ಅಂಬರೀಶ್ ಚುನಾವಣಾ ನಿವೃತ್ತಿ: ಮಂಡ್ಯ ರಾಜಕೀಯದಲ್ಲಿ ಏನೇನಾಗಬಹುದು?
ಅಂಬರೀಶ್ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಚುನಾವಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದಾರಾದರೂ ಅಸಮಾಧಾನದ ಎಳೆಯೊಂದು ಅವರಲ್ಲಿರುವುದು ನಿನ್ನೆ ಅವರು ಮಾಧ್ಯಮವನ್ನುದ್ದೇಶಿಸಿ ಆಡಿದ ಮಾತಿನಲ್ಲಿ ಢಾಳಾಗಿ ಕಂಡು ಬಂದಿದ್ದು ಸುಳ್ಳಲ್ಲ.
ನಿನ್ನೆ ಮಾಧ್ಯಮದವರೊಂದಿಗೆ ಸುಮಾರು ಅರ್ಧ ಗಂಟೆ ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ವರ್ತನೆಯಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಹೇಳಿದರು. ಅಂಬರೀಶ್ ಚುನಾವಣೆಯಿಂದ ಹಿಂದೆ ಸರಿದಿರುವುದು ಕೇವಲ ಆರೋಗ್ಯ ಸಮಸ್ಯೆಯಿಂದಲ್ಲ ವರಿಷ್ಠರ ಜೊತೆಗಿನ ಅಸಮಾಧಾನವೂ ಅದಕ್ಕೆ ಕಾರಣ ಎಂಬುದಕ್ಕೆ ಇದೇ ಸಾಕ್ಷಿ.
ಮಂಡ್ಯದಲ್ಲಿ ಅಂಬರೀಶ್ ಅವರ ಪ್ರಭಾವ ದೊಡ್ಡದು ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಕೂಡಲೇ ಮಂಡ್ಯದಲ್ಲಿ ಅವರ ಪ್ರಭಾವ ಕಡಿಮೆ ಏನೂ ಆಗದು. ಮನೆಯಲ್ಲಿ ಕುಳಿತೇ ಮಂಡ್ಯ ಚುನಾವಣೆಯ ದಿಕ್ಕು ಬದಲಿಸಬಲ್ಲ ಛಾತಿ ಈಗಲೂ ಅಂಬರೀಶ್ಗೆ ಇದೆ ಎನ್ನುತ್ತಾರೆ ಅವರ ಹಿಂಬಾಲಕರು (ಶಾಸಕರಾಗಿದ್ದಾಗಲೂ ಹೀಗೆ ಮಾಡುತ್ತಿದ್ದರಂತೆ. ಕ್ಷೇತ್ರಕ್ಕೆ ಹೋಗದೆ ಕೆಲಸ ಮಾಡಿಸುತ್ತಿದ್ದರಂತೆ ಅಂಬಿ).

ಅಂಬಿ ಬೆಂಬಲ ಯಾರಿಗೆ
ಇದೀಗ ಮಂಡ್ಯ ಕಾಂಗ್ರೆಸ್ ಟಿಕೆಟ್ ಗಣಿಗ ರವಿ ಅವರಿಗೆ ದೊರೆತಿದ್ದು, ಅದು ಅಂಬರೀಶ್ ಅವರಿಗೆ ಸಂಪೂರ್ಣ ತೃಪ್ತಿ ನಿಡಿಲ್ಲ. ಗಣಿಗ ಬದಲಿಗೆ ರಮ್ಯಾಗೆ ಟಿಕೆಟ್ ಕೊಟ್ಟಿದ್ದರೆ ಹೆಚ್ಚು ಸಂತೋಶ ಆಗ್ತಿತ್ತು ಎಂದು ಅವರು ನೇರವಾಗಿಯೇ ಹೇಳಿದ್ದಾರೆ. ಜೊತೆಗೆ ಗಣಿಗ ಪರ ಪ್ರಚಾರ ಮಾಡುವುದಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿದ್ದರೆ ಅಂಬರೀಶ್ ಯಾರ ಪರ ಇರುತ್ತಾರೆ ಎಂಬುದು ಕುತೂಹಲದ ವಿಷಯ.

