ತಮಿಳು ಭಾಷಿಕರಿಗೆ ಮಂಡ್ಯದಲ್ಲಿ ರಕ್ಷಣೆ ಕೊಡ್ತೀವಿ
ಪಾಂಡವಪುರ, ಸೆಪ್ಟೆಂಬರ್ 13: ಪಟ್ಟಣದಲ್ಲಿ ತಮಿಳು ಭಾಷಿಕರ ಮನೆ, ಹೋಟೆಲ್, ಕಾಂಪ್ಲೆಕ್ಸ್, ಕಾರು ಹಾಗೂ ನಿವೃತ್ತ ಜಡ್ಜ್ ಮನೆ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿ, ಸುಟ್ಟು ಹಾಕಿ ದಾಂಧಲೆ ನಡೆಸಿದ ಮನೆಗಳಿಗೆ ಮಂಗಳವಾರ ಸಂಸದ ಸಿ.ಎಸ್.ಪುಟ್ಟರಾಜು ಭೇಟಿ ನೀಡಿ, ಸಾಂತ್ವನ ಹೇಳಿದರು.
ಪಟ್ಟಣದ ನಿವೃತ್ತ ಜಡ್ಜ್ ಸಿ.ಶಿವಪ್ಪ ಅವರ ಮನೆ, ಆನಂದ್ ಮಾಲೀಕತ್ವ ಆನಂದ್ ಕಾಂಪ್ಲೆಕ್ಸ್, ಮನೆ ಹಾಗೂ ಪಳಿನಿ ಹೋಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತಿಭಟನೆ ವೇಳೆ ಉದ್ರಿಕ್ತ ಪ್ರತಿಭಟನಾಕಾರರು, ಯುವಕರ ಆತುರದಿಂದಾಗಿ ಇಂತಹ ಅನಾಹುತ ಸಂಭವಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವುದಾಗಿ ಹೇಳಿದರು.['ಗಂಟೆಗೊಂದು ಮಾತಾಡುವ ಸಿದ್ದರಾಮಯ್ಯನ್ನ ನಾವು ನಂಬಲ್ಲ']

ಪಟ್ಟಣದಲ್ಲಿ ವಾಸಿಸುತ್ತಿರುವ ತಮಿಳು ಭಾಷಿಕರು ಭಯಪಡುವ ಅಗತ್ಯ ಇಲ್ಲ. ನಿಮ್ಮ ಜೊತೆಯಲ್ಲಿ ನಾವಿದ್ದೇವೆ. ನಷ್ಟ ಉಂಟಾಗಿರುವವರಿಗೆ ಸರಕಾರದಿಂದ ಸೂಕ್ತ ಪರಿಹಾರ ಕೊಡಿಸುತ್ತೇನೆ. ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಮಾತನಾಡಿದ್ದೇನೆ. ಮತ್ತೆ ಅವರ ಕುಟುಂಬಸ್ಥರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸೂಚಿಸಿದ್ದೇನೆ ಎಂದರು.
ಕಲ್ಲುತೂರಾಟಕ್ಕೆ ಬೇಸರ: ನಿವೃತ್ತ ಜಡ್ಜ್ ಸಿ.ಶಿವಪ್ಪನವರು ಎಂದಿಗೂ ಕರ್ನಾಟಕ ಪರ ಇದ್ದಂತಹವರು. ಅವರು ನ್ಯಾಯಾಧೀಶರಾಗಿದ್ದಂತಹ ಸಂದರ್ಭದಲ್ಲಿ ಜಯಲಲಿತಾ ಅವರನ್ನೇ ಜೈಲಿಗೆ ಕಳುಹಿಸಿದ್ದಾರೆ. ಅಂತಹವರ ಮನೆ ಮೇಲೆ ಕಲ್ಲುತೂರಾಟ ಮಾಡಿ, ಜಖಂಗೊಳಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.[ಹಳೇ ಮೈಸೂರಿನಲ್ಲಿಯೂ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ]

ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರೂ ಸಹ ಭೇಟಿ ನೀಡಿ ಮಾತನಾಡಿ, ರಾಜ್ಯ ಸರಕಾರ ರೈತರಿಗೆ ವೈಜ್ಞಾನಿಕ ಬೆಲೆ ನೀಡಬೇಕು, ರೈತರ ಸಾಲ ಮನ್ನಾ ಮಾಡಬೇಕು, ಮೇವು ಬ್ಯಾಂಕ್ ತೆರೆದು ಜಾನುವಾರುಗಳನ್ನು ರಕ್ಷಣೆ ಮಾಡಬೇಕು ಹಾಗೂ ಕೃಷಿ ಕಾರ್ಮಿಕರಿಗೆ ಉದ್ಯೋಗ ಸೃಷ್ಠಿಸಬೇಕು ಎಂದು ಒತ್ತಾಯಿಸಿದರು.
ಜನಾಂಗೀಯ ಸಮಸ್ಯೆ: ಕಾವೇರಿ ವಿವಾದ ಸಮಸ್ಯೆಯಾಗುತ್ತಿಲ್ಲ. ಜನಾಂಗೀಯ ಸಮಸ್ಯೆಯಾಗುತ್ತಿದೆ. ಜಯಲಲಿತಾ ಹಠಮಾರಿ ಧೋರಣೆಯನ್ನು ಬಿಡಬೇಕು, ತಮಿಳುನಾಡಿನಲ್ಲಿ ಕನ್ನಡಿಗರಿಗೆ ರಕ್ಷಣೆ ಒದಗಿಸಬೇಕು, ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಸಾರೂಪಕ್ಕೆ ಹೋಗಬಾರದು ಎಂದರು.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಇರುವಂತಹ ಪ್ರಶ್ನೆ. ಕಾವೇರಿ ನೀರು ಬಿಟ್ಟರೆ ಮುಂದೆ ಮತ್ತಷ್ಟು ಸಮಸ್ಯೆ ಎದುರಾಗಲಿದೆ, ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ನೀಡಿ, ಹೋರಾಟಕ್ಕೆ ಸಿದ್ದರಾಗಬೇಕು. ಕರ್ನಾಟಕದಿಂದ ಭಾರತದಲ್ಲಿ ಒಂದು ಹೊಸ ಸಂಸ್ಕೃತಿ ಸೃಷ್ಟಿಯಾಗಬೇಕು ಎಂದು ಹೇಳಿದರು.[ಪಾಂಡವಪುರದಲ್ಲಿ ತಮಿಳರ ಅಂಗಡಿ ಚೆಲ್ಲಾಪಿಲ್ಲಿ, ಲಾರಿ ಭಸ್ಮ]

ಶಾಸಕರು, ಸಂಸದರ ಸಭೆ: ಕಾವೇರಿ ನದಿನೀರು ಹಂಚಿಕೆ ವಿವಾದವನ್ನು ಶಾಶ್ವತ ಪರಿಹಾರ ನೀಡಬೇಕು ಎನ್ನುವ ಉದ್ದೇಶದಿಂದ ಕಾವೇರಿ ಕೊಳ್ಳದ ಎಲ್ಲ ಜನಪ್ರತಿನಿಧಿಗಳು, ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಸಮ್ಮುಖದಲ್ಲಿ ಕುಳಿತು ಚರ್ಚಿಸಿ, ಸಮಿತಿ ರಚಿಸಿಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಉದ್ದೇಶವಿದೆ ಎಂದರು.
ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೈಸೂರು, ಮಂಡ್ಯ, ಹಾಸನ ಜಿಲ್ಲೆಯ ಎಲ್ಲ ಶಾಸಕರು, ಸಂಸದರನ್ನು ಬುಧವಾರ ಸಭೆ ಕರೆದಿದ್ದೇವೆ. ಜತೆಗೆ ಮುಖ್ಯಮಂತ್ರಿಯವರು ಸಹ ಸಂಪುಟ ಸಭೆ ಕರೆದಿದ್ದಾರೆ. ಚಳುವಳಿಯಿಂದ ನಮಗೆ ನಷ್ಟ ಸಂಭವಿಸದಂತೆ ನಡೆದುಕೊಳ್ಳಬೇಕು. ಕಾವೇರಿ ವಿಚಾರದಲ್ಲಿ ನಾವು ಎಂದೂ ಗೆಲುವು ಪಡೆದಿಲ್ಲ ಎಂದು ಹೇಳಿದರು.[ಸುಪ್ರೀಂ ಆದೇಶವೇ ಕಾನೂನು ಬಾಹಿರ : ಬಿವಿ ಆಚಾರ್ಯ]
ಬಕ್ರೀದ್ ಸರಳ ಆಚರಣೆ: ಕೋರ್ಟ್ ನೀಡಿದ ಆದೇಶವನ್ನು ನಾವು ಉಲ್ಲಂಘನೆ ಮಾಡಿ ಒಂದು ದಿನ ಸಹ ನೀರನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಆಸ್ತಿ ನಷ್ಟ ಮಾಡಿ, ನಮ್ಮವರಿಗೆ ತೊಂದರೆ ಕೊಡುವುದು ಸರಿಯಲ್ಲ. ರಾಜ್ಯದಲ್ಲಿ ಕಾವೇರಿ ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಮರು ಬಕ್ರೀದ್ ಅನ್ನು ಸರಳವಾಗಿ ಆಚರಣೆ ಮಾಡುವ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದರು.
ಪಾಂಡವಪುರ ಪಟ್ಟಣದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಆದರೆ ಬಕ್ರೀದ್ ಅಂಗವಾಗಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಪೊಲೀಸರು ಅನುವು ಮಾಡಿಕೊಟ್ಟರು. ನಂತರ ಬೆಳಗ್ಗೆ 9ಕ್ಕೆ ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.












Click it and Unblock the Notifications