ಮಂಡ್ಯದಲ್ಲೀಗ ಸಂಸದೆ ಸುಮಲತಾದ್ದೇ ಹವಾ...!
ಮಂಡ್ಯ, ಜೂನ್ 14: ಜೆಡಿಎಸ್ ನ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯ ಜನ ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿರುವುದರಿಂದಾಗಿ ಮುಂದಿನ ದಿನಗಳಲ್ಲಿ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳಬಹುದೇನೋ ಎಂಬ ಭಯ ಜೆಡಿಎಸ್ ವರಿಷ್ಠರನ್ನು ಕಾಡುತ್ತಿದೆ. ಹೀಗಾಗಿ ಹೇಗಾದರೂ ಮಾಡಿ ಮತ್ತೆ ಜನರ ಒಲವನ್ನು ತಮ್ಮತ್ತ ಸೆಳೆದುಕೊಳ್ಳಲು ಮುಖಂಡರು ಸರ್ವ ಪ್ರಯತ್ನ ಮಾಡುತ್ತಿದ್ದಾರೆ.
ಈ ನಡುವೆ ಸಂಸದೆಯಾಗಿ ಮಂಡ್ಯಕ್ಕೆ ಕಾಲಿಟ್ಟಿರುವ ಸುಮಲತಾ ಅಂಬರೀಶ್ ಅವರು ಹೆಚ್ಚಿನ ಸುದ್ದಿಯಾಗುತ್ತಿದ್ದು, ಬಿಜೆಪಿಗೆ ಹತ್ತಿರವಾಗಿದ್ದುಕೊಂಡು ಮಂಡ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಇದು ಜೆಡಿಎಸ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಜೆಡಿಎಸ್ ನಾಯಕರಿಗೆ ಇರುಸು ಮುರುಸು
ಮಂಡ್ಯದ ಹಳ್ಳಿಗಳಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ನರೇಂದ್ರಮೋದಿ ಅವರನ್ನೊಳಗೊಂಡ ಭಾವಚಿತ್ರ ಹಾಕಿ ಸುಮಲತಾ ಅವರಿಗೆ ಸುಸ್ವಾಗತ ಕೋರಿರುವ ಫ್ಲೆಕ್ಸ್ ಗಳು ಕಂಡು ಬರುತ್ತಿವೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಮಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್, ರೈತ ಸಂಘದ ಕಾರ್ಯಕರ್ತರು ಗೆಲುವಿಗಾಗಿ ಶ್ರಮಿಸಿದ್ದರು. ಹೀಗಾಗಿ ಕಾರ್ಯಕರ್ತರು ಅವರ ಖುಷಿಗಾಗಿ ಫ್ಲೆಕ್ಸ್ ಗಳನ್ನು ಅಳವಡಿಸುತ್ತಿದ್ದು ಅದರಲ್ಲಿ ಕಾಂಗ್ರೆಸ್ ನಾಯಕರ, ಬಿಜೆಪಿ ನಾಯಕರ ನಡುವೆ ಸುಮಲತಾ ಅವರ ಭಾವಚಿತ್ರಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಸುಮಲತಾ ಅವರಿಗೂ ಫ್ಲೆಕ್ಸ್ ಗಳನ್ನು ಹಾಕಬೇಡಿ ಎನ್ನಲಾಗುತ್ತಿಲ್ಲ.
ಸುಮಲತಾ ಅವರು ಭಾಗವಹಿಸುತ್ತಿರುವ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಚಾರ ಸಿಗುತ್ತಿದೆ. ಜನ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದೊಂದು ರೀತಿ ಜೆಡಿಎಸ್ ನಾಯಕರಿಗೆ ಇರುಸು ಮುರುಸನ್ನುಂಟು ಮಾಡುತ್ತಿದೆ. ಇದೆಲ್ಲದರ ನಡುವೆ ಸಚಿವ ಡಿ.ಸಿ.ತಮ್ಮಣ್ಣ ಸೇರಿದಂತೆ ಕೆಲವು ಜೆಡಿಎಸ್ ನಾಯಕರ ಮಾತುಗಳು, ನಡವಳಿಕೆಗಳು ಕೂಡ ಜನ ಬೇಸರಗೊಳ್ಳುವಂತೆ ಮಾಡಿದೆ.
ಬಸ್ ದುರಂತದ ಅನುದಾನಕ್ಕೆ ಪ್ರಚಾರ ಬೇಡ: ಸುಮಲತಾ
ಅನುದಾನ ತಲುಪೋದು ಮುಖ್ಯ ಅಂದ ಸುಮಲತಾ
ಮಂಡ್ಯ ತಾಲ್ಲೂಕಿನ ಮಾಚಹಳ್ಳಿಯ ಕನಗನಮರಡಿ ಬಸ್ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷದಂತೆ ಸುಮಾರು ಅರವತ್ತು ಲಕ್ಷ ಪರಿಹಾರ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಸುಮಲತಾ ಅವರು ಸಂಸದೆಯಾಗುತ್ತಿದ್ದಂತೆಯೇ ಪರಿಹಾರದ ಈ ಹಣ ಬಂದಿರುವುದು ಜೆಡಿಎಸ್ ಮತ್ತು ಸುಮಲತಾ ಅಂಬರೀಶ್ ಅವರ ಅಭಿಮಾನಿಗಳ ನಡುವಿನ ವಾಗ್ಯುಗ್ದಕ್ಕೆ ಕಾರಣವಾಗಿದೆ.
ಸುಮಲತಾ ಅಂಬರೀಶ್ ಅವರ ಅಭಿಮಾನಿಗಳು ಈ ಪರಿಹಾರದ ಹಣ ಸುಮಕ್ಕಾ ಅವರ ಪ್ರಯತ್ನದಿಂದ ಬಂದಿದೆ ಎನ್ನುತ್ತಿದ್ದರೆ, ಅತ್ತ ಜೆಡಿಎಸ್ ಕಾರ್ಯಕರ್ತರು ಮುಖ್ಯಮಂತ್ರಿಗಳು ಮೊದಲೇ ಕೇಂದ್ರಕ್ಕೆ ಪತ್ರ ಬರೆದಿದ್ದರು. ಅದನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ ಎನ್ನುತ್ತಿದ್ದಾರೆ. ಆದರೆ ಇದೆಲ್ಲವನ್ನು ಬದಿಗೆ ತಳ್ಳಿರುವ ಸುಮಲತಾ ಅವರು, ಸಾಧನೆಗಳು ನಮ್ಮ ಬಗ್ಗೆ ಮಾತಾಡಬೇಕೇ ಹೊರತು, ನಾವು ನಮ್ಮ ಸಾಧನೆಗಳ ಬಗ್ಗೆ ಮಾತಾಡಬಾರದು ಎನ್ನುವ ಮೂಲಕ ತಾವೇ ಅಭಿವೃದ್ಧಿ ಮಾಡಿದ್ದೇವೆ. ಮಾಡುತ್ತೇವೆ ಎನ್ನುವ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರಿಗೆ, ಕಾರ್ಯಕರ್ತರಿಗೆ ಟಾಂಗ್ ನೀಡಿದ್ದಾರೆ.
ಬಸ್ ದುರಂತ ನಡೆಯಬಾರದಿತ್ತು. ಇದು ದುರಂತದ ಸಂಗತಿ. ಆ ಕುಟುಂಬಗಳಿಗೆ ಅನುದಾನ ತಲುಪಿರೋದು ಮುಖ್ಯ. ಯಾರು ಕೊಟ್ಟಿದ್ದಾರೆ, ಕೊಡಿಸಿದ್ದಾರೆ ಅನ್ನೋದು ಮುಖ್ಯವಲ್ಲ. ನಾನು ಕೊಟ್ಟಿದ್ದೀನಿ, ನೀವು ಕೊಟ್ಟಿಲ್ಲ ಅನ್ನೋದು ತಪ್ಪಾಗುತ್ತೆ. ಆ ರೀತಿ ತಪ್ಪು ಯಾರೂ ಮಾಡಬಾರದು. ನಾನಂತೂ ಆ ತಪ್ಪು ಮಾಡೋದಿಲ್ಲ. ಅದನ್ನ ಪ್ರಚಾರಕ್ಕೆ ಬಳಸೋದು ನನಗಿಷ್ಟ ಇಲ್ಲ. ಯಾರೇ ಮಾಡಿರಲಿ. ಅದನ್ನ ಹೇಳಿಕೊಳ್ಳಬಾರದು ಇದು ನನ್ನ ಅಭಿಪ್ರಾಯ ಎಂದಿದ್ದಾರೆ.
