ಮಂಗಳೂರು ಹಿಜಾಬ್ ವಿವಾದ: ಟಿಸಿ ಪಡೆದ 145 ವಿದ್ಯಾರ್ಥಿನಿಯರು
ಮಂಗಳೂರು, ಆಗಸ್ಟ್ 22: ಕರಾವಳಿಯಲ್ಲಿ ಹಿಜಾಬ್ ಸಮರದಿಂದ 16% ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನಿಂದ ವರ್ಗಾವಣೆ ಪಡೆದಿರುವ ವಿಚಾರ ಮಾಹಿತಿ ಹಕ್ಕಿನಡಿ ಬಹಿರಂಗವಾಗಿದೆ. ಕಾಲೇಜು ಮತ್ತು ತರಗತಿ ಯೊಳಗೆ ಹಿಜಾಬ್ಗೆ ಅವಕಾಶ ನೀಡಬೇಕು ಅಂತಾ ಒತ್ತಾಯಿಸಿದ ವಿದ್ಯಾರ್ಥಿನಿಯರು ಟಿಸಿ ಪಡೆಯಬಹುದೆಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿಎಸ್ ಯಡಪಡಿತ್ತಾಯ ಹೇಳಿದ ಬೆನ್ನಲ್ಲೇ ಕಾಲೇಜು ಗಳಿಂದ ಟಿಸಿ ಪಡೆಯುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದೆ. ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲೆಯ ಸುಮಾರು 16% ವಿದ್ಯಾರ್ಥಿನಿಯರು ಕಾಲೇಜುಗಳಿಂದ ವರ್ಗಾವಣೆ ಪತ್ರ ಪಡೆದಿದ್ದಾರೆ ಎಂಬ ಮಾಹಿತಿಯನ್ನು ಶಿಕ್ಷಣ ಇಲಾಖೆ ನೀಡಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 900 ವಿದ್ಯಾರ್ಥಿನಿಯರ ಪೈಕಿ 145 ಮಂದಿ ವಿದ್ಯಾರ್ಥಿನಿಯರು ಟಿಸಿ ಪಡೆದಿರುವ ಬಗ್ಗೆ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಎರಡನೇ, ಮೂರನೇ, ನಾಲ್ಕನೇ ಹಾಗೂ ಐದನೇ ಸೆಮಿಸ್ಟರ್ನ ವಿದ್ಯಾರ್ಥಿನಿಯರು ಟಿಸಿ ಪಡೆದು ಹೊರನಡೆದಿದ್ದಾರೆ ಎಂದು ತಿಳಿದುಬಂದಿದೆ.
ಬ್ರಹ್ಮಗಿರಿ ವೃತ್ತದಲ್ಲಿ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ಕೇಳಿದ ಯಶ್ ಪಾಲ್ ಸುವರ್ಣ
ಶಿಕ್ಷಣವನ್ನು ಮೊಟಕುಗೊಳಿಸಿದ ಕೆಲವರು
ವರ್ಗಾವಣೆ ಪಡೆದವರಲ್ಲಿ ಖಾಸಗಿ ಕಾಲೇಜು ಶುಲ್ಕ ಪಾವತಿಸಲು ಶಕ್ತರಾದವರು ಹಿಜಾಬ್ ಅನುಮತಿಸುವ ಖಾಸಗಿ ಕಾಲೇಜಿಗೆ ಸೇರಿಕೊಂಡರೆ, ಆರ್ಥಿಕ ತೊಂದರೆಯಿದ್ದ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ ಎಂಬ ಅಂಶ ಕೂಡ ವರದಿಯಲ್ಲಿ ಬೆಳಕಿಗೆ ಬಂದಿದೆ.
ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಕಾಲೇಜಿನಲ್ಲೇ 35 ಮಂದಿಗೆ ಟಿಸಿ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ 39 ಸರಕಾರಿ ಕಾಲೇಜುಗಳಿದ್ದರೆ, 36 ಅನುದಾನಿತ ಕಾಲೇಜುಗಳಿವೆ. ಸರಕಾರಿ ಕಾಲೇಜಿನಿಂದ 34%, ಅನುದಾನಿತ ಕಾಲೇಜಿನಿಂದ 13% ವಿದ್ಯಾರ್ಥಿನಿಯರು ವರ್ಗಾವಣೆ ಪತ್ರ ಪಡೆದಿದ್ದಾರೆ ಎಂದು ಆರ್ ಟಿ ಐ ಪ್ರಶ್ನೆಗೆ ಶಿಕ್ಷಣ ಇಲಾಖೆ ಉತ್ತರ ನೀಡಿದೆ. ಅದರಲ್ಲೂ ಮಂಗಳೂರಿನ ರಥಬೀದಿಯಲ್ಲಿರುವ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಸರಕಾರಿ ಕಾಲೇಜಿನಲ್ಲಿ ಸುಮಾರು 35 ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನಿಂದ ವರ್ಗಾವಣೆ ಪತ್ರ ಪಡೆದಿದ್ದಾರೆ. ಅನುದಾನಿತ ಕಾಲೇಜಿಗೆ ಹೋಲಿಸಿದರೆ ಸರಕಾರಿ ಕಾಲೇಜಿನಲ್ಲಿಯೇ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಟಿಸಿ ಪಡೆಯಲು ಸಚಿವ ಬಿ.ಸಿ ನಾಗೇಶ್ ಕಾರಣ
ವಿದ್ಯಾರ್ಥಿನಿಯರು ಟಿಸಿ ಪಡೆಯಲು ಮುಖ್ಯ ಕಾರಣ ಸಚಿವ ಬಿ.ಸಿ ನಾಗೇಶ್ ಅಂತಾ ಹಿಜಾಬ್ ಹೋರಾಟಗಾರ್ತಿ ಗೌಸಿಯಾ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿನಿ ಗೌಸಿಯಾ, ಹಿಜಾಬ್ ಧರಿಸಲು ಅವಕಾಶ ಇಲ್ಲದ ಕಾರಣ ಕಾಲೇಜಿನಿಂದ ಟಿಸಿ ಪಡೆದಿದ್ದೇವೆ. ಈ ಎಲ್ಲಾ ಘಟನೆಗಳಿಗೆ ಕಾರಣ ಸಚಿವ ಬಿ.ಸಿ ನಾಗೇಶ್ ಆಗಿದ್ದಾರೆ.
ಸಂವಿಧಾನ ನೀಡಿರುವ ಹಕ್ಕಿನ ಪ್ರಕಾರ ಶಿಕ್ಷಣ ಪಡೆಯಲು ನಾಗೇಶ್ ಬಿಡಲಿಲ್ಲ. ತುಂಡು ಬಟ್ಟೆಯನ್ನೇ ದೊಡ್ಡ ವಿವಾದವನ್ನಾಗಿ ನಾಗೇಶ್ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ನಷ್ಟವಾಗಲಿದೆ. ಹಲವು ಸರಕಾರಿ ಕಾಲೇಜುಗಳು ಮುಚ್ಚಲಿದೆ. ಇಡೀ ರಾಜ್ಯಾದ್ಯಂತ 30% ಅಧಿಕ ವಿದ್ಯಾರ್ಥಿನಿಯರು ಕಾಲೇಜು ಬಿಟ್ಟಿದ್ದಾರೆ. ರಾಜ್ಯಕ್ಕೆ ಇದು ಜಲ್ವಂತ ಸಮಸ್ಯೆಯಾಗಲಿದೆ" ಎಂದು ಕಾಲೇಜಿನಿಂದ ಟಿಸಿ ಪಡೆದ ವಿದ್ಯಾರ್ಥಿನಿ ಗೌಸಿಯಾ ಹೇಳಿದ್ದಾರೆ.
ಹಿಜಾಬ್ಗೆ ಅವಕಾಶ ಇರುವ ಕಾಲೇಜುಗಳಿಗೆ ಹೋಗಲಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಡುಪಿ ಸರಕಾರಿ ಬಾಲಕಿಯರ ಕಾಲೇಜಿನ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ, ವಿದ್ಯಾರ್ಥಿನಿಯರು ಮೊದಲೇ ಈ ತೀರ್ಮಾನ ಕೈಗೊಂಡಿದ್ದರೆ,ಇಷ್ಟು ದೊಡ್ಡ ವಿವಾದ ಆಗುತ್ತಿರಲಿಲ್ಲ. ನಿಯಮ ಪ್ರಕಾರ ತರಗತಿಗೆ ಬರಲು ಸಾಧ್ಯವಾಗದವರು ವರ್ಗಾವಣೆ ಪಡೆದು , ಹಿಜಾಬ್ಗೆ ಅವಕಾಶ ಇರುವ ಕಾಲೇಜುಗಳಿಗೆ ಹೋಗಲಿ ಅಂತಾ ಹೇಳಿದ್ದಾರೆ.