ಮಂಡ್ಯ: ತನ್ನ ವಿರುದ್ಧ ಮಾಡಿದ ಟೀಕೆಗಳಿಗೆ ಉತ್ತರ ನೀಡಿದ ಡಿ-ಬಾಸ್
Recommended Video
ಮಂಡ್ಯ, ಏಪ್ರಿಲ್ 16: ಮಂಡ್ಯ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನಟ ದರ್ಶನ್ ಅವರು ಇಷ್ಟು ದಿನ ರಕ್ಷಣಾತ್ಮಕವಾಗಿಯೇ ಪ್ರಚಾರ ಭಾಷಣಗಳನ್ನು ಮಾಡಿದ್ದರು. ಆದರೆ ಇಂದು ಅವರು ಸ್ವಲ್ಪ ಮುಂದೆ ಹೋಗಿ ಎದುರಾಳಿಗಳಿಗೆ ಖಡಕ್ ಪ್ರತಿಕ್ರಿಯೆಗಳನ್ನು ನೀಡಿದರು.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಮಂಡ್ಯದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ದರ್ಶನ್, ಅವರು ಕೊಡುವ ಹಣಕ್ಕೆ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ, ನಾಯಿ, ಕುರಿ ಮೇಕೆಗಳಿಗಿಂತಲೂ ಕಡೆಯಾ ನೀವು ಎಂದು ಮಂಡ್ಯದ ಮತದಾರರನ್ನು ಕೇಳಿದರು.
ತಮ್ಮ ತೋಟದ ಮನೆಯ ಮೇಲೆ ಐಟಿ ದಾಳಿ ಆಗಿದೆಯೆಂಬ ವದಂತಿ ಹಬ್ಬಿಸಿದವರ ವಿರುದ್ಧ ಮಾತನಾಡಿದ ಅವರು, ತೋಟದ ಮನೆಯಲ್ಲಿ ಡೈರಿ ಸಿಕ್ಕಿದೆ ಎನ್ನುತ್ತಿದ್ದಾರೆ. ಅಲ್ಲಿ ಸಿಕ್ಕಿದ್ದರೆ, ಎಷ್ಟು ಹಸುಗಳಿವೆ, ಎಷ್ಟು ಕರುಗಳು ಹಾಕಿವೆ, ಡೈರಿಗೆ ಎಷ್ಟು ಹಾಲು ಹಾಕಿದ್ದೀವಿ, ಯಾವಾಗ ಇಂಜೆಕ್ಷನ್ ಹಾಕಿಸಿದ್ದೀವಿ ಎಂದು ಲೆಕ್ಕ ಇರುತ್ತದೆ ಅಷ್ಟೆ ಎಂದು ಹೇಳಿದರು.
ಸಿನಿಮಾದವರಿಗೆ ರೈತರ ಕಷ್ಟ ಗೊತ್ತಿರಲ್ಲ ಎಂಬ ಎಚ್ಡಿಕೆ ಮಾತಿಗೆ ಪ್ರತಿಕ್ರಿಯಿಸಿದ ದರ್ಶನ್, ನಾನು ಪ್ರಾಣಿಗಳನ್ನು ಸಾಕಿದ್ದೇನೆ, ತೋಟದಲ್ಲಿ ಬೆಳೆ ಬೆಳೆಯುತ್ತೇವೆ, ನನಗೆ ರೈತರ ಕಷ್ಟ ಅರಿವಿಲ್ಲ ಎನ್ನುವವರು ಒಂದು ಲೋಟ ಹಾಕು ಕರೆದು ಕೊಡಲಿ ಸಾಕು ಎಂದು ಸವಾಲು ಹಾಕಿದರು.

'ಕುಮಾರಸ್ವಾಮಿಯಿಂದ ನನ್ನ ಹೆಸರು ಇನ್ನಷ್ಟು ಫೇಮಸ್'
ಕುಮಾರಸ್ವಾಮಿಗೆ ಧನ್ಯವಾದವನ್ನೂ ಅರ್ಪಿಸಿದ ದರ್ಶನ್, ಮುಂಚೆ ಕಡಿಮೆ ಜನರು ನನ್ನನ್ನು ಡಿ-ಬಾಸ್ ಎನ್ನುತ್ತಿದ್ದರು, ಕುಮಾರಸ್ವಾಮಿ ಅವರು ಹೇಳಿದ ಮೇಲೆ ರಾಜ್ಯದ ಜನರೆಲ್ಲಾ ಡಿ-ಬಾಸ್ ಎನ್ನುತ್ತಿದ್ದಾರೆ. ಅವರಿಗೆ ನನ್ನ ಧನ್ಯವಾದ ಎಂದರು. ಸಿನಿಮಾದವರನ್ನು ನಂಬಬೇಡಿ ಎನ್ನುವ ನೀವು ಮತ್ತು ನಿಮ್ಮ ಅಭ್ಯರ್ಥಿ ಸಹ ಚಿತ್ರರಂಗದವರು ಎನ್ನುವುದನ್ನು ಮರೆಯಬೇಡಿ ಎಂದು ಹೇಳಿದರು.