ಜೆಡಿಎಸ್ಗೆ ಪರೋಕ್ಷ ಬೆಂಬಲ ನಿಡಿದ್ದಾರಾ ಅಂಬಿ?
ಅಂಬರೀಶ್ಗೆ ಜೆಡಿಎಸ್, ಬಿಜೆಪಿ ಪಕ್ಷಗಳು ಈಗಾಗಲೇ ಬಲೆ ಬೀಸಿವೆ ಆದರೆ ಅವರು, 'ನಾನು ಯಾವ ಪಕ್ಷವನ್ನೂ ಸೇರುವುದಿಲ್ಲ' ಎಂದಿದ್ದಾರೆ. ಆದರೆ ಹೀಗೆ ಕಾಂಗ್ರೆಸ್ ಪರ ಪ್ರಚಾರ ಮಾಡದೇ ಇರುವುದು ಮಂಡ್ಯದಲ್ಲಿ ಜೆಡಿಎಸ್ಗೆ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ. ಜೆಡಿಎಸ್ಗೆ ಬೆಂಬಲ ಸೂಚಿಸಲೆಂದೆ ಅಂಬರೀಶ್ ಅವರು ಚುನಾವಣಾ ಪ್ರಚಾರಕ್ಕೆ ಬರುತ್ತಿಲ್ಲ ಎಂಬುದು ಜೆಡಿಎಸ್ ಕಾರ್ಯಕರ್ತರ ಮಾತು. ಇದು ಸತ್ಯವೂ ಇರಬಹುದು.

ಅಂಬಿ ತಟಸ್ಥ ರಾಜಕಾರಣ ಜೆಡಿಎಸ್ಗೆ ಸಹಾಯ
ಈಗಾಗಲೇ ಕುಮಾರಸ್ವಾಮಿ ಅವರು 'ಅಂಬರೀಶ್ ನನ್ನ ದೊಡ್ಡ ಅಣ್ಣ ಇದ್ದಂತೆ' ಎಂದಿದ್ದಾರೆ. ನಿನ್ನೆ ಮಾಧ್ಯಮದೊಂದಿಗೆ ಮಾತನಾಡುತ್ತಾ ಅಂಬರೀಶ್ ಅವರು ಸಹ ದೇವೇಗೌಡರ ಬಗ್ಗೆ ಉತ್ತಮ ಮಾತನಾಡಿದ್ದಾರೆ. ಅಂಬರಿಶ್ ಅವರಿಗೆ ಜೆಡಿಎಸ್ ಪರ ಮೃದು ಧೋರಣೆ ಇರುವುದು ಜಾಹೀರಾಗಿದೆ. ಅಂಬರೀಶ್ ಅವರು ಚುನಾವಣೆಯಲ್ಲಿ ತಟಸ್ಥರಾದರೆ ಅದು ಜೆಡಿಎಸ್ಗೆ ವರವಾಗಲಿದೆ. ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದಿರುವ ಚೆಲುವರಾಯಸ್ವಾಮಿ ಮೇಲಿನ ಮುನಿಸಿನಿಂದ ಅಂಬಿ ಪರೋಕ್ಷವಾಗಿ ಜೆಡಿಎಸ್ಗೆ ಬೆಂಬಲ ಸೂಚಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಮಂಡ್ಯ ಕಾಂಗ್ರೆಸ್ಗೆ ಯಾರು ದಿಕ್ಕು
ಮಂಡ್ಯದ ಕಾಂಗ್ರೆಸ್ ದಿಗ್ಗಜರೆಂದರೆ ಅದು ಎಸ್.ಎಂ.ಕೃಷ್ಣ ಮತ್ತೊಬ್ಬರು ಅಂಬರೀಶ್ ಈಗ ಎಸ್.ಎಂ.ಕೃಷ್ಣ ಬಿಜೆಪಿ ಸೇರಿದ್ದಾರೆ. ಅಂಬರೀಶ್ ನಿವೃತ್ತಿಯ ಮಾತಾಡಿದ್ದಾರೆ. ಹಾಗಿದ್ದರೆ ಮಂಡ್ಯ ಕಾಂಗ್ರೆಸ್ನ ಗತಿ ಏನು ಎಂಬ ಪ್ರಶ್ನೆ ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿದೆ. ಈಗ ಗಣಿಗ ರವಿ ಅವರಿಗೆ ಟಿಕೆಟ್ ನೀಡಿರುವುದು ನೋಡಿದರೆ ಹೊಸ ನಾಯಕನನ್ನು ಹುಟ್ಟು ಹಾಕುವ ಪ್ರಯತ್ನಕ್ಕೆ ಕಾಂಗ್ರೆಸ್ ಕೈ ಹಾಕಿದೆ ಎನ್ನಲಾಗುತ್ತಿದೆ. ಆದರೆ ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಬಂದಿರುವ ಚೆಲುವರಾಯಸ್ವಾಮಿಗೂ ಮಂಡ್ಯ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸುವ ಅವಕಾಶ ಇಲ್ಲದಿಲ್ಲ.

