ಮಂಡ್ಯದಲ್ಲಿ ಸಿದ್ದರಾಮಯ್ಯ, ಎಂ.ಬಿ ಪಾಟೀಲ್ ಅಣಕು ತಿಥಿ ಆಚರಣೆ
ಮದ್ದೂರು, ಆಗಸ್ಟ್ 2: ಕೆ.ಆರ್.ಎಸ್ ನಿಂದ ನಾಲೆಗಳಿಗೆ ನೀರು ಬಿಡಲು ಆಗ್ರಹಿಸಿ 'ಕಸ್ತೂರಿ ಕರ್ನಾಟಕ ಜನಪರ ವೇದಿಕೆ' ನಡೆಸುತ್ತಿರುವ ಅಹೋರಾತ್ರಿ ಧರಣಿ 26ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಸಂಘಟನೆ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರ ಅಣಕು ತಿಥಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಜಮೀನಿಗೆ ನೀರು ಹರಿಸಲು ಒತ್ತಾಯಿಸಿ 24 ದಿನದಿಂದ ಪ್ರತಿಭಟನೆ
ತಾಲೂಕಿನ ದೇಶಹಳ್ಳಿ ಕೆರೆಯಂಗಳದಲ್ಲಿ ನಡೆದ ಪ್ರತಿಭಟನೆಯಲ್ಲಿ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ಗೌಡ ಅವರ ನೇತೃತ್ವದಲ್ಲಿ ದೇಶಹಳ್ಳಿ, ವಳಗೆರೆಹಳ್ಳಿ, ಚಾಮನಹಳ್ಳಿ ಗ್ರಾಮಗಳ ರೈತರು ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ. ಪಾಟೀಲ್ ಅವರ ಸಮಾಧಿಗಳನ್ನು ನಿರ್ಮಿಸಿ ಅದರ ಮೇಲೆ ವಡೆ, ಕಚ್ಚಾಯ, ಚಕ್ಕುಲಿ, ನಿಪ್ಪಟ್ಟು, ಕಡ್ಲೆಪುರಿ ಇನ್ನಿತರೆ ತಿನಿಸುಗಳನ್ನು ಇಟ್ಟು ತಲೆ ಬೋಳಿಸಿಕೊಂಡು ನೀವು ನಮ್ಮ ಪಾಲಿಗೆ ಸತ್ತಿದ್ದೀರಿ, ನಿಮ್ಮ ಆತ್ಮಕ್ಕೆ ಚಿರಶಾಂತಿ ದೊರಕಲಿ' ಎಂದು ಹಿಡಿಶಾಪ ಹಾಕಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಮಂತ್ರಿ ಎಂ.ಬಿ.ಪಾಟೀಲ್, ಕಳೆದ 25 ದಿನಗಳಿಂದ ಧರಣಿ ನಡೆಸಿ ನಾಲೆಗಳಿಗೆ ನೀರು ಬಿಡುಗಡೆ ಮಾಡವಂತೆ ನಾವು ಆಹೋರಾತ್ರಿ ಪ್ರತಿಭಟನೆ ನಡೆಸಿದರೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಪ್ರತಿಭಟನಾಕರರು ಇದೇ ಸಂದರ್ಭದಲ್ಲಿ ಆರೋಪಿಸಿದರು.
ಅಣಕು ತಿಥಿ ಕರ್ಮದ ನಂತರದ ಪ್ರತಿಭಟನೆ ವೇಳೆ ಸುಮಾರು 500ಕ್ಕೂ ಹೆಚ್ಚು ಜನರಿಗೆ ತಿಥಿ ಊಟವನ್ನು ನೀಡಲಾಯಿತು. ನೆರೆದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ತಿಥಿಯೂಟ ಸವೆದರು.
ಮಂಡ್ಯದಲ್ಲಿ ರೈತರು ನೀರಿಲ್ಲದೆ ಬೆಳೆಯೂ ಬೆಳೆಯಲಾಗದೆ ಪ್ರತಿನಿತ್ಯ ಪ್ರತಿಭಟನೆ ನಡೆಸಿದರೂ ಸರ್ಕಾರದ ಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಇತ್ತ ತಲೆ ಹಾಕದಿರುವುದು ಈ ಭಾಗದ ಜನರನ್ನು ರೊಚ್ಚಿಗೆಬ್ಬಿಸುವಂತೆ ಮಾಡಿದೆ.