ಮಂಡ್ಯದಲ್ಲಿ ದೇವೇಗೌಡರ ತಂತ್ರ ನಡೆಯದೆ ಹೋದರೆ ಮುಂದೇನಾಗಬಹುದು?
Recommended Video

ಮಂಡ್ಯ, ಫೆಬ್ರವರಿ 04: ಮುಂದಿನ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿರುವಾಗಲೇ ಇದೀಗ ಕಾಂಗ್ರೆಸ್ನಿಂದ ಮುಂಬರುವ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಅವರನ್ನು ಅಭ್ಯರ್ಥಿಯನ್ನಾಗಿಸುವ ತಂತ್ರ ರೂಪಿಸಿದ್ದು, ಇದಕ್ಕೆ ಸುಮಲತಾ ಅವರು ಕೂಡ ಒಲವು ತೋರಿರುವುದು ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಮಂಡ್ಯ ಜೆಡಿಎಸ್ ನ ಭದ್ರಕೋಟೆಯಾಗಿದ್ದು, ಇಲ್ಲಿಂದ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿದರೆ ಸುಲಭವಾಗಿ ಗೆಲುವು ಪಡೆಯಬಹುದೆಂಬ ಲೆಕ್ಕಾಚಾರ ಜೆಡಿಎಸ್ ವರಿಷ್ಠರದ್ದಾಗಿತ್ತು. ಆದರೆ ಇದೀಗ ಎಲ್ಲವೂ ಉಲ್ಟಾ ಆಗಿದೆ.
ಜತೆಗೆ ಹಾಲಿ ಸಂಸದರಾಗಿರುವ ಎಲ್.ಆರ್.ಶಿವರಾಮೇಗೌಡರು ಕೂಡ ತಾನೇ ಮುಂದಿನ ಲೋಕಸಭಾ ಚುನಾವಣೆಗೆ ಜೆಡಿಎಸ್ ನಿಂದ ಅಭ್ಯರ್ಥಿ ಎಂಬ ಮಾತನ್ನಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಈಗಾಗಲೇ ಜೆಡಿಎಸ್ 12 ಲೋಕಸಭಾ ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವಂತೆ ಕಾಂಗ್ರೆಸ್ ವರಿಷ್ಠರಲ್ಲಿ ಒತ್ತಡವನ್ನು ಹಾಕುತ್ತಿದ್ದು, ಇದರಲ್ಲಿ ಜೆಡಿಎಸ್ ನ ಶಕ್ತಿ ಕೇಂದ್ರ ಮಂಡ್ಯವೇ ಪ್ರಮುಖವಾಗಿದ್ದು, ಈ ಕ್ಷೇತ್ರದಿಂದ ಜೆಡಿಎಸ್ ವರಿಷ್ಠರ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸುವ ಪೂರ್ವ ಸಿದ್ಧತೆಗಳು ನಡೆದಿವೆ. ಮುಂದೆ ಓದಿ...

ಪ್ರಬಲವಾಗಿ ಲಾಬಿ ನಡೆಸುತ್ತಿದೆ
ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವಂತೆ ಜೆಡಿಎಸ್ ನ ಒಂದು ಗುಂಪು ಪ್ರಬಲವಾಗಿ ಲಾಬಿ ನಡೆಸುತ್ತಿದ್ದು, ಇದಕ್ಕೆ ಟಾಂಗ್ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸುಮಲತಾ ಅವರ ಸ್ಪರ್ಧಾಕಾಂಕ್ಷಿಯನ್ನು ಮುನ್ನಲೆಗೆ ತಂದಿದೆ.

ಏನು ಮಾಡುತ್ತಾರೆ ಎನ್ನುವುದು ಪ್ರಶ್ನೆ?
ಅಂಬರೀಶ್ ಸಾವಿನ ಸಂದರ್ಭ ಮಾನವೀಯತೆ ಮೆರೆದು ಅಂಬರೀಶ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ನ ಸಮಸ್ತ ನಾಯಕರು ಈಗ ಅಂಬರೀಶ್ ಕುಟುಂಬವನ್ನು ರಾಜಕೀಯವಾಗಿ ಕೈ ಹಿಡಿಯಲು ಏನು ಮಾಡುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ.

ದೇವೇಗೌಡರ ಜೊತೆ ಉತ್ತಮ ಒಡನಾಟ
ಅಂಬರೀಶ್ ಅವರು ತಮ್ಮ ರಾಜಕೀಯ ಬಹುಪಾಲು ದಿನಗಳನ್ನು ಕಾಂಗ್ರೆಸ್ನಲ್ಲಿ ಕಳೆದಿದ್ದರು ಜೆಡಿಎಸ್ ಜೊತೆ ಅದರಲ್ಲೂ ವಿಶೇಷವಾಗಿ ದೇವೇಗೌಡರ ಕುಟುಂಬದೊಡನೆ ಉತ್ತಮ ಒಡನಾಟ ಹೊಂದಿದ್ದರು. ಜೆಡಿಎಸ್ ಗೆ ಅಧಿಕಾರ ಇಲ್ಲದಂತ ಸಂದರ್ಭದಲ್ಲೂ ಕೂಡ ಅಂಬರೀಶ್ ಜೆಡಿಎಸ್ ಕಾರ್ಯಕರ್ತರ ರಕ್ಷಿಸುವ ಉದಾರತೆ ಮೆರೆದಿದ್ದರು. ಈ ಎಲ್ಲ ಸಹಾಯಗಳಿಗೆ ಜೆಡಿಎಸ್ ವರಿಷ್ಠರು ಅಂಬರೀಶ್ ಕುಟುಂಬಕ್ಕೆ ಪ್ರತಿಯಾಗಿ ಏನು ಮಾಡುತ್ತಾರೆ ಎಂಬುದು ಮತ್ತೊಂದು ಪ್ರಶ್ನೆಯಾಗಿದೆ.

'ಕೈ' ಮಾಡುತ್ತಿರುವ ರಾಜಕೀಯ ತಂತ್ರ
ಜಿಲ್ಲೆಯ ಕಾಂಗ್ರೆಸ್ ನಾಯಕರು ನೇರವಾಗಿ ಸುಮಲತಾ ಅವರನ್ನು ಚುನಾವಣೆಗೆ ಇಳಿಯುವಂತೆ ಒತ್ತಾಯ ಮಾಡಿದರೆ ಅದಕ್ಕೆ ಹೈಕಮಾಂಡ್ ನಿಂದ ಕಡಿವಾಣ ಬೀಳುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳ ಮೂಲಕ ಸುಮಲತಾ ಅವರನ್ನು ಚುನಾವಣಾ ರಾಜಕಾರಣಕ್ಕೆ ಆಹ್ವಾನಿಸುತ್ತಿದೆ. ಇದು ಜೆಡಿಎಸ್ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಪ್ರಮುಖ ರಾಜಕೀಯ ತಂತ್ರವಾಗಿದೆ. ಇದೀಗ ದೇವೇಗೌಡರ ತಂತ್ರ ಮಂಡ್ಯದಲ್ಲಿ ನಡೆಯದೆ ಹೋದರೆ ಮುಂದೇನಾಗಬಹುದು ಎಂಬುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.












Click it and Unblock the Notifications