ಮಂಡ್ಯದಲ್ಲಿ ಗೌಡ್ರ ಗದ್ದಲ ಜೋರು: ಅವನೊಬ್ಬ ರಾಜಕೀಯ ವ್ಯಭಿಚಾರಿ!
ಮಂಡ್ಯ, ಆಗಸ್ಟ್ 26: ರಾಜಕೀಯ ಮೇಲಾಟಕ್ಕೆ ಹೆಸರಾದ ಮಂಡ್ಯ ಜಿಲ್ಲೆಯಲ್ಲಿ, ಇಬ್ಬರು ಪ್ರಭಾವೀ ಮುಖಂಡರ ನಡುವಿನ ವಾಕ್ಸಮರ ಜೋರು ಸದ್ದು ಮಾಡಲಾರಂಭಿಸಿದೆ.
ನಾಗಮಂಗಲ ಕ್ಷೇತ್ರದಲ್ಲಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸೋತಿದ್ದ ಚೆಲುವರಾಯಸ್ವಾಮಿ, ಸಿದ್ದರಾಮಯ್ಯನವರನ್ನು ಸಮರ್ಥಿಸಿಕೊಳ್ಳುತ್ತಾ, ಮಾಜಿ ಪ್ರಧಾನಿ ದೇವೇಗೌಡರ ವಿರುದ್ದ ವಾಗ್ದಾಳಿ ನಡೆಸಿದ್ದರು.
ಸಿದ್ದರಾಮಯ್ಯ ನೇರವಾಗಿ ಮಾತನಾಡುತ್ತಾರೆ ಆದರೆ ಬೆನ್ನಿಗೆ ಚೂರಿ ಹಾಕುವವರಲ್ಲ: ಚೆಲುವರಾಯಸ್ವಾಮಿ
ಚೆಲುವರಾಯಸ್ವಾಮಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಹಾಲೀ ಶಾಸಕ ಸುರೇಶ್ ಗೌಡ, "ಅವನೊಬ್ಬ ರಾಜಕೀಯ ವ್ಯಭಿಚಾರಿ" ಎನ್ನುವ ಪದವನ್ನು ಬಳಸಿದ್ದಾರೆ.
" ಸಮ್ಮಿಶ್ರ ಸರಕಾರ ಪತನಗೊಂಡಾಗಲೇ ನಾವು ಚುನಾವಣೆಗೆ ಸಜ್ಜಾಗಿದ್ದೇವೆ. ನಾವು ಯಾರ ಹಂಗಲ್ಲೂ ಇಲ್ಲ " ಎಂದು ಸುರೇಶ್ ಗೌಡ, ಪರೋಕ್ಷವಾಗಿ ಕಾಂಗ್ರೆಸ್ಸಿಗೆ ಚಾಟಿ ಬೀಸಿದ್ದಾರೆ.
" ಸಿದ್ದರಾಮಯ್ಯ ಅವರು ಇದ್ದಿದ್ದನ್ನು ಇದ್ದಹಾಗೆ ನೇರವಾಗಿ ಮಾತನಾಡುವ ಮನುಷ್ಯ ಯಾವುದೇ ಕಾರಣಕ್ಕೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವವರಲ್ಲ" ಎಂದು ಚೆಲುವರಾಯಸ್ವಾಮಿ ಹೇಳಿದ್ದರು.
" ಮೊದಲೇ ಸಿದ್ದರಾಮಯ್ಯ ಇರೋದಾದರೆ ನಮಗೆ ಕಾಂಗ್ರೆಸ್ ಸಹವಾಸ ಬೇಡ ಎಂದು ಹೇಳಬೇಕಿತ್ತು. ಮಂಡ್ಯದಲ್ಲಿ ಡಮ್ಮೀ ಅಭ್ಯರ್ಥಿ ಹಾಕಿಸಿಕೊಂಡು ಗೆದ್ದಿದ್ದೀರಿ. ಒಕ್ಕಲಿಗರ ಸಮಾಜವನ್ನು ಬಳಸಿಕೊಂಡು ಹೀಗೇಕೆ ಮಾಡುತ್ತಿದ್ದೀರಿ" ಎಂದು ದೇವೇಗೌಡ್ರ ಕುಟುಂಬವನ್ನು ಚೆಲುವರಾಯಸ್ವಾಮಿ ಪ್ರಶ್ನಿಸಿದ್ದರು.