ಯಾರು ಬೇಕಾದರೂ ಇದರ ಕ್ರೆಡಿಟ್ ತೆಗೆದುಕೊಳ್ಳಲಿ. ನನಗೆ ಆ ಬಗ್ಗೆ ಬೇಜಾರಿಲ್ಲ. ನನ್ನ ಕೆಲಸ ಈಗಷ್ಟೇ ಆರಂಭವಾಗಿದೆ. ಅದನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವ ನಂಬಿಕೆ ನನಗಿದೆ. ಅಧಿವೇಶನದ ಬಳಿಕ ಕ್ಷೇತ್ರ ಪ್ರವಾಸ ಮಾಡ್ತೀನಿ. ಬಜೆಟ್ ನಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಸಾಕಷ್ಟು ಕೊಡುಗೆ ನೀಡೋ ವಿಶ್ವಾಸವಿದೆ. ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ಮಾಡಿ ಮಂಡ್ಯ ಜಿಲ್ಲೆ ಹಾಗೂ ರೈತರ ಸಮಸ್ಯೆ ಬಗೆಹರಿಸಲು ಯತ್ನಿಸುವುದಾಗಿ ಹೇಳುವ ಮೂಲಕ ಮಂಡ್ಯದ ಜನರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ.
ಮತ ವ್ಯರ್ಥ ಆಗದಂತೆ ನಡೆವ ಭರವಸೆ
ಇದೆಲ್ಲದರ ನಡುವೆ ಮಂಡ್ಯ ತಾಲ್ಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮೀಜಿಯ ಮಹಾದ್ವಾರ ಲೋಕಾರ್ಪಣೆ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಂಡ್ಯ ಜಿಲ್ಲೆಯ ಅಭಿವೃದ್ಧಿಯೇ ನನ್ನ ಜೀವನದ ಪ್ರಮುಖ ಗುರಿ. ಜಿಲ್ಲೆಯ ಸ್ವಾಭಿಮಾನಿ ಜನತೆ ನನ್ನ ಮೇಲೆ ನಂಬಿಕೆ ಇಟ್ಟು ಅತ್ಯಧಿಕ ಬಹುಮತಗಳಿಂದ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದ್ದಾರೆ. ಅವರ ನಂಬಿಕೆಯನ್ನು ನಾನು ಎಂದೂ ಸುಳ್ಳಾಗಿಸುವುದಿಲ್ಲ. 17ರಂದು ಪ್ರಮಾಣವಚನ ಸ್ವೀಕಾರಕ್ಕೆ ದೆಹಲಿಗೆ ನಿಮ್ಮ ಆಶೀರ್ವಾದದಿಂದ ಹೋಗುತ್ತಿದ್ದೇನೆ. ಮನಸ, ವಾಚಾ, ಕರ್ಮ ನನ್ನ ಗುರಿ ಮಂಡ್ಯದ ಅಭಿವೃದ್ಧಿ ಮಾತ್ರ. ನೀವು ನೀಡಿರುವ ಮತ ವ್ಯರ್ಥ ಆಗದ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಗೆಲುವಿಗೆ ಕಾರಣವಾದ ಎಲ್ಲರಿಗೂ ಧನ್ಯವಾದ ಅರ್ಪಿಸಿರುವ ಸುಮಲತಾ, ರೈತ ಸಂಘದವರು ನನಗೆ ಶಕ್ತಿ ತುಂಬಿದರು. ಸುನಿತಾ ಪುಟ್ಟಣ್ಣಯ್ಯ, ದರ್ಶನ್ ಪುಟ್ಟಣ್ಣಯ್ಯ ಜತೆಯಲ್ಲಿ ನಿಂತರು. ಬಿಜೆಪಿ ಪಕ್ಷ ಕೂಡ ದೊಡ್ಡ ಶಕ್ತಿ ತುಂಬಿತು. ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಶಿಸ್ತು ಕ್ರಮ ತೆಗೆದುಕೊಂಡರೂ ಲೆಕ್ಕಿಸದೆ ನನ್ನನ್ನು ಬೆಂಬಲಿಸಿದರು. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು. ಡಾ.ರವೀಂದ್ರ ಸ್ವಾಭಿಮಾನ ಹೋರಾಟ ಮಾಡಿದರು. ಇದು ನನ್ನ ಗೆಲುವಲ್ಲ, ನನ್ನೆಲ್ಲಾ ಸ್ವಾಭಿಮಾನಿ ಮಂಡ್ಯದ ಜನರ ಗೆಲುವು ಎಂದು ಹೇಳುವ ಮೂಲಕ ಭಾವನಾತ್ಮಕವಾಗಿ ಮಂಡ್ಯದ ಸಂಬಂಧವನ್ನು ಗಟ್ಟಿಮಾಡಿಕೊಳ್ಳುತ್ತಲೇ ಹೋಗುತ್ತಿದ್ದಾರೆ.
ವಾರದಲ್ಲಿ ಮೂರು ದಿನ ಮಂಡ್ಯ ಜನರಿಗೆ ಮೀಸಲು: ಸುಮಲತಾ
ಪ್ರತಿಯೊಂದು ಹೆಜ್ಜೆಯೂ ಗಮನಾರ್ಹ
ಇದೆಲ್ಲದರ ನಡುವೆ ರಾಜಕೀಯ ಬೆಂಬಲದಿಂದ ಕಳಪೆ ಕಾಮಗಾರಿ ಮಾಡಿ ಹಣ ಲೂಟಿ ಹೊಡೆಯುವವರಿಗೆ ಎಚ್ಚರಿಕೆಯ ಸಂದೇಶವನ್ನು ಕೂಡ ಇದೇ ಸಂದರ್ಭ ರವಾನಿಸಿದ್ದಾರೆ. ಅದೇನೆಂದರೆ ಕಳಪೆ ಗುಣಮಟ್ಟದ ಕಾಮಗಾರಿ ಕೈಗೊಂಡಲ್ಲಿ ಅಂತಹ ಗುತ್ತಿಗೆದಾರರಿಗೆ ಸಂಬಂಧಿಸಿದ ಬಿಲ್ ಪಾವತಿ ಮಾಡದಂತೆ ತಡೆ ಹಿಡಿಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದಿದ್ದಾರೆ. ಇದು ಕೆಲವರನ್ನು ಬೆವರುವಂತೆ ಮಾಡಿದೆ.
ಇದುವರೆಗೆ ಮಂಡ್ಯದಲ್ಲಿ ಸಂಸದರಿದ್ದರು ಎಂಬುದು ಮಾತ್ರ ಗೊತ್ತಿತ್ತು. ಅವರು ಅವರ ಪಾಡಿಗೆ ಮಂಡ್ಯಕ್ಕೆ ಬಂದು ಹೋಗುತ್ತಿದ್ದರು. ಆದರೆ ಈಗ ಹಾಗಿಲ್ಲ. ಸುಮಲತಾ ಏನು ಮಾಡಿದರೂ ಅದು ದೊಡ್ಡ ಸುದ್ದಿಯಾಗುತ್ತಿದೆ. ಹೀಗಾಗಿ ಅವರ ಪ್ರತಿಯೊಂದು ಹೆಜ್ಜೆಯೂ ಗಮನಾರ್ಹವಾಗಿದೆ.