Get Updates
Get notified of breaking news, exclusive insights, and must-see stories!

ಜೆಡಿಎಸ್ ಭದ್ರಕೋಟೆ ಮದ್ದೂರಲ್ಲಿ ಶಾಸಕ ಡಿ.ಸಿ.ತಮ್ಮಣ್ಣರಿಗೆ ಎದುರಾಳಿ ಯಾರು?

ಮಂಡ್ಯ ಆಗಸ್ಟ್‌ 6: ಜಿಲ್ಲೆಯಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರವೂ ರಾಜಕಾರಣಕ್ಕೆ ಪ್ರಮುಖವಾಗಿದ್ದು, ರಾಜಕೀಯ ಇತಿಹಾಸವನ್ನು ಗಮನಿಸಿದರೆ ಇಲ್ಲಿರುವ ಕ್ಷೇತ್ರಗಳ ಪೈಕಿ ಮದ್ದೂರು ಒಂದಷ್ಟು ವಿಶೇಷತೆಗಳನ್ನು ಹೊಂದಿರುವುದನ್ನು ನಾವು ಕಾಣಬಹುದಾಗಿದೆ.

ಈ ಬಾರಿ ಮದ್ದೂರು ಕ್ಷೇತ್ರ ಸ್ವಲ್ಪ ಹೆಚ್ಚಾಗಿ ಗಮನಸೆಳೆಯುತ್ತಿದೆ. ಇದಕ್ಕೆ ಕಾರಣ ಮಾಜಿ ಸಚಿವರು, ನಟರು ಆಗಿದ್ದ ದಿ. ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರು ಸ್ಪರ್ಧಿಸುತ್ತಾರೆಂಬ ವದಂತಿಗಳು ಹರಿದಾಡುತ್ತಿದೆ. ಇದನ್ನು ಕೇವಲ ವದಂತಿ ಎಂದಷ್ಟೆ ಹೇಳಿ ತಳ್ಳಿಹಾಕಲು ಸಾಧ್ಯವಿಲ್ಲ. ಹಾಗೆಂದು ಈ ಬಗ್ಗೆ ತಾಯಿ ಸಂಸದೆ ಸುಮಲತಾ ಅಂಬರೀಶ್ ಆಗಲೀ ಅಥವಾ ಸ್ವತಃ ಅಭಿಷೇಕ್ ಕೂಡ ಹೇಳಿಲ್ಲ. ಆದರೆ ರಾಜಕೀಯ ಪಡಸಾಲೆಯಲ್ಲಿ ಮಾತ್ರ ಈ ರೀತಿಯ ಸುದ್ದಿಯೊಂದು ಮಾತ್ರ ಹರಿದಾಡುತ್ತಲೇ ಇದೆ.

ಇನ್ನು ಮದ್ದೂರು ಕ್ಷೇತ್ರದ ಬಗ್ಗೆ ನೋಡಿದ್ದೇ ಆದರೆ ಇದು ಘಟಾನುಘಟಿಗಳಿಗೆ ರಾಜಕೀಯ ಭವಿಷ್ಯ ನೀಡಿದ ಕ್ಷೇತ್ರವಾಗಿ ಗಮನಸೆಳೆಯುತ್ತದೆ ಅಷ್ಟೇ ಅಲ್ಲ ಕೆಲವರಿಗೆ ಸೋಲಿನ ರುಚಿಯನ್ನು ತೋರಿಸಿರುವ ಕ್ಷೇತ್ರವೂ ಆಗಿದೆ. ಸದ್ಯ ಈ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲವಾಗಿದೆ. ಕಳೆದ ಎರಡು ಅವಧಿಯಿಂದ ಶಾಸಕ ಡಿ.ಸಿ.ತಮ್ಮಣ್ಣ ಅವರು ಆಯ್ಕೆಯಾಗುತ್ತಾ ಬಂದಿದ್ದು, ಇಲ್ಲಿ ಜೆಡಿಎಸ್ ಗಟ್ಟಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