ರಮ್ಯಾಗಿದೆ ಹೈಕಮಾಂಡ್ ಬೆಂಬಲ
ಅಂಬರೀಶ್ ಅವರೇ ಹೇಳಿದಂತೆ ರಮ್ಯಾಗೆ ಮಂಡ್ಯ ಟಿಕೆಟ್ ಕೊಡಬಹುದಿತ್ತಂತೆ ಆದರೆ ಅವರ ಬದಲಿಗೆ ಗಣಿಗ ರವಿಗೆ ಟಿಕೆಟ್ ನೀಡಲಾಗಿದೆ. ಆದರೆ ರಮ್ಯಾಗೆ ಇನ್ನೂ ಅವಕಾಶ ಇದೆ. ಚುನಾವಣೆಗೆ ನಿಲ್ಲಲು ಸಾಧ್ಯವಾಗದೇ ಇದ್ದರೂ, ಮಂಡ್ಯ ಕಾಂಗ್ರೆಸ್ನಲ್ಲಿ ಈಗ ಸೃಷ್ಠಿಯಾಗಿರುವ ನಿರ್ವಾತವನ್ನು ತುಂಬುವ ಅವಕಾಶವಂತೂ ಇದೆ ಆದರೆ ಅವರು ಪ್ರಬುದ್ಧವಾಗಿ ರಾಜಕಾರಣ ಮಾಡಬೇಕಷ್ಟೆ. ನೆನಪಿರಲಿ ಹೈಕಮಾಂಡ್ ಕೂಡಾ ರಮ್ಯಾಗೆ ಅವರ ಬೆನ್ನಿಗಿದೆ.

ಚೆಲುವರಾಯಸ್ವಾಮಿಗೆ ಇದೆ ಅವಕಾಶ
ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಬಂದಿರುವ ಸಪ್ತ ಶಾಸಕರಲ್ಲಿ ಒಬ್ಬರಾದ ಚೆಲುವಾರಯಸ್ವಾಮಿ ಅವರೊಂದಿಗೆ ಅಂಬಿಗೆ ಮುಸುಕಿನ ಗುದ್ದಾಟ ಇದೆ ಎನ್ನು ಗುಲ್ಲು ಮಂಡ್ಯದಲ್ಲಿದೆ. ಈಗ ಅಂಬಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಮೇಲೆ ಮಂಡ್ಯ ಉಸ್ತುವಾರಿ ಚೆಲುವರಾಯಸ್ವಾಮಿ ಹೆಗಲಿಗೆ ಬಿದ್ದಂತಾಗಿದೆ. ಇದರಿಂದ ಚೆಲುವರಾಯಸ್ವಾಮಿ ಕಾಂಗ್ರೆಸ್ನಲ್ಲಿ ತಳವೂರಲು ಸಹಾಯ ಸಹ ಆಗಬಹುದಾಗಿದೆ.












Click it and Unblock the Notifications