ನಟಿ ರಾಧಿಕಾ ಮನೆ ಕಳ್ಳತನ ಸ್ಕೆಚ್, ಜಸ್ಟ್ ಮಿಸ್!
ಮೂಡುಬಿದಿರೆ, ಜೂ.26: ಲಕ್ಷಾಂತರ ರು ಮೌಲ್ಯ ಕರಿಮೆಣಸಿನ ರಾಶಿಯನ್ನು ಹೊತ್ತೊಯ್ದಿದ್ದ ಏಳು ಕಳ್ಳರು ಚಿತ್ರನಟಿ ರಾಧಿಕಾ ಕುಮಾರಸ್ವಾಮಿ ಅವರ ಮನೆ ದರೋಡೆಗೂ ಸ್ಕೆಚ್ ಹಾಕಿದ್ದರೂ ಎಂಬ ಅಂಶ ಬೆಳಕಿಗೆ ಬಂದಿದೆ. ಇಲ್ಲಿನ ಪುತ್ತಿಗೆ ಗ್ರಾಮದ ಬಳಿ ಸಿಕ್ಕಿ ಬಿದ್ದ ಕಳ್ಳರು ವಿಚಾರಣೆ ಸಂದರ್ಭದಲ್ಲಿ ಈ ವಿಷಯ ಪೊಲೀಸರೆದುರು ಬಾಯ್ಬಿಟ್ಟಿದ್ದಾರೆ.
ಹಂಡೇಲು ಎಂಬಲ್ಲಿರುವ ಗೋಡೌನ್ ಒಂದರಿಂದ ಎಂಟೂವರೆ ಲಕ್ಷ ವೌಲ್ಯದ ಕರಿಮೆಣಸನ್ನು ಕಳವುಗೈದಿರುವ 7 ಮಂದಿ ಕಳ್ಳರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭ ಚಿತ್ರನಟಿ ರಾಧಿಕಾ ಕುಮಾರಸ್ವಾಮಿ ಮನೆ ದರೋಡೆಗೆ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.
ಮೂಡುಬಿದಿರೆ ಸಮೀಪದ ಹಂಡೇಲು ಶಾಲೆ ಬಳಿಯಿರುವ ಕೆ.ಎಂ.ಬಿ. ಎಂಟರ್ ಪ್ರೈಸಸ್ನ ಗುಜರಾತ್ ಮೂಲದ ಮುಖೇಶ್ ಕುಮಾರ್ ಪಾಟೀಲ್ ಎಂಬವರಿಗೆ ಸೇರಿದ ಗೋಡೌನ್ನಿಂದ 60 ಕೆ.ಜಿ ತೂಕವಿರುವ 21 ಕರಿ ಮೆಣಸಿನ ಗೋಣಿಗಳನ್ನು ಜೂ.21ರಂದು ಕಳ್ಳರು ಕದ್ದಿದ್ದು, ಮಂಗಳವಾರ ಮುಂಜಾನೆ ಗೋಡೌನ್ನ ಕಾರ್ಮಿಕರ ಬಂದು ನೋಡಿದಾಗ ಶಟರ್ನ ಬೀಗ ಮುರಿದಿದ್ದು, ಕರಿಮೆಣಸು ಕಳವುಗೈದಿರುವುದು ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಡೌನ್ನಲ್ಲಿ ಕರಿಮೆಣಸು ಚೀಲಗಳನ್ನು ಹಿಂದೆ ಲೋಡ್ ಮಾಡುತ್ತಿದ್ದ ಕಲ್ಲಮುಂಡ್ಕೂರಿನ ಹರೀಶ್ ಬಗ್ಗೆ ವಾರಸುದಾರರು ಸಂಶಯ ವ್ಯಕ್ತಪಡಿಸಿದ್ದರು.

