ಕಾವೇರಿ ಹೋರಾಟಕ್ಕೆ ಗಾರ್ಮೆಂಟ್ಸ್ ಮಹಿಳಾ ಸಿಬ್ಬಂದಿ ಸಾಥ್
ಶ್ರೀರಂಗಪಟ್ಟಣ, ಸೆಪ್ಟೆಂಬರ್ 9: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಪ್ರತಿಭಟನೆಗಳು ನಡೆದವು.
ಪಟ್ಟಣದ ವಕೀಲರ ಸಂಘ ಮತ್ತು ಪಟ್ಟಣದಲ್ಲಿರುವ ಗೋಕುಲ್ ದಾಸ್ ಗಾರ್ಮೆಂಟ್ಸ್ ನ ಮಹಿಳಾ ಕಾರ್ಮಿಕರು ಸ್ವಇಚ್ಛೆಯಿಂದ ಬೆಂಗಳೂರು - ಮೈಸೂರು ಹೆದ್ದಾರಿ ವೃತ್ತದಲ್ಲಿ ಜಮಾಯಿಸಿ, ಖಾಲಿ ಕೊಡ ಹಿಡಿದು ರಸ್ತೆಯಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

ಪಟ್ಟಣದ ಸ್ನಾನಘಟ್ಟದ ಬಳಿ ತೆರಳಿದ ಮಹಿಳಾ ಕಾರ್ಮಿಕರು ನದಿಯ ದಡದಲ್ಲಿ ಕುಳಿತು, ರಾಜ್ಯ ಸರ್ಕಾರ ರಾಜ್ಯದ ಜನರ ಹಿತ ಕಾಯಬೇಕು. ಈ ನಿಟ್ಟಿನಲ್ಲಿ ಜಲಾಶಯದಿಂದ ಹೊರಬಿಡುತ್ತಿರುವ ನೀರನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಧರಣಿ ನಡೆಸಿದರು. ಕಾವೇರಿ ನದಿಗೆ ಮಹಿಳಾ ಕಾರ್ಮಿಕರು ಇಳಿಯದಂತೆ ಅಗ್ನಿ ಶಾಮಕದಳ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಹೆಚ್ಚಿನ ಭದ್ರತೆ ವಹಿಸಿದ್ದರೂ ಅವರನ್ನು ನೂಕಿ ನೀರಿಗಿಳಿಯಲು ಯತ್ನಿಸಿದರು.
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಕೀಲರ ಸಂಘವು ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು, ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿತು. ಮಂಡ್ಯದವರೆಗೂ ಬೈಕ್ ಮೆರವಣಿಗೆ ನಡೆಸಿದರು. ವಕೀಲರ ಸಂಘದ ಗಂಗರಾಜು, ಕಾರ್ಯದರ್ಶಿ ಮರೀಗೌಡ, ಸಿ.ಪುಟ್ಟಸ್ವಾಮಿ, ಮೂರ್ತಿ ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications