ಮಂಡ್ಯ: ಕೆರೆಕಟ್ಟೆಗೆ ನೀರು ತುಂಬಿಸಲು ಆಗ್ರಹಿಸಿ ಪ್ರತಿಭಟನೆ
ಮಂಡ್ಯ, ಜುಲೈ 14: ಹೇಮಾವತಿ ಜಲಾಶಯದಿಂದ ತಾಲೂಕಿನ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಬೇಕು ಹಾಗೂ 100 ವರ್ಷಗಳ ಹಿಂದಿನ ಕಾವೇರಿ ಒಪ್ಪಂದವನ್ನು ರದ್ದು ಮಾಡಿ ಹೊಸ ವೈಜ್ಞಾನಿಕ ಒಪ್ಪಂದವನ್ನು ರಚಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕೆ.ಆರ್.ಪೇಟೆಯಲ್ಲಿ ರೈತರು ತಮ್ಮ ಎತ್ತಿನ ಗಾಡಿಗಳು ಮತ್ತು ಜಾನುವಾರುಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಪಟ್ಟಣದ ಪ್ರವಾಸಿ ಮಂದಿರ ವೃತ್ತಕ್ಕೆ ತಮ್ಮ ಎತ್ತಿನ ಗಾಡಿಗಳೊಂದಿಗೆ ಜಮಾಯಿಸಿದ ಸಾವಿರಾರು ಸಂಖ್ಯೆಯ ರೈತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ರೈತರು ಮಿನಿ ವಿಧಾನ ಸೌಧದ ಆವರಣದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಕಾವೇರಿ ಜಲ ವಿವಾದ ಆರಂಭಕ್ಕೆ ಮೊದಲೇ ರಾಜ ಮಹಾರಾಜರ ಕಾಲದಲ್ಲಿ ನಿರ್ಮಿಸಿದ ಮಂದಗರೆ, ಹೇಮಗಿರಿ ಮತ್ತು ಅಕ್ಕಿಹೆಬ್ಬಾಳು ನದಿ ಅಣೆಕಟ್ಟೆ ನಾಲೆಗಳು ತಾಲೂಕಿನಲ್ಲಿದ್ದು, ಈ ನಾಲೆಗಳ ನೀರು ಬಳಕೆದಾರರು ಹೇಮಾವತಿ ನದಿ ನೀರಿನ ಮೂಲ ಹಕ್ಕುದಾರರು.
ರಾಜ್ಯ ಸರಕಾರ ನದಿಯ ನೀರನ್ನು ಕಾಲುವೆಗಳಲ್ಲಿ ಹರಿಸದೆ ಹೇಮಾವತಿ ಜಲಾಶಯದಲ್ಲಿ ಸಂಗ್ರಹಿಸಿಡುವ ಮೂಲಕ ರೈತರ ನೀರಿನ ಹಕ್ಕನ್ನು ಕಿತ್ತು ತಮಿಳುನಾಡಿಗೆ ಕೊಡುಗೆಯಾಗಿ ನೀರುತ್ತಿದೆ ಹಾಗಾಗಿ ತಕ್ಷಣವೇ ನದಿ ಅಣೆಕಟ್ಟೆಯ ನಾಲೆಗಳಲ್ಲಿ ನೀರು ಹರಿಸಬೇಕು. ಹೇಮಾವತಿ ನೀರಿನಿಂದ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಇಂದು ಮಳೆಯಾಗದಿದ್ದರೂ ಮೋಡ ಕವಿದ ವಾತಾವರಣವಿದ್ದು ಇದು ಮೋಡ ಬಿತ್ತನೆ ಅತ್ಯಂತ ಸೂಕ್ತವಾಗಿದೆ. ಸೂಕ್ತ ಕಾಲದಲ್ಲಿ ಮೋಡ ಬಿತ್ತನೆ ಮಾಡದೆ ಮೋಡಗಳು ಖಾಲಿಯಾದ ಅನಂತರ ನಮ್ಮ ಸರಕಾರಗಳು ಮೋಡ ಬಿತ್ತನೆಗೆ ಮುಂದಾಗುವ ಮೂಲಕ ಸಾರ್ವಜನಿಕರ ಹಣವನ್ನು ಲೂಟಿ ಹೊಡೆಯುತ್ತಿವೆ ಎಂದು ಪುಟ್ಟಣ್ಣಯ್ಯ ಕಿಡಿ ಕಾರಿದರು.
ಪ್ರತಿಭಟನೆಯ ಅಂಗವಾಗಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಎತ್ತಿನಗಾಡಿಗಳೊಂದಿಗೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ಚಳವಳಿ ನಡೆಸಿದ ಸಾವಿರಾರು ಪ್ರತಿಭಟನಾಕಾರರು ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಿ, ತಾಲೂಕಿಗೆ ನೀರು ಹರಿಸಿ ಎಂದು ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿ ವರೆಗೆ ಬೃಹತ್ ಮೆರವಣಿಗೆ ನಡೆಸಿದರು.












Click it and Unblock the Notifications