ಸಂಪ್ರದಾಯಿಕವಾಗಿ, ಸರಳವಾಗಿ ಶ್ರೀರಂಗಪಟ್ಟಣ ದಸರಾ ಆಚರಣೆ
ಮಂಡ್ಯ, ಅಕ್ಟೋಬರ್ 12 : "ಕೋವಿಡ್ ಸಂದರ್ಭದಲ್ಲಿ ಶ್ರೀರಂಗಪಟ್ಟಣ ದಸರಾವನ್ನು ಸಂಪ್ರದಾಯಿಕವಾಗಿ ಮತ್ತು ಸರಳವಾಗಿ ಆಚರಿಸೋಣ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಬೇಕು" ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣ ಗೌಡ ಹೇಳಿದರು.
ಸೋಮವಾರ ಶ್ರೀರಂಗಪಟ್ಟಣ ತಾಲ್ಲೂಕು ಕಛೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶ್ರೀರಂಗಟ್ಟಣ ದಸರಾ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಚಿವರು, "ನಗರದ ಪ್ರಮುಖ ಬೀದಿಗಳಗೆ ದೀಪ ಅಲಂಕಾರ ಮಾಡಲಾಗುತ್ತದೆ" ಎಂದರು.
"ಅಕ್ಟೋಬರ್ 24 ರಂದು ಮಧ್ಯಾಹ್ನ 3 ಗಂಟೆಗೆ ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಿ ಬಾಳೆ ಗಿಡ ಕಡಿದ ನಂತರ ಶ್ರೀ ಚಾಮುಂಡೇಶ್ವರಿ ಹಾಗೂ ಗಣಪತಿ ಪೂಜೆ ಮಾಡಿ ರಥೋತ್ಸವನ್ನು ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ" ಎಂದು ಸಚಿವರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, "ಮೂರು ದಿನಕೊಮ್ಮೆ ಬನ್ನಿ ಮಂಟಪ ಹಾಗೂ ಕಲ್ಯಾಣಿ ಸುತ್ತಮುತ್ತ ಸ್ವಚ್ಚತಾ ಕಾರ್ಯವನ್ನು ಪುರಸಭೆಯಿಂದ ಮಾಡಬೇಕು ಮತ್ತು ಬಾಬುರಾಯನಕೊಪ್ಪಲಿನಿಂದ ಕೆ. ಆರ್. ಎಸ್ ವರೆಗೂ ಇರುವ ರಸ್ತೆ ವಿಭಜಕ ಸ್ವಚ್ಛಗೊಳಿಸಿ ಬಣ್ಣ ಬಳಿಯಬೇಕು" ಎಂದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ದಸರಾ ಮೂರು ದಿನಗಳ ಕಾಲ ನಡೆಯುತ್ತಿತ್ತು. ಆದರೆ, ಈ ಬಾರಿ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಒಂದೇ ದಿನ ನಡೆಯಲಿದೆ. ಸಾಂಕೇತಿಕವಾಗಿ ಕೆಲವು ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರ ನಡೆಯಲಿದೆ.
ಈ ಬಾರಿಯ ದಸರಾದಲ್ಲಿ ಜಾನಪದ ಕಲಾತಂಡಗಳು, ಸ್ತಬ್ಧ ಚಿತ್ರಗಳು ಇರುವುದಿಲ್ಲ. ದಸರಾ ಅಂಗವಾಗಿ ನಡೆಯುತ್ತಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ರದ್ದುಗೊಳಿಸಲಾಗಿದೆ.
ಶ್ರೀರಂಗಪಟ್ಟಣ ದಸರಾವನ್ನು 1610ರಲ್ಲಿ ಆರಂಭಿಸಲಾಯಿತು ಎನ್ನುತ್ತದೆ ಇತಿಹಾಸ. ಮೈಸೂರಿನಲ್ಲಿ ದಸರಾ ನಡೆಯಲಿ ಆರಂಭವಾದ ಬಳಿಕ ಮೂರು ದಿನಗಳ ಕಾಲ ಇಲ್ಲಿ ದಸರಾವನ್ನು ನಡೆಸಲಾಗುತ್ತಿದೆ.












Click it and Unblock the Notifications