 ಹ್ಯಾಟ್ರಿಕ್ ಕನಸಿನಲ್ಲಿ ಡಿಸಿ ತಮ್ಮಣ್ಣ

ಹ್ಯಾಟ್ರಿಕ್ ಕನಸಿನಲ್ಲಿ ಡಿಸಿ ತಮ್ಮಣ್ಣ

ಪ್ರತಿ ಚುನಾವಣೆಯಲ್ಲೂ ಡಿಸಿ ತಮ್ಮಣ್ಣ ಜೆಡಿಎಸ್ ಪಕ್ಷದಿಂದ ಅವರೇ ಸ್ಪರ್ಧಿಸುತ್ತಾ ಬಂದರೆ ಇತರೆ ನಾಯಕರು ಪಕ್ಷದಲ್ಲಿ ಬೆಳೆಯುವುದಾದರೂ ಹೇಗೆ ಎಂಬ ಗೊಂದಲವೂ ಪಕ್ಷದಲ್ಲಿ ಇದೆ. ಅವರ ನಂತರ ಮತ್ತೊಬ್ಬ ನಾಯಕನನ್ನು ಕ್ಷೇತ್ರದಲ್ಲಿ ಬೆಳೆಸುತ್ತಾರಾ? ಗೊತ್ತಿಲ್ಲ. ಆದರೆ ಮುಂದಿನ 2023ರ ಚುನಾವಣೆಯಲ್ಲಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಶಾಸಕರಾಗಿರುವ ಡಿ.ಸಿ.ತಮ್ಮಣ್ಣ ಅವರೇ ಕಣಕ್ಕಿಳಿಯುವುದು ಖಚಿತವಾಗಿದೆ. ಆ ಮೂಲಕ ಹ್ಯಾಟ್ರಿಕ್ ಗೆಲುವಿನ ಕನವರಿಕೆಯಲ್ಲಿದ್ದಾರೆ. 2013 ಮತ್ತು 2018ರ ಚುನಾವಣೆಯಲ್ಲಿ ನಿರಾಯಾಸವಾಗಿ ಗೆದ್ದಿರುವ ಡಿ.ಸಿ.ತಮ್ಮಣ್ಣರಿಗೆ ಈ ಬಾರಿ ಗೆಲುವು ಅಷ್ಟು ಸುಲಭವಾಗಿರುತ್ತದೆ ಎಂದು ಹೇಳುವುದು ಕಷ್ಟವೇ.

 ಕಿರುಗಾವಲು ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೆಲುವು

ಕಿರುಗಾವಲು ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೆಲುವು

ಡಿ.ಸಿ.ತಮ್ಮಣ್ಣ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ಅವರ ರಾಜಕೀಯದ ಹಾದಿಯನ್ನು ಗಮನಿಸಿದರೆ ಇದುವರೆಗೆ ಆರು ಚುನಾವಣೆಗಳನ್ನು ಎದುರಿಸಿ ನಾಲ್ಕು ಬಾರಿ ಗೆಲುವು ಕಂಡಿದ್ದಾರೆ. ಈ ಬಾರಿ ಮತ್ತೆ ಏಳನೇ ಬಾರಿಗೆ ಸ್ಪರ್ಧಿಸುವ ಮನಸ್ಸು ಮಾಡಿದ್ದಾರೆ. 1999ರಲ್ಲಿ ಕಿರುಗಾವಲು ಕ್ಷೇತ್ರಕ್ಕೆ ಕಾಂಗ್ರೆಸ್ ಮೂಲಕ ಎಂಟ್ರಿ ಕೊಟ್ಟ ಡಿ.ಸಿ.ತಮ್ಮಣ್ಣ ಅವರು ಅವತ್ತಿನ ನಾಯಕರಾಗಿದ್ದ ಜಿ.ಮಾದೇಗೌಡ, ಎಸ್.ಎಂ.ಕೃಷ್ಣ ಹಾಗೂ ಬೀಗ ದೇವೇಗೌಡರ ಪರೋಕ್ಷ ಸಹಕಾರದೊಂದಿಗೆ ಕೆ.ಎನ್.ನಾಗೇಗೌಡರ ವಿರುದ್ಧ ಗೆಲುವು ಸಾಧಿಸಿದ್ದರು.

