ಮತದಾನಕ್ಕೆ ಇನ್ನೊಂದೇ ವಾರ, ಮಂಡ್ಯದಲ್ಲಿ ಇನ್ನೂ ಕೈ-ತೆನೆ ಹೊಂದಾಣಿಕೆ ಇಲ್ಲ!
ಮಂಡ್ಯ, ಏಪ್ರಿಲ್ 10: ಮಂಡ್ಯ ಜಿಲ್ಲೆಯಾದ್ಯಂತ ತಾಲೂಕು ಮಟ್ಟದಿಂದಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದು, ಎಲ್ಲ ಕಡೆಯೂ ನಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಳವಳ್ಳಿ ಪಟ್ಟಣದ ಮಹದೇಶ್ವರ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೂಡ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಸಭೆಗೆ ಮಾಜಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಅವರ ಬೆಂಬಲಿಗರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು, ಯಾವುದೇ ಮುಖಂಡರು, ಪಕ್ಷದ ಚುನಾಯಿತ ಪ್ರತಿನಿಧಿಗಳಾದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪುರಸಭಾ ಸದಸ್ಯರು ಹಾಜರಾಗದಿರುವುದು ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳುತ್ತಿದೆ.
ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾಗೆ ಗೆಲುವು: ಸಮೀಕ್ಷೆ ವರದಿ
ಚುನಾವಣೆ ದಿನಾಂಕದೊಳಗೆ ಕಾಂಗ್ರೆಸ್ ನ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರನ್ನು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆ ಮಾಡುವಂತೆ ಮನವೊಲಿಸಬೇಕು ಎಂದು ಸರ್ವ ರೀತಿಯಲ್ಲಿಯೂ ಪ್ರಯತ್ನಿಸಲಾಗುತ್ತಿದೆ. ಆದರೂ ಅದು ಸದ್ಯಕ್ಕೆ ಕೈಗೂಡುವ ಯಾವ ಸೂಚನೆಯೂ ಕಂಡು ಬರುತ್ತಿಲ್ಲ.
ಕಾರ್ಯಕರ್ತರನ್ನು ನಂಬಿಕೊಂಡು ಮೈತ್ರಿ ಮಾಡಿಕೊಂಡಿದೆ
ರಾಜ್ಯ ನಾಯಕರ ಸೂಚನೆ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸುವ ಮುಖಂಡರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಈ ಕುರಿತಂತೆ ಕೆಪಿಸಿಸಿ ವೀಕ್ಷಕ ಹಾಗೂ ರಾಜ್ಯಸಭಾ ಸದಸ್ಯರೂ ಆದ ರಾಜೀವ್ ಅವರು, ಸಭೆಗೆ ಬಾರದ ಮಾಜಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಮತ್ತು ಬೆಂಬಲಿಗರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರನ್ನು ನಂಬಿಕೊಂಡು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆಯೇ ಹೊರತು ಮುಖಂಡರನ್ನು ನೆಚ್ಚಿಕೊಂಡು ಅಲ್ಲ ಎಂದಿದ್ದಾರೆ.
ಕೋಮುವಾದಿ ಪಕ್ಷವನ್ನು ಕಿತ್ತೊಗೆಯುವ ಸಲುವಾಗಿ ನಿರ್ಧಾರ
ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತಲೂ ದೇಶ ಮುಖ್ಯ ಈ ಧ್ಯೇಯವನ್ನಿಟ್ಟುಕೊಂಡು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ಗಾಂಧಿ ಅವರು ಕೋಮುವಾದಿ, ಬಡವರು ದೀನದಲಿತರ ವಿರೋಧಿ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಸಲುವಾಗಿ ಜಾತ್ಯತೀತ ತತ್ವದ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. 7 ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟು, 21 ಕ್ಷೇತ್ರಗಳನ್ನು ಕಾಂಗ್ರೆಸ್ ಉಳಿಸಿಕೊಂಡಿದೆ ಎಂದು ಹೇಳಿದ್ದಾರೆ.
ಮನವೊಲಿಸಲು ಬಂದ ಕೈ ನಾಯಕರಿಗೆ ನಿರಾಸೆ
21 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ನಮ್ಮನ್ನು ಬೆಂಬಲಿಸುತ್ತಿರುವಾಗ, 7 ಕ್ಷೇತ್ರಗಳಲ್ಲಿ ಅವರಿಗೆ ನಾವು ಬೆಂಬಲ ನೀಡಬೇಕಾಗಿರುವುದು ಧರ್ಮ ಎನ್ನುವ ಮೂಲಕ ಕಾರ್ಯಕರ್ತರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಸಭೆಗೆ ಮಳವಳ್ಳಿ ವ್ಯಾಪ್ತಿಯ ಪ್ರಮುಖ ನಾಯಕರಾದ ಪಿ.ಎಂ.ನರೇಂದ್ರಸ್ವಾಮಿ ಮತ್ತು ಬೆಂಬಲಿಗರೇ ಬಾರದಿರುವುದು ಕಾರ್ಯಕರ್ತರನ್ನು ಮನವೊಲಿಸಲು ಬಂದ ಕೈ ನಾಯಕರಿಗೆ ನಿರಾಸೆಯನ್ನುಂಟು ಮಾಡಿದೆ.
ಕಾಂಗ್ರೆಸ್-ಜೆಡಿಎಸ್ ಒಂದಾಗಲು ಸಾಧ್ಯವಿಲ್ಲ ಎಂಬ ಸಂದೇಶ
ಅಲ್ಲದೆ, ಏನೇ ಪ್ರಯತ್ನ ಮಾಡಿದರೂ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗುವುದು ಕಷ್ಟ ಎಂಬ ಸಂದೇಶ ರವಾನೆಯಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣದಲ್ಲಿ ಇದ್ದರೆ, ಸ್ವತಂತ್ರ ಅಭ್ಯರ್ಥಿ ಆಗಿರುವ ಸುಮಲತಾ ಅಂಬರೀಶ್ ಗೆ ಬಿಜೆಪಿ ಬೆಂಬಲ ಸೂಚಿಸಿದೆ.