ಎತ್ತಿನ ಹೊಳೆ ಯೋಜನೆ : ಜನಪ್ರತಿನಿಧಿಗಳಿಗೆ 10 ಪ್ರಶ್ನೆಗಳು
ಮಂಗಳೂರು, ಸೆಪ್ಟೆಂಬರ್ 21 : ಎತ್ತಿನ ಹೊಳೆ ಯೋಜನೆ ವಿರುದ್ಧ ಮಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ 'ಉತ್ತರ ನೀಡಿ' ಕಾರ್ಯಕ್ರಮಕ್ಕೆ 8 ಮಂದಿ ಜನಪ್ರತಿನಿಧಿಗಳ ಗೈರು ಹಾಜರಾಗಿದ್ದರು. ತಡವಾಗಿ ಬಂದವರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರಿಗೆ ಸಮಾಧಾನಕರ ಉತ್ತರ ದೊರಕಲಿಲ್ಲ.
ಎತ್ತಿನಹೊಳೆ ಯೋಜನೆಯ ವಿರುದ್ಧ ಸಹ್ಯಾದ್ರಿ ಸಂಚಯ ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಹೋರಾಟದ ಅಂಗವಾಗಿ ನಗರದ ರೋಶನಿ ನಿಲಯದಲ್ಲಿ 'ಎತ್ತಿನಹೊಳೆ ಉತ್ತರ ನೀಡಿ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಮೊಯ್ದಿನ್ ಬಾವ, ಎಸ್.ಅಂಗಾರ, ಕ್ಯಾ. ಗಣೇಶ್ ಕಾರ್ಣಿಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. [ಎತ್ತಿನಹೊಳೆ ಯೋಜನೆಗೆ ತಾತ್ಕಾಲಿಕ ತಡೆಯಾಜ್ಞೆ]
ಆರೋಗ್ಯ ಸಚಿವ ಯು.ಟಿ. ಖಾದರ್ ಅವರು 'ಎತ್ತಿನಹೊಳೆ ಬಗ್ಗೆ ಕೇಳಲಾದ 10 ಪ್ರಶ್ನೆಗಳಿಗೆ ಉತ್ತರ ನೀಡದೆ ಸಂಬಂಧಪಟ್ಟ ಇಲಾಖೆಯಿಂದ ಬಂದ ಲಿಖಿತವಾಗಿರುವ ಉತ್ತರವನ್ನು ಸಭೆಗೆ ನೀಡಿದರು. 'ತಾನು ತಾಂತ್ರಿಕ ಪರಿಣತನಲ್ಲ ಎಂದು ಮಾಹಿತಿ ನೀಡಿದ ಖಾದರ್, ಈ ಹೋರಾಟದಲ್ಲಿ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಮುಂದೆ ಹೋಗಬೇಕು' ಎಂದು ಸಲಹೆ ನೀಡಿದರು.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, 'ಎತ್ತಿನಹೊಳೆ ಯೋಜನೆಯ ಹೋರಾಟವನ್ನು ನಿಲ್ಲಿಸಬೇಡಿ. ಈ ಹೋರಾಟವನ್ನು ಮುಂದುವರಿಸಬೇಕು. ಹೋರಾಟಗಾರರಲ್ಲೂ ಸ್ಪಷ್ಟ ಗುರಿಯಿರಬೇಕು. ತಾನು ಕಾನೂನು ಹೋರಾಟಕ್ಕೂ ಬೆಂಬಲ ನೀಡುವುದಾಗಿ' ತಿಳಿಸಿದರು. [ಚಿತ್ರಗಳು : ನೇತ್ರಾವತಿ ಉಳಿಸಲು ಬೃಹತ್ ಪ್ರತಿಭಟನೆ]
ಶಾಸಕ ಬಿ.ಎ.ಮೊಯ್ದಿನ್ ಬಾವ ಮಾತನಾಡಿ, 'ಎತ್ತಿನಹೊಳೆ ಯೋಜನೆಯಿಂದ ಆಗುವ ಸಮಸ್ಯೆ ಬಗ್ಗೆ ಹೋರಾಟಗಾರರಿಗೆ ಇರುವ ನೋವು ನನ್ನಲ್ಲಿಯೂ ಇದೆ. ನನ್ನ ವಿಧಾನಸಭಾ ಕ್ಷೇತ್ರದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಜಿಲ್ಲೆಗೆ ಎದುರಾಗಿರುವ ಈ ಸಮಸ್ಯೆ ನಿವಾರಣೆಯಾಗಬೇಕು' ಎಂದರು.