2004ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಎಂ.ಎಸ್‌.ಸಿದ್ದರಾಜು, ಬಿ.ವಿವೇಕಾನಂದ ಇಬ್ಬರಿಗೂ ಬಿ ಫಾರಂ ಲಭಿಸಿತ್ತು. ಡಬಲ್‌ ಬಿ ಫಾರಂ ನೀಡುವ ಮೂಲಕ ದೇವೇಗೌಡರು ತಮ್ಮ 'ಬೀಗ'ರಾದ ತಮ್ಮಣ್ಣ ಅವರಿಗೆ ಪರೋಕ್ಷವಾಗಿ ಅನುಕೂಲ ಮಾಡಿಕೊಟ್ಟಿದ್ದರು ಎಂಬ ಮಾತುಗಳಿವೆ. ಅವತ್ತು ಮುಖ್ಯಮಂತ್ರಿ ಆಗಿದ್ದ ಎಸ್.ಎಂ.ಕೃಷ್ಣ ಅವರಿಗೆ (2004) ಚುನಾವಣೆಯಲ್ಲಿ ಕ್ಷೇತ್ರದಿಂದ ಮತ್ತೊಮ್ಮೆ ಗೆಲ್ಲುವ ನಿರೀಕ್ಷೆಯಿರಲಿಲ್ಲ. ಹೀಗಾಗಿ ಅವರು ಗೆಲುವಿಗೆ ಅನುಕೂಲವಾಗುವ ಕ್ಷೇತ್ರವನ್ನರಸಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದತ್ತ ಮುಖ ಮಾಡಿದ್ದರು. ಈ ವೇಳೆ ಮದ್ದೂರಿನಿಂದ ಸ್ಪರ್ಧಿಸಿದ ಡಿ.ಸಿ.ತಮ್ಮಣ್ಣ ಅವರು ಗೆಲುವು ಸಾಧಿಸುವುದರೊಂದಿಗೆ ಎರಡನೇ ಬಾರಿಗೆ ವಿಧಾನಸಭೆಯ ಪ್ರವೇಶ ಮಾಡಿದ್ದರು.

 ಬಿಜೆಪಿಯಲ್ಲಿ ಸೋತು ಜೆಡಿಎಸ್ ಸೇರಿ ಗೆದ್ದ ತಮ್ಮಣ್ಣ

ಬಿಜೆಪಿಯಲ್ಲಿ ಸೋತು ಜೆಡಿಎಸ್ ಸೇರಿ ಗೆದ್ದ ತಮ್ಮಣ್ಣ

ಆದರೆ, 2008ರಲ್ಲಿ ಘೋಷಣೆಯಾದ ಮಧ್ಯಂತರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾದ ಎಂ.ಎಸ್‌.ಸಿದ್ದರಾಜು ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಆದರೆ, ಆರು ತಿಂಗಳಲ್ಲೇ ಅವರು ಅನಾರೋಗ್ಯದಿಂದ ಮೃತಪಟ್ಟ ಪರಿಣಾಮ 2009ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಡಿ.ಸಿ.ತಮ್ಮಣ್ಣ ಸೋಲುಂಡರು. ಆ ನಂತರ 2013ರಲ್ಲಿ ಜೆಡಿಎಸ್ ಸೇರ್ಪಡೆಯಾದ ತಮ್ಮಣ್ಣ ದೇವೇಗೌಡರ ಮೂಲಕ ಟಿಕೆಟ್ ಪಡೆದು, ಅಖಾಡಕ್ಕಿಳಿದರು. ಕಾಂಗ್ರೆಸ್‌ನಿಂದ ಮಧು ಜಿ.ಮಾದೇಗೌಡ ಕಣಕ್ಕಿಳಿದರೆ, ಕಲ್ಪನಾ ಸಿದ್ದರಾಜು ಪಕ್ಷೇತರವಾಗಿ ಕಣಕ್ಕಿಳಿದರು. ಕಲ್ಪನಾ ಸಿದ್ದರಾಜು ಒಂದಷ್ಟು ಮತ ಪಡೆದಿದ್ದರಿಂದ ತಮ್ಮಣ್ಣರಿಗೆ ಒಂದಷ್ಟು ಲಾಭವಾಗಿ ಮೂರನೇ ಬಾರಿ ವಿಧಾನ ಸಭೆ ಪ್ರವೇಶಿಸಲು ಸಾ‍ಧ್ಯವಾಯಿತು.

