಬಳ ಸುಬ್ಬರಾವ್ರವರ 169ನೇ ಜನ್ಮ ದಿನಾಚರಣೆಯನ್ನು ಕೆನರಾ ಸಂಸ್ಥಾಪಕರ ದಿನವೆಂದು ಆಚರಿಸಲಾಗಿದೆ.
ಮಂಗಳೂರು ನಗರದ ಹೃದಯ ಭಾಗವಾದ ಕೆನರಾ ಶಾಲಾ ಆವರಣದಲ್ಲಿ ಕೆನರಾ ಸಮೂಹ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆಯನ್ನು ಶುಕ್ರವಾರ (ನ.19) ದಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್ ಜನರಲ್ ಮ್ಯಾನೇಜರ್ ಯೋಗೀಶ್ ಆಚಾರ್ಯ ಭಾಗವಹಿಸಿ, ಅಮ್ಮೆಂಬಳ ಸುಬ್ಬರಾವ್ ಪ್ರತಿಮೆಗೆ ಪುಷ್ಪ ನಮನವನ್ನು ಸಲ್ಲಿಸಿ, ಅಮ್ಮೆಂಬಳ ಅವರ ಜೀವನ ಯಶೋಗಾಥೆಯನ್ನು ತೆರೆದಿಟ್ಟಿದ್ದಾರೆ.
ಕೆನರಾ ಎಂಬ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಪ್ರಚುರಪಡಿಸಿದ ಖ್ಯಾತಿ ಅಮ್ಮೆಂಬಳ ಸುಬ್ಬರಾವ್ ಅವರದ್ದಾಗಿದೆ. ಮಂಗಳೂರು ಹೊರವಲಯದ ಮುಲ್ಕಿಯ ಅಮ್ಮೆಂಬಳ ಎಂಬಲ್ಲಿ ಗುಡಿಸಲಿನಲ್ಲಿ ಜನಿಸಿದರೂ, ಅದ್ಭುತವಾದ ಸಾಧನೆಯ ಮೂಲಕ ಬಾನೆತ್ತರಕ್ಕೆ ಬೆಳೆದಿದ್ದಾರೆ. ತಂದೆ ವಕೀಲರಾಗಿದ್ದರಿಂದ ಬಡತನ ಮತ್ತು ಸಿರಿತನ ಇವೆರಡೆರನ್ನೂ ಸಮಾನವಾಗಿ ಕಂಡಿದ್ದಾರೆ.
ಅಮ್ಮೆಂಬಳ ಸುಬ್ಬರಾವ್ ಮಂಗಳೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಗೊಳಿಸಿ, ಬಿ.ಎ ಪದವಿಯನ್ನು ಪಡೆದು 1875ರಲ್ಲಿ ಬ್ಯಾಚುಲರ್ ಆಫ್ ಲಾ ಇದರಲ್ಲಿ ಪ್ರಥಮ ದರ್ಜೆ ಪಡೆದರು. 1876ರಲ್ಲಿ ತಂದೆ ನಿಧನರಾದ ಬಳಿಕ ಮಂಗಳೂರಿಗೆ ಬಂದು ವಕೀಲಿ ವೃತ್ತಿ ಆರಂಭಿಸಿದರು.
ಮಂಗಳೂರಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಶಕೆಯನ್ನು ಆರಂಭಿಸಬೇಕೆಂಬ ಉದ್ದೇಶದಿಂದ ಆಗಿನ ಶಿಕ್ಷಣ ಕ್ರಾಂತಿಕಾರಿಗಳಾದ ಯು.ಬಿ. ಶ್ರೀನಿವಾಸ ರಾವ್, ಬಿ. ಪದ್ಮನಾಭ ಬಾಳಿಗಾ, ಬಿ. ವಾಮನ ಬಾಳಿಗ, ಅರ್ಕಲ್ ವಾಸುದೇವರಾವ್ ಜೊತೆ ಸೇರಿ 1891 ಜೂನ್ 30ರಂದು ಕೆನರಾ ಹೈಸ್ಕೂಲ್ನ್ನು ಸ್ಥಾಪಿಸಿದರು. ಆ ಬಳಿಕ ಕೆನರಾ ಎಂಬ ಹೆಸರು ಹಿಂತುರುಗಿ ನೋಡಲೇ ಇಲ್ಲ. 1894ರಲ್ಲೇ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರೌಢ ಶಾಲೆಯನ್ನು ತೆರೆದರು ಎಂದು ಯೋಗೀಶ್ ಆಚಾರ್ಯ ಹೇಳಿದರು.
ಬಡವರ ಆರ್ಥಿಕ ಸಬಲೀಕರಣಕ್ಕಾಗಿ 1906ರ ಜುಲೈ 1ರಂದು ಕೆನರಾ ಹಿಂದೂ ಪರ್ಮನೆಂಟ್ ಫಂಡ್ ಲಿಮಿಟೆಡ್ ಸಂಸ್ಥೆ ಸ್ಥಾಪನೆ ಮಾಡಿದರು. ಮುಂದೆ ಇದೇ ಸಂಸ್ಥೆ ಹೆಮ್ಮರವಾಗಿ ಬೆಳೆದು ಇಂದು ಕೆನರಾ ಬ್ಯಾಂಕ್ ಆಗಿ ಬೆಳೆದಿದೆ.
ಅಂದು ಕೆನರಾ ಹೈಸ್ಕೂಲ್, ಕೆನರಾ ಹೆಣ್ಣುಮಕ್ಕಳ ಪ್ರೌಢ ಶಾಲೆ ಮತ್ತು ಕೆನರಾ ಬ್ಯಾಂಕ್ ಎಂಬ ಮೂರು ಸಸಿಗಳು ಸಾವಿರಾರು ಜನರಿಗೆ ನೆರಳಾಗಿದೆ. 15 ಶಿಕ್ಷಣ ಸಂಸ್ಥೆಗಳು, 600ಕ್ಕೂ ಅಧಿಕ ಶಿಕ್ಷಕರು, 9,500ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ವಿಶ್ವಾದ್ಯಾಂತ 9877 ಕೆನರಾ ಬ್ಯಾಂಕ್ ಶಾಖೆಗಳು ಬೆಳೆದು ನಿಂತಿದೆ ಎಂದು ಅಮ್ಮೆಂಬಳ ಸುಬ್ಬರಾವ್ ಹುಟ್ಟು ಹಾಕಿದ ಸಂಸ್ಥೆಯ ಸಾಧನೆಯನ್ನು ಯೋಗೀಶ್ ಆಚಾರ್ಯ ಕೊಂಡಾಡಿದ್ದಾರೆ.
ಈ ಸಂದರ್ಭದಲ್ಲಿ ಕೆನರಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಎಂ. ಅಣ್ಣಪ್ಪ ಪೈ, ಕಾರ್ಯದರ್ಶಿ ಎಂ. ರಂಗನಾಥ ಭಟ್, ಅಮ್ಮೆಂಬಳ ಸುಬ್ಬರಾವ್ ರಾವ್ ಪೈ ಮೇ ಮೋರಿಯಲ್ ಫಂಡ್ ಇದರ ಅಧ್ಯಕ್ಷರಾದ ಆರ್.ಎನ್. ಸುಜೀರ್, ಕಾರ್ಯದರ್ಶಿ ಶ್ರೀನಿವಾಸ ಕಾಮತ್, ಕೆನರಾ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ಮುಖ್ಯ ಅಧ್ಯಾಪಕರು, ಶಿಕ್ಷಕ- ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಉಪಸ್ಥಿತರಿದ್ದರು.
ಇದೇ ವೇಳೆ 2019- 20 ಹಾಗೂ 2020- 21ನೇ ಸಾಲಿನ ಶೈಕ್ಷಣಿಕ ಹಾಗೂ ಇತರ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
Recommended Video