ಮಂಡ್ಯದಲ್ಲಿ ಖಾಸಗಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆಗೆ ವಿರೋಧ
ಮಂಡ್ಯ, ಜೂನ್ 18: ಮಂಡ್ಯದಲ್ಲಿ ಕೃಷಿ ವಿಜ್ಞಾನ ಕಾಲೇಜು ಪ್ರಾರಂಭಿಸಲು ಖಾಸಗಿಯವರಿಗೆ ಅನುಮತಿ ನೀಡಿರುವುದರ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. ಕಾಲೇಜು ತೆರೆಯಲು ನೀಡಿರುವ ಅನುಮತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ವಿ.ಸಿ. ಫಾರಂ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು.
ತರಗತಿಗಳನ್ನು ಬಹಿಷ್ಕರಿಸಿ, ಕಾಲೇಜಿನ ಎದುರು ಜಮಾವಣೆಗೊಂಡ ವಿದ್ಯಾರ್ಥಿಗಳು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು 2010ರಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತಂದು, ಖಾಸಗಿ ಕೃಷಿ ಕಾಲೇಜು ಪ್ರಾರಂಭಿಸಲು ಅನುಮತಿ ನೀಡಲಾಯಿತು. ಈ ಖಾಸಗಿ ಕಾಲೇಜುಗಳ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ವಿಭಾಗದಲ್ಲಿ ಹಲವಾರು ನ್ಯೂನ್ಯತೆ ಹೊಂದಿದ್ದು, ನಿರುದ್ಯೋಗ ಸೃಷ್ಟಿ ಮಾಡುವುದಲ್ಲದೆ ಗುಣಮಟ್ಟದ ಶಿಕ್ಷಣ ನೀಡದೆ ವಿದ್ಯಾರ್ಥಿಗಳ ಜೀವನ ಹಾಳು ಮಾಡುತ್ತಿವೆ ಎಂದು ದೂರಿದರು.
20 ವರ್ಷಗಳ ನಂತರ ಜೂನ್ನಲ್ಲಿ 100ರ ಗಡಿ ದಾಟಿದ ಕೆಆರ್ಎಸ್
ಖಾಸಗಿ ಕೃಷಿ ಕಾಲೇಜುಗಳಿಗೆ ಅಫಿಲಿಯೇಷನ್ ನೀಡುವುದನ್ನು ಕೂಡಲೇ ತಡೆ ಹಿಡಿಯಬೇಕು. ರಾಜ್ಯದ ಎಲ್ಲಾ ಸರ್ಕಾರಿ ಕೃಷಿ ಕಾಲೇಜುಗಳಲ್ಲಿ 2000 ವಿದ್ಯಾರ್ಥಿಗಳು ದಾಖಲಾಗಿದ್ದರೆ, ರೈ ಟೆಕ್ನಾಲಜಿ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಒಂದು ವರ್ಷಕ್ಕೆ 1 ಸಾವಿರ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದರಿಂದ ನಿರುದ್ಯೋಗ ಮತ್ತು ಗುಣಮಟ್ಟದ ಶಿಕ್ಷಣದ ಕೊರತೆಗೆ ದಾರಿಯಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.
ಖಾಸಗಿಯವರ ಪದವಿಯನ್ನು ಕೃಷಿ ಇಲಾಖೆಯು ನೌಕರಿಗೆ ಪರಿಗಣಿಸುವುದಿಲ್ಲ. ಪದವಿಯು ಐ.ಸಿ.ಎ.ಆರ್.ನಿಂದ ಮಾನ್ಯತೆ ಪಡೆದಿಲ್ಲ. ಸರ್ಕಾರಿ ವಿಶ್ವವಿದ್ಯಾನಿಲಯದ ಅಫಿಲಿಯೇಷನ್ ದೊರೆತಿಲ್ಲ. ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಕಾಯ್ದೆ ಪಾಲಿಸುತ್ತಿಲ್ಲ. ಪರೀಕ್ಷಾ ನೀತಿ ಅಳವಡಿಕೆ ಮಾಡಿಕೊಂಡಿಲ್ಲ ಎಂದು ಅವರು ದೂರಿದರು.
ರೈತರಿಗೆ ಇವರಿಂದ ಯಾವುದೇ ಸೇವೆ ದೊರೆಯುವುದಿಲ್ಲ. ಇಲ್ಲಿ ಕಲಿತವರೆಲ್ಲ ಖಾಸಗಿ ಕಂಪನಿಗಳ ಕಳಪೆ ಗುಣಮಟ್ಟದ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಗೆ ಅನುಮತಿ ನೀಡುವ ಸಂಭವವೂ ಇರುತ್ತದೆ. ಆದ್ದರಿಂದ ಖಾಸಗಿ ಕೃಷಿ ವಿವಿಗಳನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿದರು.
ಕೃಷಿ ವಿಶ್ವವಿದ್ಯಾಲಯಗಳ 1963ರ ಕಾಯ್ದೆಗೆ ತಿದ್ದುಪಡಿ ತಂದು ಶಾಶ್ವತವಾಗಿ ಖಾಸಗಿ ಕೃಷಿ ಕಾಲೇಜುಗಳನ್ನು ರಾಜ್ಯದಲ್ಲಿ ರದ್ದುಪಡಿಸಬೇಕೆಂದು ಇದೇ ವೇಳೆ ವಿದ್ಯಾರ್ಥಿಗಳು ಒತ್ತಾಯಿಸಿದರು.