2018ರ ಚುನಾವಣೆ ವೇಳೆಗೆ ಕಲ್ಪನಾ ಸಿದ್ದರಾಜು ಜೆಡಿಎಸ್‌ಗೆ ಮುಖ ಮಾಡಿದರು ಕಾಂಗ್ರೆಸ್ಸಿನಿಂದ ಮಧು ಜಿ.ಮಾದೇಗೌಡ ಕಣಕ್ಕಿಳಿದರು. ಕೊನೆಯ ಕ್ಷಣಗಳಲ್ಲಾದ ರಾಜಕೀಯ ಬೆಳವಣಿಗೆಯಲ್ಲಿ ಡಿ.ಸಿ.ತಮ್ಮಣ್ಣ ನಾಲ್ಕನೇ ಬಾರಿ ವಿಧಾನ ಸಭೆ ಪ್ರವೇಶಿಸುವಂತೆ ಮಾಡಿತು. ಅಷ್ಟೇ ಅಲ್ಲದೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗುವ ಅವಕಾಶ ಮಾಡಿಕೊಟ್ಟಿತು.

 ತಮ್ಮಣ್ಣರಿಗೆ ಎದುರು ನಿಲ್ಲುವವರಾರು?

ತಮ್ಮಣ್ಣರಿಗೆ ಎದುರು ನಿಲ್ಲುವವರಾರು?

ಮುಂದಿನ 2023ರ ಚುನಾವಣೆಯತ್ತ ಒಲವು ತೋರಿರುವ ಡಿ.ಸಿ.ತಮ್ಮಣ್ಣ ಮತ್ತೆ ಗೆದ್ದೇ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಆದರೆ ಈ ಬಾರಿ ಇತರೆ ಪಕ್ಷಗಳ ಒಂದಷ್ಟು ನಾಯಕರು ಬೇರೆ, ಬೇರೆ ರೀತಿಯ ಕೆಲಸ ಕಾರ್ಯಗಳನ್ನು ಮಾಡುತ್ತಾ ಕ್ಷೇತ್ರದೊಳಗೆ ಓಡಾಡುತ್ತಾ ಜನರಿಗೆ ಹತ್ತಿರವಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ವಿಧಾನಸಭಾ ಚುನಾವಣೆಗೆ ನಾವೇ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಿಂದ ಎಸ್.ಎಂ.ಕೃಷ್ಣರ ಸೋದರನ ಪುತ್ರ, ಜಿ.ಪಂ. ಮಾಜಿ ಅಧ್ಯಕ್ಷ ಗುರುಚರಣ್, ಬಿಜೆಪಿಯಿಂದ ಸಾದೊಳಲು ಸ್ವಾಮಿ ಎಂಬುವರು ನಾಲ್ಕು ವರ್ಷದಿಂದಲೂ ಕ್ಷೇತ್ರದೊಳಗೆ ತನ್ನದೇ ಆದ ರೀತಿಯಲ್ಲಿ ಸಂಘಟನೆ ಮಾಡುತ್ತಾ, ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಇದರ ನಡುವೆ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹೆಸರು ಕೇಳಿ ಬಂದಿರುವುದು ಕುತೂಹಲ ಕೆರಳಿಸಿದೆ.

ಚುನಾವಣೆಗೆ ಇನ್ನು ಎಂಟು ತಿಂಗಳು ಇರುವುದರಿಂದ ಏನು ಬೇಕಾದರೂ ಆಗಬಹುದು? ಹೀಗಾಗಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ ಎನ್ನುವುದನ್ನು ಕಾದು ನೋಡಬೇಕಾಗಿದೆ. ಆದರೆ ಜೆಡಿಎಸ್ ನಿಂದ ಡಿ.ಸಿ.ತಮ್ಮಣ್ಣ ಅವರ ಸ್ಪರ್ಧೆ ಖಚಿತವಾಗಿದ್ದು ಅವರ ಎದುರು ನಿಂತು ಸ್ಪರ್ಧೆ ಮಾಡುವವರು ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಯಾರು ಎಂಬುದನ್ನು ಕಾದು ನೋಡಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+