'ನಾನು,ಯಶ್ ಆಟೋದಲ್ಲಿ ಪ್ರಚಾರ ಮಾಡಿದ್ದೇವೆ'
ಸುಖದಲ್ಲಿ ಇರುವವರಿಗೆ ಮಂಡ್ಯದ ಜನರ ಕಷ್ಟ ಗೊತ್ತಾಗುವುದಿಲ್ಲ ಎಂದಿದ್ದ ಮಾತಿಗೆ ಪ್ರತ್ಯುತ್ತರ ನೀಡಿದ ದರ್ಶನ್, ನಾನು, ಯಶ್ ಆಪೆ ಆಟೋದಲ್ಲಿ ಸುತ್ತಾಡಿ ಪ್ರಚಾರ ಮಾಡಿದ್ದೇವೆ, ಸುಸಜ್ಜಿತ ಎಸಿ ವಾಹನದಲ್ಲಿ ಅಲ್ಲ ಎಂದು ಟಾಂಗ್ ನೀಡಿದರು. ಕುಮಾರಸ್ವಾಮಿ ಅವರ ಬಳಿ ಸುಸಜ್ಜಿತ ಪ್ರಚಾರ ವಾಹನವೇ ಇದ್ದು, ಅದರಲ್ಲಿಯೇ ಅವರು ಪ್ರಚಾರ ಮಾಡಿದರು.

ನಾವು ನಮ್ಮ ಅಮ್ಮನ ಪರವಾಗಿ ಬಂದಿದ್ದೇವೆ: ದರ್ಶನ್
ದರ್ಶನ್, ಯಶ್ ಚುನಾವಣಾ ಪ್ರಚಾರಕ್ಕೆ ಬಂದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಗ್ಗೆ ಮಾತನಾಡಿದ ದರ್ಶನ್, ನಾವು ನಮ್ಮ ಅಮ್ಮನ ಪರವಾಗಿ ಬಂದಿದ್ದೇವೆ, ಆಕೆಯ ಪರವಾಗಿಯೇ ನಿಲ್ಲುತ್ತೇವೆ. ಅಮ್ಮನ ಪರವಾಗಿ ಕೆಲಸ ಮಾಡುವುದು ತಪ್ಪು ಎನ್ನುವುದಾದರೆ ಜೀವನ ಪರ್ಯಂತ ಈ ಕೆಲಸ ಮಾಡುತ್ತೇವೆ ಎಂದು ದರ್ಶನ್ ಹೇಳಿದರು.

'ವರ್ಷಕ್ಕೆ 2.50-3 ಕೋಟಿ ಹಣ ದಾನ ಮಾಡುತ್ತೇನೆ'
ಸಿನಿಮಾದವರು ಜನಕ್ಕಾಗಿ ಏನು ಮಾಡಿದ್ದಾರೆ? ಎಂಬ ಜೆಡಿಎಸ್ ಆರೋಪಕ್ಕೆ ಉತ್ತರಿಸಿದ ದರ್ಶನ್, ನನಗೆ ವರ್ಷಕ್ಕೆ 2.50-3 ಕೋಟಿ ಹಣ ದಾನ ಮಾಡಲು ಬೇಕಾಗುತ್ತದೆ. ಪ್ರತಿದಿನ ಯಾರಾದರೂ ನೆರವು ಕೇಳಿಕೊಂಡು ಬರುತ್ತಲೇ ಇರುತ್ತಾರೆ. ನಾನು ಮಾತ್ರವಲ್ಲ ಚಿತ್ರರಂಗದ ಹಲವರು ಈ ಕೆಲಸ ಮಾಡುತ್ತಿದ್ದಾರೆ. ಇದೆಲ್ಲಾ ನಾನು ಸ್ವಂತ ದುಡಿದ ದುಡ್ಡು, ಕಳ್ಳ ದುಡ್ಡಲ್ಲ ಎಂದು ಹೇಳಿದರು.

'ಸುಮಲತಾಗೆ ಮತ ಹಾಕಿ ಋಣಿಯಾಗಿರುತ್ತೇನೆ'
ಸುಮಲತಾ ಅವರಿಗೆ ಮತ ಹಾಕಿ ಗೆಲ್ಲಿಸಿದರೆ ಜೀವನ ಪರ್ಯಂತ ನಿಮಗೆ ಋಣಿಯಾಗಿರುತ್ತೇನೆ ಎಂದ ದರ್ಶನ್, ಸುಮಲತಾ ಅವರು ಗೆದ್ದರೆ ಮಂಡ್ಯವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತಾರೆ. ಇನ್ನೆರಡು ದಿನ ಇದೆ ಯೋಧರ ರೀತಿ ಕೆಲಸ ಮಾಡಿ, ಸುಮಲತಾ ಅವರು ಗೆಲ್ಲುವಂತೆ ಮಾಡಿ ಎಂದು ದರ್ಶನ್ ಹೇಳಿದರು.












Click it and Unblock the Notifications