ಹಳ್ಳದಲ್ಲಿ ಹೂತು "ಕಾಣೆ" ಎಂದರು; ಮೂರು ವರ್ಷದ ನಂತರ ಬಟಾಬಯಲಾಯ್ತು ನಾಟಕ
ಮಂಡ್ಯ, ಜನವರಿ 16: ಮೂರು ವರ್ಷಗಳ ಹಿಂದೆ ಪ್ರಿಯಕರನ ಜೊತೆಗೂಡಿ ಪತಿಯನ್ನು ಕೊಲೆ ಮಾಡಿ ಬಳಿಕ ನಾಪತ್ತೆಯಾಗಿದ್ದಾನೆಂದು ದೂರು ನೀಡಿ ಪ್ರಕರಣವನ್ನು ಮುಚ್ಚಿಹಾಕಿದ್ದ ಪತ್ನಿ ಇದೀಗ ಸಿಕ್ಕಿಬಿದ್ದು ಜೈಲು ಸೇರಿರುವ ಘಟನೆ ತಾಲೂಕಿನ ರಾಜೇಗೌಡನದೊಡ್ಡಿಯಲ್ಲಿ ಬೆಳಕಿಗೆ ಬಂದಿದೆ.
ರೂಪಾ ಹಾಗೂ ಮುದ್ದೇಗೌಡ ಅಲಿಯಾಸ್ ಮುತ್ತುರಾಜು ಬಂಧಿತ ಆರೋಪಿಗಳು. ಪತ್ನಿ ರೂಪ ತನ್ನ ಪ್ರಿಯಕರನ ಜತೆ ಸೇರಿ ಪತಿ ರಂಗಸ್ವಾಮಿಯನ್ನು ಹತ್ಯೆ ಮಾಡಿದ್ದರು.

ಟಿಪ್ಪರ್ ಚಾಲಕನಾಗಿದ್ದ ರಂಗಸ್ವಾಮಿ
ರಂಗಸ್ವಾಮಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಪೂಜಾರಿ ಬೋವಿದೊಡ್ಡಿ ಗ್ರಾಮದ ನಿವಾಸಿ. ತೊಪ್ಪನಹಳ್ಳಿಯ ಭೀಮನಕೆರೆ ಬೆಟ್ಟದರಸಮ್ಮ ಗುಡ್ಡದ ಕಲ್ಲು ಕ್ವಾರೆಯಲ್ಲಿ ಟಿಪ್ಪರ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಭೀಮನಕೆರೆ ಗ್ರಾಮದ ರೂಪಾ ಎಂಬಾಕೆಯನ್ನು ವಿವಾಹವಾಗಿ ರಾಜೇಗೌಡನ ದೊಡ್ಡಿಯಲ್ಲಿ ವಾಸವಾಗಿದ್ದನು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಈ ಮಧ್ಯೆ ರೂಪಾ ಟಿಪ್ಪರ್ ಚಾಲಕನಾಗಿದ್ದ ಮುದ್ದೇಗೌಡ ಅಲಿಯಾಸ್ ಮುತ್ತುರಾಜು ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು.

ಗಂಡನ ಕೊಲೆಗೆ ಪ್ರಿಯಕರನೊಂದಿಗೆ ಸ್ಕೆಚ್
ಈ ಅನೈತಿಕ ಸಂಬಂಧ ವಿಚಾರ ಪತಿ ರಂಗಸ್ವಾಮಿಗೆ ತಿಳಿದ ಕಾರಣ ಆಗಾಗ್ಗೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತ ರೂಪಾ ಪ್ರಿಯಕರ ಮುದ್ದೇಗೌಡನ ಜೊತೆ ಸೇರಿ ಗಂಡ ರಂಗಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದಳು. ಕಳೆದ 2017ರ ಜುಲೈ 4ರಂದು ರಾತ್ರಿ 10 ಗಂಟೆ ಸಮಯದಲ್ಲಿ ರೂಪಾ ಹಾಗೂ ಮುದ್ದೇಗೌಡ ಸೇರಿ ರಂಗಸ್ವಾಮಿ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಬಳಿಕ ರಂಗಸ್ವಾಮಿ ಬೈಕ್ ನಲ್ಲೇ ಶವವನ್ನು ಚಂದಹಳ್ಳಿ ದೊಡ್ಡಿ ಕೆರೆ ಬಳಿಗೆ ಸಾಗಿಸಿ ಮರಳು ತೆಗೆಯಲು ತೋಡಲಾಗಿದ್ದ ಹಳ್ಳದಲ್ಲಿ ಮುಚ್ಚಿಹಾಕಿ ಕೊಲೆ ಪ್ರಕರಣವನ್ನು ಮರೆಮಾಚಿದ್ದರು.

ಕೊಲೆ ಮಾಡಿ ತಾನೇ ದೂರು ಕೊಟ್ಟ ಹೆಂಡತಿ
ನಂತರ ರೂಪಾ ತನ್ನ ಗಂಡ ರಂಗಸ್ವಾಮಿ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಅಲ್ಲದೆ, ಆತನ ಕುಟುಂಬಕ್ಕೂ ಮಾಹಿತಿ ನೀಡಿದ್ದಳು.
ಕಳೆದ ಮೂರೂವರೆ ವರ್ಷಗಳಿಂದ ರಂಗಸ್ವಾಮಿ ಕಾಣೆಯಾದ ಬಗ್ಗೆ ಆತನ ಸಹೋದರ ಮುತ್ತೇರಿ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲದೆ, ರಂಗಸ್ವಾಮಿಯನ್ನು ಅವನ ಪತ್ನಿ ರೂಪಾ ಹಾಗೂ ಮುದ್ದೇಗೌಡ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದನು. ಪ್ರಕರಣವನ್ನು ಮದ್ದೂರು ಪೊಲೀಸರು ದಾಖಲಿಸಿಕೊಂಡಿದ್ದರು.
ಕೊನೆಗೂ ಬಂಧಿತರಾದ ಆರೋಪಿಗಳು
ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಮದ್ದೂರು ವಿಶ್ವೇಶ್ವರಯ್ಯ ನಗರದಲ್ಲಿ ವಾಸವಾಗಿದ್ದ ರೂಪಾ ಹಾಗೂ ಮುದ್ದೇಗೌಡರನ್ನು ಬಂಧಿಸುವಲ್ಲಿ ಸಫಲರಾದರು. ಆರೋಪಿಗಳ ವಿರುದ್ಧ ಐಪಿಸಿ-302, 201 ಹಾಗೂ 34ರ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications