ಶ್ರೀರಂಗಪಟ್ಟಣದ ಕೋಟೆಯ ಸ್ಥಿತಿ ಏನಾಗಿದೆ ಗೊತ್ತಾ?

ಮಂಡ್ಯ, ಜನವರಿ 23; ಚಾರಿತ್ರಿಕವಾಗಿ ತನ್ನದೇ ಆದ ಖ್ಯಾತಿಯೊಂದಿಗೆ ಕರ್ನಾಟಕದ ಪ್ರವಾಸಿ ತಾಣಗಳ ಪೈಕಿ ವಿಶಿಷ್ಟ ಸ್ಥಾನ ಪಡೆದಿದೆ ಶ್ರೀರಂಗಪಟ್ಟಣ. ಇಲ್ಲಿರುವ ಐತಿಹಾಸಿಕ ಕೋಟೆ ಪ್ರಮುಖ ಆಕರ್ಷಣೆಯಾಗಿದೆ. ಆದರೀಗ ಆ ಕೋಟೆ ನಿರ್ಲಕ್ಷ್ಯಕ್ಕೊಳಗಾಗಿ ಕುಸಿಯುತ್ತಿರುವುದು ಬೇಸರದ ಸಂಗತಿಯಾಗಿದೆ.

ಹಾಗೆ ನೋಡಿದರೆ ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳತ್ತ ನಮ್ಮ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಹೊಸದೇನಲ್ಲ. ನಮ್ಮಲ್ಲಿರುವ ಐತಿಹಾಸಿಕ ತಾಣಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿಡುವತ್ತ ಉದಾಸೀನತೆ ಮಾಡಿಕೊಂಡೇ ಬರಲಾಗುತ್ತಿದೆ.

ಇಂತಹ ನಿರ್ಲಕ್ಷ್ಯದ ಪರಿಣಾಮ ಬಹುತೇಕ ಪ್ರವಾಸಿ ತಾಣಗಳು ಅವನತಿಯತ್ತ ಸಾಗುತ್ತಿವೆ. ಇಂತಹ ಪ್ರವಾಸಿ ತಾಣಗಳ ಸಾಲಿಗೆ ಶ್ರೀರಂಗಪಟ್ಟಣದ ಕೋಟೆ ಸೇರುತ್ತಾ? ಎಂಬ ಭಯ ಕಾಡಲಾರಂಭಿಸಿದೆ. ಶ್ರೀರಂಗಪಟ್ಟಣವು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿದ್ದು, ಇಲ್ಲಿರುವ ಕೋಟೆಗೆ ಹಲವು ಶತಮಾನಗಳ ಇತಿಹಾಸವಿದೆ.

ಈ ಕೋಟೆಯನ್ನು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಸಹೋದರ ಉದಯಾದಿತ್ಯನು ಕ್ರಿ. ಶ. 1120ರಲ್ಲಿ ಹಾಗೂ ಕ್ರಿ. ಶ. 1454ರಲ್ಲಿ ನಾಗಮಂಗಲದ ದೊರೆ ತಿಮ್ಮಣ್ಣನೆಂಬುವನು ನಿರ್ಮಿಸಿದನೆಂದು ಇತಿಹಾಸದಿಂದ ತಿಳಿದು ಬರುತ್ತದೆ.

ಭಾರತದ 2ನೇ ಅತ್ಯಂತ ಬಲಿಷ್ಠ ಕೋಟೆ

ಭಾರತದ 2ನೇ ಅತ್ಯಂತ ಬಲಿಷ್ಠ ಕೋಟೆ

ನಾಲ್ಕು ದ್ವಾರಗಳಿಂದ ಪಟ್ಟಣವನ್ನು ಸುತ್ತುವರಿದಿರುವ ಈ ಬಲವಾದ ಕೋಟೆ ಭಾರತದ ಎರಡನೇ ಅತ್ಯಂತ ಬಲಿಷ್ಟ ಕೋಟೆಯೆಂದು ಹೇಳಲಾಗಿದೆ. ವಿಜಯನಗರದರಸರ ಆಳ್ವಿಕೆಗೂ ಒಳಪಟ್ಟಿದ್ದ ಇದು ಅವರ ಸಾಮಂತ ಶ್ರೀರಂಗರಾಯನ ನಂತರ 1610ರಲ್ಲಿ ಮೈಸೂರು ಅರಸರ ಕೈವಶವಾಗಿತ್ತು. ತದನಂತರ ರಾಜಧಾನಿಯಾಗಿ ಬಹು ವೈಭವದಿಂದ ಮೆರೆದಿತ್ತು. ಟಿಪ್ಪುವಿನ ಮರಣಾನಂತರ ಬ್ರಿಟಿಷರ ಅಧಿಪತ್ಯಕ್ಕೊಳಪಟ್ಟಿತು.

ಈಗಾಗಲೇ ಕೋಟೆ ಕುಸಿದಿದೆ

ಈಗಾಗಲೇ ಕೋಟೆ ಕುಸಿದಿದೆ

ಸ್ವಾತಂತ್ರ್ಯ ನಂತರ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ಸೆಳೆಯುತ್ತಾ ಬರುತ್ತಿದೆ. ಇಂತಹ ಕೋಟೆಯ ಪರಿಸ್ಥಿತಿ ಏನಾಗಿದೆ ಎಂಬುದು ಅಲ್ಲಿಗೆ ಹೋಗಿ ನೋಡಿದವರಿಗೆ ಮಾತ್ರ ತಿಳಿಯುತ್ತಿದೆ. ಐತಿಹಾಸಿಕ ಕೋಟೆಯನ್ನು ನೋಡಿಕೊಳ್ಳುವ ರೀತಿ ಇದೆನಾ ಎಂಬ ಪ್ರಶ್ನೆಯೂ ಕಾಡುತ್ತದೆ. ಈಗಾಗಲೇ ಕೋಟೆ ಕುಸಿದಿದೆ. ಅದನ್ನು ದುರಸ್ತಿ ಮಾಡುವ ಕೆಲಸ ನಡೆದಿಲ್ಲ. ಜತೆಗೆ ಕೋಟೆಯ ಪೂರ್ವ ದ್ವಾರದ ಕಂದಕದಲ್ಲಿ ಮಳೆಯ ನೀರು ಹರಿದು ಹೋಗಲು ಜಾಗವಿಲ್ಲದೆ ನಿಂತಿದೆ. ಈ ನೀರಿನಲ್ಲಿ ಗಿಡಗಂಟಿ, ತ್ಯಾಜ್ಯವಸ್ತುಗಳು ಸಂಗ್ರಹವಾಗಿ ಗಬ್ಬುನಾತ ಮೂಗಿಗೆ ಬಡಿಯುತ್ತಿದೆ.

ಕೋಟೆಯ ಇಡೀ ಪರಿಸರ ಹಾಳಾಗಿದೆ

ಕೋಟೆಯ ಇಡೀ ಪರಿಸರ ಹಾಳಾಗಿದೆ

ಈ ಕೋಟೆಯ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಇದರ ಪಕ್ಕದಲ್ಲಿರುವ ಕಂದಕವನ್ನು ಶುಚಿಗೊಳಿಸದ ಕಾರಣದಿಂದಾಗಿ ತ್ಯಾಜ್ಯ ಕೋಟೆಯ ಸುತ್ತಮುತ್ತ ಹರಡಿ ಬಿದ್ದಿದ್ದು ಅದನ್ನು ಪುರಸಭೆ ತೆರವುಗೊಳಿಸ ಕಾರಣ ಇಡೀ ಪರಿಸರ ಹಾಳಾಗಿದೆ. ಕಂದಕವು ಕೊಚ್ಚೆಗುಂಡಿಯಾಗಿ ಮಾರ್ಪಾಡಾಗಿದೆ. ಇದರಿಂದ ಇಲ್ಲಿಗೆ ಬರುವ ಪ್ರವಾಸಿಗರು ಮತ್ತು ಆಸುಪಾಸಿನಲ್ಲಿ ವಾಸಿಸುವ ನಿವಾಸಿಗಳು ಹಿಡಿಶಾಪ ಹಾಕುತ್ತಾ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ.