ರಾಧಿಕಾ ಮನೆ ದರೋಡೆಗೆ ಸಂಚು: ಕರಿಮೆಣಸು ಕಳವು ಮಾಡಿದ ಇದೇ ತಂಡ ಚಿತ್ರನಟಿ ರಾಧಿಕಾ ಕುಮಾರಸ್ವಾಮಿಯವರ ಬಂಟ್ವಾಳದ ಸಾಲೆತ್ತೂರಿನಲ್ಲಿರುವ ಮನೆ ದರೋಡೆ ಮಾಡುವ ದೊಡ್ಡ ಮಟ್ಟದ ಸಂಚು ರೂಪಿಸಿದ್ದರು. ಈ ಬಗ್ಗೆ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದು, ಇನ್ನಿಬ್ಬರನ್ನು ವೆಂಕಟೇಶ್ ಪ್ರಸನ್ನ ನೇತೃತ್ವದ ಪೊಲೀಸರ ತಂಡ ಮಂಗಳೂರಿನಲ್ಲಿ ಬಂಧಿಸಿದೆ. ಬಂಧಿತರನ್ನು ಬಜಗೋಳಿ ನಿವಾಸಿ ರವಿ ಹಾಗೂ ಮಂಗಳೂರು ನಿವಾಸಿ ಮಂಜುಳಾ ಎಂದು ಗುರುತಿಸಲಾಗಿದೆ.
ಮಂಗಳೂರಿನ ಬಸ್ವೊಂದರಲ್ಲಿದ್ದ ರವಿ ಹಾಗೂ ಮಂಜುಳಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತೀವ್ರ ವಿಚಾರಣೆ ನಡೆಸುತ್ತಿ ದ್ದಾರೆ. ಕೆಲ ದಿನಗಳ ಹಿಂದೆಯೇ ರಾಧಿಕಾ ಮನೆ ಯಲ್ಲಿ ದರೋಡೆ ನಡೆಸಲು ತಂಡವೊಂದು ಸಂಚು ರೂಪಿಸಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸಾಲೆತ್ತೂರು ಪರಿಸರದಲ್ಲಿ ವಿಶೇಷ ಗಸ್ತು ಏರ್ಪಡಿಸಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿದಿದೆ.
ನಟಿ ರಾಧಿಕಾರ ನಿವಾಸ ಗ್ರಾಮೀಣ ಪ್ರದೇಶವಾದ ಸಾಲೆತ್ತೂರಿನಲ್ಲಿದ್ದು, ಇವರ ಮನೆ ಸಹಿತ ಈ ಪರಿಸರದ ಕೆಲವು ಶ್ರೀಮಂತರ ಮನೆಗಳ ವಿಳಾಸ ಹಾಗೂ ಕೆಲ ಜ್ಯುವೆಲ್ಲರಿ ಮಳಿಗೆಯ ಹೆಸರು ಆರೋಪಿಗಳ ಕೈಯ ಲ್ಲಿದ್ದ ಲಿಸ್ಟ್ನಲ್ಲಿತ್ತೆಂದು ತಿಳಿದು ಬಂದಿದೆ. ಕಳೆದ 3 ದಿನಗಳಿಂದ ಅಪರಿಚಿತ ವಾಹನ ವೊಂದು ಸಾಲೆತ್ತೂರು, ಕಲ್ಲಡ್ಕ ಪರಿಸರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿತ್ತು ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸಿಐ ಬೆಳಿಯಪ್ಪ ಮತ್ತು ನಗರ ಪೊಲೀಸರು ಈ ಭಾಗದಲ್ಲಿ ತಮ್ಮ ಗಸ್ತು ಕಾರ್ಯವನ್ನು ಚುರುಕು ಗೊಳಿಸಿದ್ದರು. ಇದೀಗ ದರೋಡೆಕೋರರ ಪೈಕಿ ಇಬ್ಬರನ್ನು ನಗರ ಪೊಲೀಸರು ಬಂಧಿ ಸುವುದರೊಂದಿಗೆ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದಂತಾಗಿದೆ.












Click it and Unblock the Notifications