ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಳು ಚಿತ್ರರಂಗ ರಾಜಕೀಯದಿಂದ ದೂರ ಉಳಿಯಲು ಕಾರಣಗಳೇನು?

By ಗುರುರಾಜ ಕೆ
|
Google Oneindia Kannada News

ಮಂಗಳೂರು, ಏಪ್ರಿಲ್ 25 : ಚುನಾವಣೆ ವಿಷಯ ಬಂದಾಗ ಚಿತ್ರರಂಗ ಹಾಗೂ ರಾಜಕೀಯ ರಂಗಗಳು ಒಂದಕ್ಕೊಂದು ಬೆಸೆದುಕೊಂಡಿವೆ. ದೇಶದ ಎಲ್ಲಾ ರಾಜ್ಯಗಳ ಚಿತ್ರರಂಗಗಳು ಅಲ್ಲದೆ ಕರ್ನಾಟಕದ ಚಿತ್ರರಂಗವೂ ಇದಕ್ಕೆ ಹೊರತಾಗಿಲ್ಲ. ನಟರು ರಾಜಕೀಯ ನಾಯಕರಾಗಿ ಆಯ್ಕೆಯಾಗಿದ್ದಾರೆ. ರಾಜಕೀಯ ಮುಖಂಡರು ಸಿನಿಮಾಗಳಲ್ಲಿ ನಟನೆ ಮಾಡಿ ಹೀರೋಗಳು ಕೂಡ ಆಗಿದ್ದಾರೆ.

ಆದರೆ ಇಲ್ಲೊಂದು ಚಿತ್ರರಂಗವಿದೆ. ಅದು ಮಾತ್ರ ರಾಜಕೀಯ ರಂಗದ ವಿಷಯದಲ್ಲಿ ಸಂಪೂರ್ಣ ವಿಭಿನ್ನ. ಅದೇ ತುಳುನಾಡಿನ ಕೋಸ್ಟಲ್ ವುಡ್. ತುಳು ಚಿತ್ರರಂಗ ರಾಜಕೀಯ ವಿಷಯದಲ್ಲಿ ಅಂತರ ಕಾಯ್ದುಕೊಂಡಿದೆ. ಕನ್ನಡ ಚಿತ್ರರಂಗದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಂಡವರು ಬಹಳ ಮಂದಿ ಕಾಣಸಿಗುತ್ತಾರೆ. ಕೆಲವರು ನಟರಾಗಿ ರಾಜಕೀಯ ರಂಗ ಪ್ರವೇಶಿಸಿ ಮಂತ್ರಿಗಳಾಗಿ ಅಧಿಕಾರವನ್ನೂ ಅನುಭವಿಸಿದ್ದಾರೆ.

ಸುಶಿಕ್ಷಿತ, ನಗರ ಪ್ರದೇಶದ ಜನರೇ ಮತಗಟ್ಟೆಗಳ ಬಳಿ ಸುಳಿಯದಿರಲು ಕಾರಣವೇನು? ಸುಶಿಕ್ಷಿತ, ನಗರ ಪ್ರದೇಶದ ಜನರೇ ಮತಗಟ್ಟೆಗಳ ಬಳಿ ಸುಳಿಯದಿರಲು ಕಾರಣವೇನು?

ತಮಿಳು ಚಿತ್ರರಂಗದಲ್ಲಿ ಬಹುತೇಕ ನಟರು ಯಾವುದಾದರೂ ಒಂದು ಪಕ್ಷದಲ್ಲಿ ಗುರುತಿಸಿಕೊಂಡಿರುತ್ತಾರೆ. ಅಲ್ಲದೇ ಮುಖ್ಯಮಂತ್ರಿಗಳಾಗಿ ಮೆರೆದವರೂ ಇದ್ದಾರೆ. ಚುನಾವಣೆ ಬರುತ್ತಿದ್ದಂತೆ ಚಲನಚಿತ್ರ ನಟರಿಗೆ, ನಟಿಯರಿಗೆ ಇನ್ನಿಲ್ಲದ ಬೇಡಿಕೆ ಬರುತ್ತದೆ. ಕೆಲವರಿಗೆ ಚುನಾವಣೆ ನಿಲ್ಲಲು ಅಭ್ಯರ್ಥಿಯಾಗಲು ಅವಕಾಶ ಬಂದರೆ ಕೆಲವರಿಗೆ ಚುನಾವಣೆಯಲ್ಲಿ ಪ್ರಚಾರಕ್ಕೆ ಪಕ್ಷಗಳಿಂದ ಆಹ್ವಾನ ಬರುತ್ತದೆ.

Tulu cinema industry is far away from politics

ಆದರೆ ಈ ಎಲ್ಲಾ ಚಿತ್ರರಂಗಕ್ಕೆ ವಿರುದ್ಧವಾಗಿರುವುದು ತುಳು ಚಿತ್ರರಂಗ. ಇಲ್ಲಿ ಚಿತ್ರರಂಗದಲ್ಲಿ ಗುರುತಿಸಿಕೊಂಡ ಒಂದಿಬ್ಬರು ಮಾತ್ರ ರಾಜಕೀಯದಲ್ಲಿದ್ದಾರೆ. ಅದು ಬಿಟ್ಟರೆ ಸದ್ಯ ಚಿತ್ರರಂಗದಲ್ಲಿರುವ ಯಾವುದೇ ನಟ, ನಟಿ, ಕಲಾವಿದರು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ಅಲ್ಲದೆ ರಾಜಕೀಯವನ್ನು ದೂರವೇ ಇಟ್ಟಿದ್ದಾರೆ ಎಂದು ಹೇಳಬಹುದು. ಪಕ್ಷದ ಮುಖಂಡರ ಜೊತೆ ಗುರುತಿಸಿಕೊಳ್ಳುವುದಾಗಲಿ, ಅವರ ಪರ ಪ್ರಚಾರ ಚಟುವಟಿಕೆಗಳಲ್ಲಿ ಭಾಗವಹಿಸುವುದಾಗಲೀ ಇಲ್ಲ.

