ನಾನು ನಿಮ್ಮವಳು, ನಿಮ್ಮ ಮನೆ ಮಗಳು ಎನ್ನುತ್ತಿರುವ ಸುಮಲತಾ
Recommended Video

ಮಂಡ್ಯ, ಮಾರ್ಚ್ 07: ನಾನು ನಿಮ್ಮವಳು, ನಿಮ್ಮ ಮನೆ ಮಗಳು, ಮಂಡ್ಯದ ಸೊಸೆ ಎಂದು ಹೇಳುತ್ತಾ ಜನರ ಮುಂದೆ ಹೋಗುತ್ತಿರುವವರು ಬೇರೆ ಯಾರು ಅಲ್ಲ ಸುಮಲತಾ ಅಂಬರೀಶ್. ಮಂಡ್ಯದಲ್ಲಿ ರಾಜಕೀಯ ಕಣ ರಂಗೇರುತ್ತಿದೆ.
ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇನ್ನೂ ಮಂಡ್ಯದಲ್ಲಿ ಚುನಾವಣಾ ಕಣಕ್ಕೆ ಇಳಿದಿಲ್ಲ. ಆದರೆ ಅದಾಗಲೇ ಮಾಜಿ ಸಚಿವ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡುತ್ತಿದ್ದು, ಮತದಾರರ ಮುಂದೆ ತೆರಳಿ ಮತಯಾಚಿಸುತ್ತಿದ್ದಾರೆ.
ಈ ನಡುವೆ ಬುಧವಾರ (ಮಾ.06) ಬೇವಿನಹಳ್ಳಿ ಗ್ರಾಮಕ್ಕೆ ತೆರಳಿದ ಸುಮಲತಾ ಅವರು ಲೋಕಸಭೆ ಚುನಾವಣೆ ಸಂಬಂಧ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಜನರ ಪ್ರೀತಿ, ವಿಶ್ವಾಸ ಏನು ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ಅಂಬರೀಶ್ ಅವರ 25 ವರ್ಷಗಳ ರಾಜಕೀಯ ಜೀವನದಲ್ಲಿ ಅವರನ್ನು ಸಾಕಿ ಬೆಳೆಸಿದ ನಿಮ್ಮ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರಲ್ಲದೆ, ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ದೇವರು ನಮ್ಮ ಪರ ಇದ್ದಾನೆ ಎಂದರು. ಮುಂದೆ ಓದಿ...

ಉತ್ತಮವಾಗಿ ಕೆಲಸ ನಿರ್ವಹಿಸುವೆ
ಕಾಂಗ್ರೆಸ್ ಪಕ್ಷ ನಮ್ಮ ಪರವಾಗಿದೆಯೇ ಇಲ್ಲವೋ ಸಂಶಯವಿದೆ. ಆದರೆ ನಿಮ್ಮ ಪ್ರೀತಿ ವಿಶ್ವಾಸ, ಭರವಸೆ ಮೇಲೆ ನಾನು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ನೀವು ಭರವಸೆ ನೀಡಿದರೆ ಮಂಡ್ಯ ಜಿಲ್ಲೆಯ ಜನರ ಧ್ವನಿಯಾಗಿ ಸಂಸತ್ನಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿ ತೋರಿಸುವುದಾಗಿ ಸುಮಲತಾ ಹೇಳಿದರು.

ಆಶೀರ್ವಾದ ನನಗೂ ನೀಡಿ
ಅಂಬರೀಶ್ ಅವರಿಗೆ ಜಿಲ್ಲೆಯ ಜನತೆ ನೀಡಿದ್ದ ಸಹಕಾರ, ಬೆಂಬಲ, ಆಶೀರ್ವಾದ ನನಗೂ ನೀಡಿ. ನಿಮ್ಮ ಋಣವನ್ನು ತೀರಿಸುವ ಕೆಲಸ ಮಾಡುತ್ತೇನೆ ಎಂದ ಸುಮಲತಾ, ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಅಭ್ಯರ್ಥಿ ಘೋಷಣೆ ಮಾಡಿದ ನಂತರ ತಮ್ಮ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯ
ಮಂಡ್ಯದಾದ್ಯಂತ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ನೇರವಾಗಿ ಜನರನ್ನು ಭೇಟಿ ಮಾಡಿ, ನನ್ನಿಂದ ಏನು ನಿರೀಕ್ಷೆ ಮಾಡುತ್ತಾರೆ ಎಂಬುದನ್ನು ಕೇಳುತ್ತಿದ್ದೇನೆ. ಪಕ್ಷ ಟಿಕೆಟ್ ನೀಡದಿದ್ದರೆ ಏನು ಮಾಡಬೇಕೆಂಬ ಪ್ರಶ್ನೆ ಎದುರಾಗಿದ್ದು, ಹೋದ ಕಡೆಯಲೆಲ್ಲಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯ ಕೇಳಿಬರುತ್ತಿದೆ ಎಂದರು ಸುಮಲತಾ.

ಜನಾಭಿಪ್ರಾಯ ಸಂಗ್ರಹ ಮಾಡುವೆ
ನನಗೇನಾದರೂ ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಲಿದ್ದು, ಪ್ರವಾಸ ಮುಗಿದ ಬಳಿಕ ಜನಾಭಿಪ್ರಾಯ ಸಂಗ್ರಹ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸುಮಲತಾ ಹೇಳಿದರು. ಸಭೆಯಲ್ಲಿ ಹಲವರು ಪಾಲ್ಗೊಂಡು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.












Click it and Unblock the Notifications