ಮಕ್ಕಳು ನಿದ್ದೆ ಮಾಡ್ತಿದ್ರೆ ಮೇಷ್ಟ್ರು ಪೋನ್ ಮಾಡ್ತಾರೆ!
ಮಂಗಳೂರು, ಜೂ. 19 : ಮಂಗಳೂರಿನಲ್ಲಿ ಇನ್ನು ಮುಂದೆ ಬೆಳ್ಳಬೆಳಗ್ಗೆ ಮನೆಯ ಫೋನ್ ಗಳು ರಿಂಗಣಿಸಲಿವೆ. ಹಲೋ.. ಮಕ್ಕಳು ಎದ್ದಿದ್ದಾರಾ? ಓದುತ್ತಿದ್ದಾರಾ? ಮಲಗಿದ್ದರೆ ಎಬ್ಬಿಸಿ ಓದಲು ಹೇಳಿ ಎಂದು ಫೋನ್ ಮಾಡಿದವರು ಹೇಳುತ್ತಾರೆ. ಹೀಗೆ ಮುಂಜಾನೆ 5 ಗಂಟೆಗೆ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿರುವ ಮನೆಗಳಿಗೆ ಶಿಕ್ಷರು ಫೋನ್ ಮಾಡಲಿದ್ದಾರೆ.
ಎಸ್ಎಸ್ಎಲ್ ಸಿ ಫಲಿತಾಂಶ ಬಂದಾಗ ಸಾಮಾನ್ಯವಾಗಿ ಮೊದಲ ಸ್ಥಾನದಲ್ಲಿರುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಕೆಳಪೆ ಸಾಧನೆ ಮಾಡಿದೆ. ಆದ್ದರಿಂದ ಮುಂದಿನ ಬಾರಿ ಶೇ 100ರಷ್ಟು ಫಲಿತಾಂಶ ಬರಬೇಕು ಎಂದು ಶಿಕ್ಷಣ ಇಲಾಖೆ ಕಾರ್ಯ ಯೋಜನೆ ತಯಾರಿಸಿದೆ. ಅದರ ಒಂದು ಭಾಗವೇ ಬೆಳ್ಳಂಬೆಳಗ್ಗೆ ವಿದ್ಯಾರ್ಥಿಗಳಿಗೆ ಫೋನ್ ಕರೆ ಬರುವುದು.

ಬೆಳಗ್ಗೆಯ ಸಕ್ಕರೆ ನಿದ್ದೆ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಶಿಕ್ಷಕರ ಈ ಕರೆ ಎಬ್ಬಿಸಲಿದೆ. ಪ್ರತಿ ವಿದ್ಯಾರ್ಥಿಯ ಹೆತ್ತವರಿಗೆ ಶಿಕ್ಷಕರು ಈ ರೀತಿ ದೂರವಾಣಿ ಕರೆ ಮಾಡಲಿದ್ದಾರೆ. ಮಕ್ಕಳಿಗೆ ಸಂತಸದ ವಿಚಾರವೆಂದರೆ ಜುಲೈ ತಿಂಗಳಿನಿಂದ ಶಿಕ್ಷಕರು ಕರೆ ಮಾಡಲು ಆರಂಭಿಸಲಿದ್ದಾರೆ. ಮಕ್ಕಳಿಗೆ ಕರೆ ಮಾಡಲು ಶಿಕ್ಷಕರು ಸಹ 5 ಗಂಟೆಗೆ ಏಳುಬೇಕಾಗುತ್ತದೆ. [ಎಸ್ಎಸ್ಎಲ್ಸಿ ಫಲಿತಾಂಶದ Highlights]
ಶಿಕ್ಷಣ ಸಚಿವರ ಐಡಿಯಾ : ಕೆಲವು ದಿನಗಳ ಹಿಂದೆ ಮಂಗಳೂರಿಗೆ ಭೇಟಿ ನೀಡಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಕೆಲವು ಕಡೆ ಪಾಲಕರು ಬೇಗ ಏಳುತ್ತಿಲ್ಲ. ಆದ್ದರಿಂದ ಮಕ್ಕಳು ಬೇಗ ಎದ್ದು ಓದುತ್ತಿಲ್ಲ ಎಂದು ಹೇಳಿದ್ದರು. [ನಿದ್ದೆಗೆಟ್ಟು ವಿಶ್ವಕಪ್ ನೋಡಿ ಪ್ರಾಣ ತೆತ್ತರು]
ಆದ್ದರಿಂದ ಸಚಿವ ಕಿಮ್ಮನೆ ರತ್ನಾಕರ್ ಶಿಕ್ಷಕರು ಮಕ್ಕಳಿಗೆ ಕರೆ ಮಾಡಿ ಎಬ್ಬಿಸುವ ವಿನೂತನ ಪದ್ಧತಿ ಜಾರಿಗೊಳಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದರಂತೆ. ಸದ್ಯ ಇದು ಜುಲೈ ತಿಂಗಳಿನಿಂದ ಜಾರಿಗೆ ಬರಲಿದೆ. ಆದರೆ, ಮನೆಯಲ್ಲಿ ಫೋನ್ ಇಲ್ಲದ ಮಕ್ಕಳನ್ನು ಹೇಗೆ ಎಬ್ಬಿಸುತ್ತಾರೆ ಎಂಬುದು ಮಾತ್ರ ನಿಗೂಢವಾಗಿದೆ.
ಕಾರ್ಯಾಚರಣೆ ಹೇಗೆ? : ಈ ಕಾರ್ಯಾಚರಣೆಯ ಪ್ಲಾನ್ ಈಗಾಗಲೇ ಸಿದ್ಧಗೊಂಡಿದೆ. ಆಯಾ ಶಾಲೆಯ ಒಬ್ಬೊಬ್ಬ ಶಿಕ್ಷಕರಿಗೆ ಇಂತಿಷ್ಟು ಮಕ್ಕಳು ಎಂದು ನಿಗದಿಪಡಿಸಲಾಗುತ್ತದೆ. ಆ ಮಕ್ಕಳ ಜವಾಬ್ದಾರಿ ಶಿಕ್ಷಕರದ್ದು. ಆದ್ದರಿಂದ ಅವರು ಮಕ್ಕಳ ಮನೆಗೆ ಫೋನ್ ಮಾಡಿ ಅವರನ್ನು ಎಬ್ಬಿಸಿ, ಓದಲು ಪ್ರೇರಪಣೆ ನೀಡಬೇಕು.
ಹೆಚ್ಚುವರಿ ಪಾಠ : ಸಂಜೆ 4.30ಕ್ಕೆ ಶಾಲೆ ಬಿಟ್ಟ ನಂತರ ಶಿಕ್ಷಕರು ನೇರವಾಗಿ ಮನೆಗೆ ಹೋಗುವಂತಿಲ್ಲ. ಓದಿನಲ್ಲಿ ಹಿಂದುಳಿವ ಮಕ್ಕಳ ಪಟ್ಟಿ ತಯಾರಿಸಿ, ಅಂಥವರಿಗೆ ಪ್ರತಿ ದಿನ 2 ಗಂಟೆ ಹೆಚ್ಚುವರಿ ಪಾಠ ಮಾಡಬೇಕು. ಬೆಳಗ್ಗೆ ತರಗತಿಗೆ ಮೊದಲ ಒಂದು ಗಂಟೆ ಹಾಗೂ ಸಂಜೆ ತರಗತಿಯ ನಂತರ ಒಂದು ಗಂಟೆ ಶಿಕ್ಷಕರು ಈ ಪಾಠವನ್ನು ಮಾಡಬೇಕಾಗುತ್ತದೆ.












Click it and Unblock the Notifications