ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಎಚ್ ಡಿ ದೇವೇಗೌಡ?
ಮಂಡ್ಯ, ಜೂನ್ 21: ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಅಚ್ಚರಿಯ ವದಂತಿಯೊಂದು ಮಾಧ್ಯಮ ವಲಯಗಳಲ್ಲಿ ಓಡಾಡುತ್ತಿದೆ!
ಮಂಡ್ಯ ಕ್ಷೇತ್ರದ ಸಂಸದರಾಗಿದ್ದ ಸಿಎಸ್ ಪುಟ್ಟರಾಜು ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದ ನಂತರ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ.
2014 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿಎಸ್ ಪುಟ್ಟರಾಜು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಟಿ ರಮ್ಯಾ ಅವರನ್ನು ಸೋಲಿಸಿ, ಸಂಸದರಾಗಿ ಆಯ್ಕೆಯಾಗಿದ್ದರು. ಸಿಎಸ್ ಪುಟ್ಟರಾಜು ಅವರು ಪ್ರಸ್ತುತ ಸಣ್ಣ ನೀರಾವರಿ ಸಚಿವರೂ ಹೌದು.

ಜೆಡಿಎಸ್ ಗೆ ಗೆಲುವು ಸುಲಭ
ಮಂಡ್ಯ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರಗಳನ್ನೂ ಗೆದ್ದು ದಾಖಲೆ ಬರೆದ ಜೆಡಿಎಸ್ ಗೆ ಈ ಉಪಚುನಾವಣೆಯಲ್ಲಿ ಗೆಲ್ಲುವುದು ಕಷ್ಟವೇನಲ್ಲ. ಅದರಲ್ಲು ಜೆಡಿಎಸ್ ನಿಂದ ದೇವೇಗೌಡರು ನಿಂತರಂತೂ ಸುಲಭವಾಗಿ ಗೆಲ್ಲಬಲ್ಲರು. ಆದರೆ ದೇವೇಗೌಡರು ಮಂಡ್ಯಕ್ಕೆ ಬಂದರೆ ಹಾಸನದ ಲೋಕಸಭಾ ಕ್ಷೇತ್ರ ತೆರವುಗೊಳ್ಳುತ್ತದೆ. ಆಗ ಮತ್ತೆ ಹಾಸನದಲ್ಲಿ ಚುನಾವಣೆ ನಡೆಯಬೇಕಾಗುತ್ತದೆ.

ಪ್ರಜ್ವಲ್ ರೇವಣ್ಣ ಹಾಸನಕ್ಕೆ?!
ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ಹಾಸನದಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾತೂ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಹಾಸನವನ್ನು ಬಿಟ್ಟು ಮಂಡ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿರುವುದಕ್ಕೂ ಅದೇ ಕಾರಣ ಎಂಬ ಮಾತೂ ಕೇಳಿಬರುತ್ತಿದೆ.

ಅಂಬರೀಶ್-ಎಚ್ಡಿಕೆ ರಹಸ್ಯ ಭೇಟಿ ?
ಇವೆಲ್ಲದರೊಂದಿಗೆ ಕಾಂಗ್ರೆಸ್ ಮುಖಂಡ, ನಟ ಅಂಬರೀಶ್ ಅವರು ಇತ್ತೀಚಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಗುಟ್ಟಾಗಿ ಭೇಟಿಯಾಗಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಈಗಾಗಲೇ ಅರ್ಧ ಕಾಂಗ್ರೆಸ್ ಬಿಟ್ಟಂತಿರುವ ಅಂಬರೀಶ್ ಜೆಡಿಎಸ್ ಕಡೆ ವಾಲಿ, ಮಂಡ್ಯ ಕ್ಷೇತ್ರದಿಂದ ಲೋಕಸಭಾ ಟಿಕೆಟ್ ಪಡೆಯುವ ಯೋಚನೆಯಲ್ಲಿದ್ದಾರಾ ಎಂಬ ಅನುಮಾನವೂ ಆರಂಭವಾಗಿದೆ.

ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲವೇ?
ಕಾಂಗ್ರೆಸ್ಸಿಗರೇನೋ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಆದರೆ ಜೆಡಿಎಸ್ ಇದಕ್ಕೆ ಸದ್ಯಕ್ಕೆ ಏನೂ ಪ್ರತಿಕ್ರಿಯೆ ನೀಡಿಲ್ಲ. ಜೆಡಿಎಸ್ ನ ಭದ್ರಕೋಟೆ ಎನ್ನಿಸಿರುವ ಮಂಡ್ಯ, ಹಾಸನ, ಮೈಸೂರುಗಳನ್ನು ಅದು ಎಂದಿಗೂ ಬಿಟ್ಟುಕೊಡುವುದಿಲ್ಲ. ಅಂದ ಮೇಲೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಅನುಮಾನವೇ.












Click it and Unblock the Notifications