ತ್ಯಾಜ್ಯ ನೀರು ಸಂಗ್ರಹವಾಗುತ್ತಿದೆ

ತ್ಯಾಜ್ಯ ನೀರು ಸಂಗ್ರಹವಾಗುತ್ತಿದೆ

ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳಾಗಲೀ ಸ್ಥಳೀಯ ಪುರಸಭೆಯ ಅಧಿಕಾರಿಗಳಾಗಲೀ ಗಮನಹರಿಸದ ಕಾರಣದಿಂದ ಕೋಟೆಯು ಸೂಕ್ತ ನಿರ್ವಹಣೆಯಿಲ್ಲದೆ ಸೊರಗಿದ್ದು ಅಪಾಯದ ಅಂಚಿಗೆ ಬಂದು ತಲುಪಿದೆ. ಕೋಟೆಯ ಪಕ್ಕದಲ್ಲಿ ಕಂದಕಗಳಿದ್ದು, ಅವುಗಳಲ್ಲಿ ನೀರು ತ್ಯಾಜ್ಯ ಸಂಗ್ರಹವಾಗುವುದರಿಂದ ಕೋಟೆಗೆ ಸಂಕಷ್ಟ ತಂದಿದೆ. ಈ ಕಂದಕಗಳಲ್ಲಿ ಸಂಗ್ರವಾಗಿರುವ ನೀರನ್ನು ಹೊರಕ್ಕೆ ತೆಗೆದು, ಎಲ್ಲೆಂದರಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಹಾಗೆಯೇ ಹರಡಿ ಬಿದ್ದಿರುವ ಕಸ ಕಡ್ಡಿಗಳನ್ನು ತೆರವುಗೊಳಿಸಿ ಶುಚಿತ್ವ ಕಾಪಾಡಬೇಕಾಗಿದೆ.

ಸಂಬಂಧಿಸಿದವರು ಇತ್ತ ಗಮನಹರಿಸಿ

ಸಂಬಂಧಿಸಿದವರು ಇತ್ತ ಗಮನಹರಿಸಿ

ಐತಿಹಾಸಿಕ ಕೋಟೆಯನ್ನು ನೋಡಲು ಬರುವ ಪ್ರವಾಸಿಗರು ಸುತ್ತಮುತ್ತಲ ಪರಿಸರ ಶುಚಿಯಾಗಿದ್ದರೆ ಖುಷಿಪಡುತ್ತಾರೆ. ಆದರೆ ಕಸಕಡ್ಡಿಗಳಿಂದ ಕೂಡಿ ಗಬ್ಬೆದ್ದ ಪರಿಸರವು ಪ್ರವಾಸಿಗರ ಉತ್ಸಾಹಕ್ಕೆ ತಣ್ಣೀರೆರಚಿ ಬಿಡುತ್ತದೆ. ಈಗಾಗಲೇ ಕೋಟೆಯ ಕೆಲವು ಭಾಗಗಳು ಕುಸಿದಿದ್ದರೆ, ಇನ್ನು ಕೆಲವು ಭಾಗಗಳು ಕುಸಿಯುವ ಹಂತ ತಲುಪಿದೆ. ಹೀಗಿದ್ದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿದಂತೆ ಕಾಣುತ್ತಿಲ್ಲ.

ಇನ್ನು ಮುಂದೆಯಾದರೂ ಪ್ರಾಚ್ಯ ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಕುಸಿದು ಬಿದ್ದ ಕೋಟೆಯ ದುರಸ್ತಿಗೆ ಮತ್ತು ಶುಚಿತ್ವ ಕಾಪಾಡಲು ಮುಂದಾಗುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+