ಗರ್ಭಿಣಿ ಸೀತಾದೇವಿಯನ್ನು ಕಾಡಿಗಟ್ಟಿದ ಶ್ರೀ ರಾಮ ಆದರ್ಶ ಪುರುಷನಾಗಲು ಹೇಗೆ ಸಾಧ್ಯ?; ಭಗವಾನ್ ಪ್ರಶ್ನೆ
ಮಂಡ್ಯ, ಜನವರಿ, 20: ಶ್ರೀರಾಮಚಂದ್ರ ಆದರ್ಶ ವ್ಯಕ್ತಿಯಲ್ಲ, ಹಾಗೂ ಹಿಂದೂಗಳು ಪೂಜಿಸುವಂತಹ ದೇವರಂತೂ ಅಲ್ಲವೇ ಅಲ್ಲ. ಆತ ಒಬ್ಬ ಸಾಮಾನ್ಯ ಮನುಷ್ಯ, ತನ್ನ ಗರ್ಭಿಣಿ ಹೆಂಡತಿಯನ್ನೇ ನಿರ್ಧಾಕ್ಷಿಣ್ಯವಾಗಿ 18 ವರ್ಷಗಳ ಕಾಲ ಕಾಡಿಗಟ್ಟಿದ ನಿರ್ಧಯಿ. ನಮಗೆ ರಾಮರಾಜ್ಯ ಬೇಕಾಗಿಲ್ಲ, ನಮಗೆ ಬೇಕಾಗಿರುವುದು ಸರ್ವಜನಾಂಗದ ಶಾಂತಿಯ ತೋಟದ ಸಂವಿಧಾನ ಪರಿಕಲ್ಪನೆಯ ರಾಜ್ಯ. ಹೀಗೆ ನಾಡಿನ ಖ್ಯಾತ ವಿಚಾರವಾದಿಗಳು ಹಾಗೂ ಚಿಂತಕರಾದ ಪ್ರೋ.ಕೆ.ಎಸ್.ಭಗವಾನ್ ಹೇಳಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ಎಸ್.ಎಂ.ಲಿಂಗಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ವಿಶ್ರಾಂತ ಶಿಕ್ಷಕ ಎನ್.ಎಂ.ತಿಮ್ಮೇಗೌಡ ಅವರು ರಚಿಸಿರುವ ನಾಲ್ಕು ಆಂಗ್ಲ ಪುಸ್ತಕಗಳು ಹಾಗೂ ಮೂರು ಕನ್ನಡ ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ತಮ್ಮ ಮಾತಿನುದ್ದಕ್ಕೂ ಪುರೋಹಿತ ಶಾಹಿ ವ್ಯವಸ್ಥೆ ಹಾಗೂ ಶ್ರೀ ರಾಮಚಂದ್ರನ ಬಗ್ಗೆ ತೀಕ್ಷ್ಣವಾಗಿ ಹೇಳುತ್ತಾ, ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಮಂಡಿಸಿದರು.
ಪುರೋಹಿತ ಶಾಹಿ ವ್ಯವಸ್ಥೆಯಿಂದಾಗಿ ನಮ್ಮ ದೇಶ ಹಾಳಾಗಿ, ನೈತಿಕವಾಗಿ ಅಧ:ಪಥನದತ್ತ ಸಾಗುತ್ತಿದೆ. ನಮಗೆ ಈಗ ವಿಶ್ವಕ್ಕೆ ಶಾಂತಿಯ ಸಂದೇಶವನ್ನು ನೀಡಿ ಸಮಾನತೆಯ ಮಂತ್ರವನ್ನು ಕೊಡುಗೆಯಾಗಿ ನೀಡಿದ ಭಗವಾನ್ ಬುದ್ಧರ ತತ್ವ ಸಂದೇಶಗಳು ಬೇಕಾಗಿವೆ. ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗಳು ತತ್ವ ಸಂದೇಶಗಳು ನಮಗೆ ದಾರಿದೀಪವಾಗಬೇಕು. ಕುವೆಂಪು ಅವರನ್ನು ಜಾತಿಯ ವ್ಯವಸ್ಥೆಯಲ್ಲಿ ಗುರುತಿಸದೇ ಅವರು ನಮಗೆ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಹಾಗೂ ವಿಶ್ವಮಾನವ ಸಂದೇಶದ ಆಧಾರದ ಮೇಲೆ ಅವರೊಬ್ಬ ಶ್ರೇಷ್ಠ ಸಂತರೆಂದು ಗುರುತಿಸಿ ಗೌರವಿಸಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ರಾಮನೊಬ್ಬ ಸಾಮಾನ್ಯ ಮನುಷ್ಯ
ಇಂದು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೊಲೆಮಾಡಿದವನಿಗೂ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಲು ಅವಕಾಶವಿದೆ. ಆದರೆ ತನ್ನ ಪತ್ನಿಯಾದ ಸೀತಾದೇವಿಗೆ ಒಂದು ಮಾತನಾಡಲು ಅವಕಾಶ ನೀಡದೇ ನಿರ್ಧಯವಾಗಿ ಕಾಡಿಗಟ್ಟಲಾಯಿತು. ಸೀತಾದೇವಿ ಗರ್ಭಿಣಿ ಎಂದೂ ಪರಿಗಣಿಸದೇ ಕಾಡಿಗಟ್ಟಿದ ಶ್ರೀರಾಮಚಂದ್ರ ಹೇಗೆ ದೇವರಾಗುತ್ತಾನೆ? ಅವನೊಬ್ಬ ಸಾಮಾನ್ಯ ಮನುಷ್ಯ. ನಾವು ಶ್ರೀರಾಮನ ಮಂತ್ರವನ್ನು ಪಠಿಸಿ, ದಾಸ್ಯವನ್ನು ಒಪ್ಪಿಕೊಳ್ಳುವ ಬದಲಿಗೆ ಶಾಂತಿಪುರುಷ ಭಗವಾನ್ ಬುದ್ಧರ ತತ್ವ ಸಂದೇಶಗಳನ್ನು ಪಾಲಿಸಿದರೆ ಸಾಕು. ಜಾತಿ, ಮತ, ಪಂಥಗಳಿಂದ ಮುಕ್ತವಾದ ಸಮಾನತೆಯ ಸಮಾಜವನ್ನು ಸುಲಭವಾಗಿ ಕಟ್ಟಬಹುದಾಗಿದೆ ಎಂದು ಹೇಳಿದರು.
ನವಿಲುಮಾರನಹಳ್ಳಿಯ ತಿಮ್ಮೇಗೌಡರು ವಿಚಾರವಾದಿಗಳಾಗಿ, ವಿಶ್ರಾಂತ ಶಿಕ್ಷಕರಾಗಿ ಯಾವುದೇ ಭಯವಿಲ್ಲದೇ ಸಮಾಜಕ್ಕೆ ಕೊಡುಗೆಯಾಗಿ ಏಳು ಪುಸ್ತಕಗಳನ್ನು ರಚಿಸಿದ್ದಾರೆ. ಅಲ್ಲದೆ ಅವರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ. ನಾವು ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿಯಾಗಿ ಮುನ್ನಡೆಯಬೇಕಾಗಿದೆ ಎಂದರು.

ಯುವಜನರು ಮೊಬೈಲ್ನಿಂದ ಹೊರಬರಬೇಕು
ನಂತರ ವಿಚಾರವಾದಿಗಳಾದ ಕೆ.ಮಾಯಿಗೌಡ ಮಾತನಾಡಿ, ಎನ್.ಎಂ.ತಿಮ್ಮೇಗೌಡ ಹಾಗೂ ನಾನು ಬಂಧುಗಳಾಗಿದ್ದೇವೆ. ಆದರೂ ಕೂಡ ಒಬ್ಬರಿಗೊಬ್ಬರು ಪರಿಚಯವಿರಲಿಲ್ಲ. ಮೃದು ಭಾಷಿಯಾದ ತಿಮ್ಮೇಗೌಡ ನನ್ನೊಡನೆ ಹೆಚ್ಚು ಮಾತನಾಡುತ್ತಿರಲಿಲ್ಲ. ಯಾವುದೇ ಭಯವಿಲ್ಲದೇ ನೇರವಾಗಿ ತನ್ನ ಅಭಿಪ್ರಾಯವನ್ನು ಮಂಡಿಸುವ ತಿಮ್ಮೇಗೌಡರು, ಅವರು ರಚಿಸಿರುವ ಏಳು ಪುಸ್ತಕಗಳು ಅಪರೂಪದ ವಿಚಾರಧಾರೆಯನ್ನು ಹೊಂದಿರುವ ಪುಸ್ತಕಗಳಾಗಿವೆ. ನಮ್ಮ ಯುವಜನರು ಮೊಬೈಲ್ನಿಂದ ಹೊರಬಂದು ಪುಸ್ತಕ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದು ಮನವಿ ಮಾಡಿದರು.

ಬಿಗಿ ಭದ್ರತೆ ಒದಗಿಸಿದ್ದ ಪೊಲೀಸರು
ಇಂದಿನ ಪುಸ್ತಕ ಬಿಡುಗಡೆ ಸಮಾರಂಭವು ಪೊಲೀಸ್ ಸರ್ಪಗಾವಲಿನ ನಡುವೆ ನಡೆಯಿತು. ಸಭಾಂಗಣದ ಒಳಗೆ ಹಾಗೂ ಹೊರಗೆ ಪೊಲೀಸರು ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ಎಂ.ಕೆ.ದೀಪಕ್ ಭದ್ರತೆಯ ಜವಾಬ್ದಾರಿಯನ್ನು ವಹಿಸಿದ್ದರು. ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ, ಹಿರಿಯ ರೈತ ಮುಖಂಡರಾದ ಮುದುಗೆರೆ ರಾಜೇಗೌಡ, ಕೆ.ಆರ್.ಜಯರಾಂ, ಮರುವನಹಳ್ಳಿ ಶಂಕರ್, ಲಕ್ಷ್ಮೀಪುರ ಜಗದೀಶ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಗ್ರಾಮಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಿರಣ್ ಸೇರಿದಂತೆ ಸಾಹಿತಿಗಳು, ಶಿಕ್ಷಕರು, ಹಾಗೂ ವಿಚಾರವಾದಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ತಿಮ್ಮೇಗೌಡ ದಂಪತಿಗಳು ವಿಚಾರವಾದಿಗಳಾದ ಪ್ರೋ.ಭಗವಾನ್ ಹಾಗೂ ಕೆ.ಮಾಯಿಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿಯಾಗಿದ್ದರು?
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಕೆ.ಎಸ್.ಸೋಮಶೇಖರ್, ಶಿಕ್ಷಣ ತಜ್ಞ ತಿಮ್ಮೇಗೌಡ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಎಸ್.ಶಿವಕುಮಾರ್, ಎಸ್.ಎಂ.ಲಿಂಗಪ್ಪ ಬಿಎಡ್ ಕಾಲೇಜಿನ ಪ್ರಾಂಶುಪಾಲ ಸುರೇಶ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ವಾಸು, ಲೇಖಕ ಎನ್.ಎಂ.ತಿಮ್ಮೇಗೌಡ ಪತ್ನಿ ಇಂದ್ರಮ್ಮ, ಪುತ್ರಿ ಡಾ.ಪ್ರಿಯಾಂಕ, ಶಿಕ್ಷಕ ಶೀಳನೆರೆ ಶಿವಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications