ಕುಸಿಯುವ ಭೀತಿಯಲ್ಲಿ ತೆಂಕಿಲ ದರ್ಖಾಸು ಗೇರು ಗುಡ್ಡ; 11 ಕುಟುಂಬಗಳು ಸ್ಥಳಾಂತರ
ಮಂಗಳೂರು, ಆಗಸ್ಟ್ 14: ಪುತ್ತೂರಿನ ತೆಂಕಿಲ ದರ್ಖಾಸು ಎಂಬಲ್ಲಿ ಕಾಣಿಸಿಕೊಂಡಿದ್ದ ಭೂಮಿ ಬಿರುಕಿನ ಗಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿದೆ.
ಇಲ್ಲಿಯ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿದ ಗೇರು ತೋಟವಿರುವ ಗುಡ್ಡದಲ್ಲಿ ಕಾಣಿಸಿಕೊಂಡಿರುವ ಬಿರುಕಿನ ಗಾತ್ರ ಹೆಚ್ಚಾಗುತ್ತಿದ್ದು, ಮಣ್ಣಿನ ಪದರ ಕೆಳಭಾಗದಲ್ಲಿ ಕುಗ್ಗಿದೆ. ಈ ಹಿನ್ನೆಲೆಯಲ್ಲಿ ಗುಡ್ಡ ಕುಸಿಯುವ ಭೀತಿ ಎದುರಿಸುತ್ತಿರುವ ಈ ಭಾಗದ ಬಹುತೇಕ ಕುಟುಂಬಗಳು ಮನೆಯನ್ನು ತೊರೆದು ಬೇರೆಡೆಗೆ ಸ್ಥಳಾಂತರಗೊಂಡಿವೆ.
ಗುಡ್ಡದ ತಪ್ಪಲು ಪ್ರದೇಶದ ಮಧ್ಯಭಾಗದಲ್ಲಿ 200 ಮೀಟರ್ ನಷ್ಟು ಉದ್ದವಾಗಿ ಕಾಣಿಸಿಕೊಂಡಿದ್ದ ಬಿರುಕು ಒಂದು ಇಂಚಿನಷ್ಟು ಅಗಲವಿತ್ತು. ಈಗ 3 ಇಂಚಿನಷ್ಟು ವಿಸ್ತಾರಗೊಂಡಿದೆ. ಅಲ್ಲದೆ ಮಣ್ಣಿನ ಕೆಳಭಾಗದ ಪದರವೂ 3 ಇಂಚಿನಷ್ಟು ಕೆಳಕ್ಕೆ ಸರಿದಿದೆ. ಗುಡ್ಡದ ಮೇಲ್ಭಾಗದ ತಪ್ಪಲಿನಲ್ಲಿಯೂ ನೇರವಾಗಿ ಹಾಗೂ ಅಡ್ಡವಾಗಿ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿದೆ.

ಇಲ್ಲಿಯ 11 ಕುಟುಂಬಗಳ ಪೈಕಿ 5 ಕುಟುಂಬಗಳಿಗೆ ಪುತ್ತೂರಿನ ನಗರಸಭೆಯ ಸಮುದಾಯ ಭವನದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಉಳಿದ ಕುಟುಂಬಗಳು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದುಕೊಂಡಿವೆ.
ನಿನ್ನೆ ಮಳೆ ಪ್ರಮಾಣ ಕಡಿಮೆಯಾಗಿದ್ದ ಕಾರಣ, ಇನ್ನೇನೂ ದೊಡ್ಡ ಮಟ್ಟದ ಸಮಸ್ಯೆಯಾಗದು ಎಂದು ಸುತ್ತಮುತ್ತಲ ನಿವಾಸಿಗಳು ಭಾವಿಸಿದ್ದರು. ಆದರೆ ನಿನ್ನೆ ಸಂಜೆಯಿಂದ ಮತ್ತೆ ಮಳೆ ಆರಂಭವಾಗಿದ್ದು, ಭೀತಿ ಹೆಚ್ಚಾಗಿದೆ.












Click it and Unblock the Notifications