ಸೀಮಿತ ಪ್ರೇಕ್ಷಕರು ಇರುವುದರಿಂದ ಒಂದು ಪಕ್ಷದೊಂದಿಗೆ ಗುರುತಿಸಿಕೊಂಡರೆ ತಮ್ಮ ಚಿತ್ರಗಳ ಮೇಲೆ ಪರಿಣಾಮ ಬೀರಬಹುದು ಎನ್ನುವುದು ಒಂದು ಕಾರಣವಾದರೆ , ಕಲಾವಿದನಾದವ ಒಂದು ಜಾತಿ, ಧರ್ಮ, ಪಕ್ಷದೊಂದಿಗೆ ಗುರುತಿಸಿಕೊಳ್ಳಬಾರದು ಎನ್ನುವುದು ಇನ್ನೊಂದು ಕಾರಣ ಎನ್ನುವುದು ಹಿರಿಯ ಕಲಾವಿದರ ಅಭಿಮತ. ಇಲ್ಲಿಯ ರಾಜಕೀಯ ಮುಖಂಡರು ತುಳು ಚಿತ್ರರಂಗದ ನಟ ನಟಿಯರನ್ನು ಪಕ್ಷದ ಪ್ರಚಾರಕ್ಕೆ ಕರೆಯುವುದು ಬಹಳ ಕಡಿಮೆ. ಅಲ್ಲದೆ ತುಳು ಚಿತ್ರರಂಗದ ಬಹುತೇಕ ಕಲಾವಿದರು ಎಲ್ಲಾ ಪಕ್ಷಗಳ ಮುಖಂಡರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ.

ಕರಾವಳಿಯಲ್ಲಿ ಸಿನಿಮಾ ನಟರ ಪ್ರಚಾರ ನೋಡಲು ಬರುವ ಜನರು ಕಡಿಮೆ. ಇಲ್ಲಿ ನಟ, ನಟಿಯರನ್ನು ನೋಡಲು ಮುಗಿಬೀಳುವುದು ಅಥವಾ ಅವರನ್ನು ಮಾತನಾಡಿಸಲು ಮುಗಿ ಬೀಳುವರ ಸಂಖ್ಯೆಯೂ ಕಡಿಮೆ. ಹಿರಿಯ ತುಳು ಚಿತ್ರರಂಗದ ಕೆಲವೊಬ್ಬರು ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿದ್ದರು. 1971ರಲ್ಲಿ ಬಿಡುಗಡೆಯಾಗಿದ್ದ 'ಎನ್ನ ತಂಗಡಿ' ಚಿತ್ರದಲ್ಲಿ ನಟಿಸಿದ್ದ ಲೋಕಯ್ಯ ಶೆಟ್ಟಿ ರಾಜಕೀಯದಲ್ಲಿ ಗುರುತಿಸಿಕೊಂಡು ಸುರತ್ಕಲ್ ಶಾಸಕರಾಗಿದ್ದರು. 1978ರಲ್ಲಿ ಬಿಡುಗಡೆಯಾಗಿದ್ದ 'ಸಂಗಮ ಸಾಕ್ಷಿ' ಚಿತ್ರದ ನಿರ್ಮಾಪಕರಾಗಿದ್ದ ವಸಂತ ಬಂಗೇರ ಬೆಳ್ತಂಗಡಿ ಶಾಸಕರಾಗಿದ್ದಾರೆ. ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಅವರು 2011ರಲ್ಲಿ ಬಿಡುಗಡೆಯಾದ ಕಂಚಿಲ್ದ ಬಾಲೆ ಚಿತ್ರದಲ್ಲಿ ನಟಿಸಿದ್ದರು.

"ಕಲಾವಿದರು ಎಲ್ಲಾ ಪಕ್ಷದ ನಾಯಕರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿರುತ್ತಾರೆ. ಒಂದು ಪಕ್ಷದಲ್ಲಿ ಗುರುತಿಸಿಕೊಂಡರೆ ಇನ್ನೊಂದು ಪಕ್ಷದವರೊಂದಿಗೆ ಇದ್ದ ಸಂಬಂಧ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಅಭಿಮಾನಿಗಳು ತಾವು ಇಷ್ಟ ಪಡುವ ನಟರು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ, ಈ ಹಿನ್ನಲೆಯಲ್ಲಿ ನಟರು ತಟಸ್ಥರಾಗಿರುವುದು ಉತ್ತಮ" ಎನ್ನುತ್ತಾರೆ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್.

English summary
Tulu cinema industry is far away from politics. People not see political promotion of film actors. It's very different compared to other industry. Few actors only came to politics. Infact Artists have a good relationship with all political party leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X