ಅತ್ತಿಗೆಯನ್ನೇ ಕೊಲೆ ಮಾಡಿ ನೇಣು ಹಾಕಿದ ಮೈದುನರು
ಮಂಡ್ಯ, ಆಗಸ್ಟ್ 30: ಮೈದುನರು ಆಸ್ತಿಗಾಗಿ ತನ್ನ ಅತ್ತಿಗೆಯನ್ನು ಹತ್ಯೆಗೈದು, ನೇಣುಹಾಕಿದ ಘಟನೆ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದಿ.ಶಿವನಂಜಪ್ಪ ಅವರ ಪತ್ನಿ ಗೌರಮ್ಮ (48) ಮೈದುನನ ಆಸ್ತಿದಾಹಕ್ಕೆ ಬಲಿಯಾದ ನತದೃಷ್ಟ ಮಹಿಳೆ. ಮೈದುನರಾದ ಶಿವಪ್ಪ, ಶಂಕರಪ್ಪ ಮತ್ತು ಮಹದೇವಪ್ಪ ಕೊಲೆ ಆರೋಪಿಗಳು.
ಮೂಲತಃ ವೀರರಾಜಿಪುರದ ಗೌರಮ್ಮ ಅವರನ್ನು ಇಪ್ಪತ್ತು ವರ್ಷಗಳ ಹಿಂದೆ ಲಾಳನಕೆರೆಯ ಶಿವನಂಜಪ್ಪ ಅವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. 10 ವರ್ಷಗಳ ಹಿಂದೆ ಶಿವನಂಜಪ್ಪ ಮೃತಟ್ಟಿದ್ದು, ಇವರಿಗೆ ಸುಷ್ಮಾ, ಶಿವಪ್ರಸಾದ್ ಹಾಗೂ ಶಿವಮೂರ್ತಿ ಎಂಬ ಮೂವರು ಮಕ್ಕಳಿದ್ದಾರೆ.[ಕೆಆರ್ ಪೇಟೆ : ಜಮೀನಿಗೆ ತೆರಳಿದ ಗೃಹಿಣಿಯ ನಿಗೂಢ ಸಾವು]

ಜಮೀನು ವ್ಯಾಜ್ಯ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗೌರಮ್ಮ ಮತ್ತು ಮೈದುನ ಶಿವಪ್ಪ ಮಧ್ಯೆ ಹಲವು ವರ್ಷಗಳಿಂದ ಜಗಳ ನಡೆಯುತ್ತಿತ್ತು. ರಾತ್ರಿ ವೇಳೆ ಗೌರಮ್ಮ ಒಂಟಿಯಾಗಿದ್ದ ಸಮಯ ನೋಡಿಕೊಂಡು ಮನೆಗೆ ನುಗ್ಗಿದ ಶಿವಪ್ಪ ಮತ್ತು ಇತರರು ಜಗಳ ಮಾಡಿ, ಉಸಿರುಗಟ್ಟಿಸಿ ಸಾಯಿಸಿ ಬಳಿಕ ತೊಲೆಗೆ ನೇಣು ಹಾಕಿ ಪರಾರಿಯಾಗಿದ್ದಾರೆ.
ಗೌರಮ್ಮ ಅವರಿದ್ದ ಮನೆ ಗ್ರಾಮದ ಹೊರಗಿದ್ದು, ಗಲಾಟೆ ನಡೆದದ್ದು ಯಾರಿಗೂ ಕೇಳಿಸಿಲ್ಲ. ಅಲ್ಲದೆ, ಇನ್ನೊಬ್ಬ ಮೈದುನ ಮಹದೇವಪ್ಪ ಅವರ ಮನೆಯೂ ಗೌರಮ್ಮ ಮನೆಯ ಪಕ್ಕದಲ್ಲೇ ಇದೆಯಾದರೂ ದುಷ್ಕರ್ಮಿಗಳು ಅವರ ಮನೆಯ ಚಿಲುಕವನ್ನು ಹೊರಗಿನಿಂದ ಹಾಕಿದ್ದರಿಂದ ಮನೆಯವರು ಹೊರಬರಲು ಸಾಧ್ಯವಾಗಿಲ್ಲ.[ದರೋಡೆಕೋರರಿಂದ 6 ಲಕ್ಷ, 21 ಚಿನ್ನದ ಬಿಸ್ಕೆಟ್, ಎರಡು ಕಾರು ವಶ]
ಬೆಳಗ್ಗೆ ಬೆಳಕಿಗೆ ಬಂತು: ಸೋಮವಾರ ಬೆಳಗ್ಗೆ ಕಿಟಕಿಯ ಮೂಲಕ ದಾರಿಹೋಕರನ್ನು ಕರೆಸಿ, ತಮ್ಮ ಮನೆಯ ಬಾಗಿಲ ಚಿಲುಕ ತೆಗೆಸಿದ್ದಾರೆ. ಬಳಿಕ ಹೊರಬಂದ ಮಹದೇವಪ್ಪ ಮತ್ತು ಕುಟುಂಬದವರು ಗೌರಮ್ಮ ಮನೆಗೆ ಹೋಗಿ ನೋಡಿದ್ದಾರೆ. ಗೌರಮ್ಮ ಅವರನ್ನು ನೇಣು ಹಾಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸವಿತಾ, ಡಿವೈಎಸ್ ಪಿ ವೆಂಕಟೇಶ್, ಸರ್ಕಲ್ ಇನ್ ಸ್ಪೆಕ್ಟರ್ ಪ್ರೀತಂ ಶ್ರೇಯಂಕರ, ಸಬ್ ಇನ್ ಸ್ಪೆಕ್ಟರ್ ಆನಂದಗೌಡ ಅವರು ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಹಲವು ವರ್ಷಗಳ ಜಮೀನು ವ್ಯಾಜ್ಯ ಅಂತಿಮ ಹಂತದಲ್ಲಿತ್ತು. ಮಂಗಳವಾರ (ಆ.30) ತೀರ್ಪು ಪ್ರಕಟವಾಗುವುದು ಬಾಕಿ ಇತ್ತು. ಬಹುತೇಕ ತೀರ್ಪು ಗೌರಮ್ಮ ಪರವೇ ಇತ್ತು ಎಂದು ಹತಾಶಗೊಂಡಿದ್ದ ಶಿವಪ್ಪ ಗೌರಮ್ಮಳನ್ನು ಹತ್ಯೆ ಮಾಡಿದ್ದಾನೆ.[ಪೊಲೀಸ್ ಭಾಷೆಯಲ್ಲೇ ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಿದ ಎಸ್ ಐ]
ಹತ್ಯೆಗೂ ಮುನ್ನ ಆಕೆಯ ಬಳಿ ಇದ್ದ ಜಮೀನು ದಾಖಲೆಗಳನ್ನು ಮನೆಯೊಳಗೆಯೇ ಸುಟ್ಟು ಹಾಕಿರುವ ಕುರುಹುಗಳೂ ಪೊಲೀಸರಿಗೆ ದೊರೆತಿವೆ. ಈ ಸಂಬಂಧ ಮೂವರನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.












Click it and Unblock the Notifications