ಬಿಸಿಯೂಟ ಇಲ್ಲದಿದ್ದರೆ ಕನಗನವಾಡಿ ಬಸ್ ಅಪಘಾತದಲ್ಲಿ ಮತ್ತಷ್ಟು ಮಕ್ಕಳು ಬಲಿಯಾಗಬೇಕಿತ್ತು !

ಮೈಸೂರು, ನವೆಂಬರ್ 26:ಶಾಲೆ ಮುಗಿಸಿ ಬಸ್ ಹತ್ತಿದ ಮಕ್ಕಳು ಮನೆ ತಲುಪಲಿಲ್ಲ. ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಶಾಶ್ವತವಾಗಿ ಬಾರದ ಲೋಕಕ್ಕೆ ತೆರಳಿದ್ದಾರೆ. ಪೇಟೆಗೆ ಹೋದವರು ಮರಳಿ ಮನೆ ಸೇರಲಿಲ್ಲ. ಸಂಬಂಧಿಕರ ಮನೆಗೆ ಹೋಗುತ್ತಿದ್ದವರು ಅರ್ಧ ದಾರಿಯಲ್ಲೇ ಬದುಕಿಗೆ ವಿದಾಯ ಹೇಳಿದ್ದಾರೆ. ಇದು ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ಬಸ್ ದುರಂತದಲ್ಲಿ ಮೃತಪಟ್ಟ ಕೆಲವರ ನೋವಿನ ಕಥನ.

ಶನಿವಾರ (ನ.24) ಜವರಾಯ ಅಟ್ಟಹಾಸ ಮೆರೆದಿದ್ದರಿಂದ ಕನಗನಮರಡಿ, ವದೆಸಮುದ್ರ, ಚಿಕ್ಕಕೊಪ್ಪಲು, ದೊಡ್ಡಕೊಪ್ಪಲು, ಗಾಣದ ಹೊಸೂರು ಗ್ರಾಮಗಳಲ್ಲಿ ನೀರವ ಮೌನ ಆವರಿಸಿದೆ. ಎಲ್ಲರೊಳಗೂ ಮಡುಗಟ್ಟಿರುವ ದುಃಖ. ಈ ಕಷ್ಟ ಇನ್ಯಾರಿಗೂ ಬೇಡವೆಂದು ಮರುಕ ವ್ಯಕ್ತಪಡಿಸುವ ದುಃಖತಪ್ತ ಮನಸ್ಸುಗಳು. ದುಃಖದಲ್ಲಿರುವವರಿಗೆ ಸಾಂತ್ವನ, ಧೈರ್ಯ ತುಂಬುತ್ತಿರುವ ಸಂಬಂಧಿಕರು.

ಇದೀಗ ಘಟನಾ ಸ್ಥಳಕ್ಕೆ ನೂರಾರು ಮಂದಿ ಭೇಟಿ ನೀಡಿ ದುರಂತದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತ ತಮ್ಮೊಳಗಿನ ನೋವಿನ ಭಾರ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ಬಸ್ ದುರಂತದಲ್ಲಿ ಮೃತಪಟ್ಟವರಲ್ಲಿ ವದೆ ಸಮುದ್ರದವರೇ ಹೆಚ್ಚಿನ ಮಂದಿ. ಈ ಗ್ರಾಮದಿಂದ ಮದುವೆಯಾಗಿದ್ದ ಹೆಣ್ಣು ಮಕ್ಕಳು ಸೇರಿ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ. ಶನಿ ಮಹಾತ್ಮನ ಕಥೆ ಕೇಳಲು ಬರುತ್ತಿದ್ದವರು ಚಿರ ನಿದ್ರೆ ಜಾರಿದ್ದಾರೆ. ಇಲ್ಲಿ 80 ಕುಟುಂಬಗಳಿದ್ದು, ಲಿಂಗಾಯತ, ಕುರುಬ, ಒಕ್ಕಲಿಗ, ಅಗಸ, ವಿಶ್ವಕರ್ಮ, ಶೆಟ್ಟರ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಆದರೆ ಜಾತಿಯನ್ನು ಮೀರಿ ಮೃತಪಟ್ಟ ಎಲ್ಲರನ್ನೂ ಗ್ರಾಮದ ಸಾರ್ವಜನಿಕರು ರುದ್ರಭೂಮಿಯಲ್ಲಿ ಭಾನುವಾರ ಅಂತ್ಯಸಂಸ್ಕಾರ ಮಾಡಿದ್ದಾರೆ.

 ದಾರುಣ ಅಂತ್ಯ ಕಂಡವರು

ದಾರುಣ ಅಂತ್ಯ ಕಂಡವರು

ಕನಗನಮರಡಿಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಪ್ರಶಾಂತ್ ತನ್ನ ಸ್ನೇಹಿತನಿಗೆ ಸೈಕಲ್ ಕೊಟ್ಟು ಅವನಿಂದ 2 ರೂ. ಪಡೆದು ಬಸ್ ಏರಿ ದಾರುಣ ಅಂತ್ಯ ಕಂಡಿದ್ದಾನೆ. ಅದೇ ಬಸ್ಸಿನಲ್ಲಿದ್ದ ಪ್ರಶಾಂತ ತಾತ ಕರಿಯಪ್ಪ ಕೂಡ ಮೊಮ್ಮಗನೊಂದಿಗೆ ಪಯಣ ಮುಗಿಸಿದ್ದಾರೆ. ಪ್ರಶಾಂತನ ತಾಯಿ ವಸಂತ 'ನನ್ಮಗ ಪಟಪಟ ಮಾತಾಡುತ್ತಿದ್ದ. ಥ್ರೋಬಾಲ್ ಏನೇನೋ ಆಟವಾಡಿ ಬಹುಮಾನ ಕೂಡ ತಂದಿದ್ದ, ಎನ್ನುತ್ತ ಪ್ರಶಸ್ತಿ ಪತ್ರ ತೋರುತ್ತ ಅಳುತ್ತಾರೆ. ಪ್ರಶಾಂತ್ ತಂದೆ ಚಿಕ್ಕೇಗೌಡ ನನ್ನ ಮಗ ಇನ್ನೊಬ್ಬನ ಜೀವ ಉಳಿಸಲು ತನ್ನ ಪ್ರಾಣ ಕೊಟ್ಟನೆ ಎಂದು ದುಃಖ ತೋಡಿಕೊಳ್ಳುತ್ತಾರೆ.

 ಕತ್ತಲು ಆವರಿಸಿದೆ

ಕತ್ತಲು ಆವರಿಸಿದೆ

ಅದೇ ಊರಿನ ಇನ್ನೋರ್ವ ಬಾಲಕ ರವಿಕುಮಾರ್ ಕೂಡ ಬಸ್ ದುರಂತದಲ್ಲಿ ಮೃತಪಟ್ಟಿದ್ದಾನೆ. ಇವನಿಗೆ ತಂದೆ ಇಲ್ಲ. ತಾಯಿ ರಾಣಿ ಇಬ್ಬರು ಗಂಡು ಮಕ್ಕಳಲ್ಲಿ ಓರ್ವವನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಅವರಲ್ಲಿ ಬದುಕುವ ಭರವಸೆಯೇ ಕ್ಷೀಣಿಸಿದೆ. ರವಿಕುಮಾರ್ ಸಹೋದರ ರಘು ಭಯದಲ್ಲಿದ್ದಾನೆ. 6ನೇ ತರಗತಿಯಲ್ಲಿ ಓದುತ್ತಿದ್ದ ಚನ್ನಶೆಟ್ಟಿ ಮತ್ತು ಸುನೀತಾ ದಂಪತಿಯ ಪುತ್ರಿ ಪವಿತ್ರ ಕೂಡ ದುರಂತ ಅಂತ್ಯಕಂಡಿರುವ ಬಾಲಕಿ. ಈ ಮನೆಯೊಳಗಿರುವ ಎಲ್ಲರೊಳಗೂ ಕತ್ತಲು ಆವರಿಸಿದೆ.

ಪತಿ ಮೃತಪಟ್ಟ ನಂತರ ತಾಯಿ ಮನೆಯಲ್ಲಿದ್ದು, ಟೀ ಅಂಗಡಿ ನಡೆಸುತ್ತ ಜೀವನ ನಡೆಸುತ್ತಿದ್ದ ಶಶಿಕಲಾ ತನ್ನ ತಾಯಿ ರತ್ನಮ್ಮ ಅವರೊಂದಿಗೆ ಇಹಲೋಕ ತ್ಯಜಿಸಿದ್ದಾರೆ. ರತ್ನಮ್ಮಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತನ್ನ ಚಿಲ್ಲರೆ ಅಂಗಡಿಗೆ ಸಾಮಾನು ತೆಗೆದುಕೊಂಡು ಬರಲು ಹೋದವರು ಮರಳಲಿಲ್ಲ.

ಚಿಕ್ಕಕೊಪ್ಪಲು ಗ್ರಾಮದಲ್ಲೂ ಓರ್ವ ಯುವತಿ ಸೇರಿ ಮೂರು ಮಂದಿ ನಿಧನರಾಗಿದ್ದಾರೆ. ಅಕ್ಕಪಕ್ಕದ ಮನೆಯ ಪೂಜಾರಿ ಚಿಕ್ಕಣ್ಣ ಮತ್ತು ಪಾಪಣ್ಣ, ಅಕ್ಕ ತಂಗಿಯರು ಒಬ್ಬೊಬ್ಬ ಹೆಣ್ಣು ಮಕ್ಕಳನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ.

 ಬದುಕಿನ ಪಯಣ ಮುಗಿಸಿದವರು

ಬದುಕಿನ ಪಯಣ ಮುಗಿಸಿದವರು

ಚಿಕ್ಕಯ್ಯನ ದೇವಸ್ಥಾನದ ಪೂಜಾರಿ ಚಿಕ್ಕಯ್ಯ ಪಾಂಡವಪುರದಲ್ಲಿ ಸ್ವಲ್ಪ ಕೆಲಸ ಇದೆ. ಅದನ್ನು ಮುಗಿಸಿ ಶೇವಿಂಗ್ ಮಾಡಿಸಿಕೊಂಡು ಬರುತ್ತೇನೆಂದು ಹೋದವರು ಶವವಾಗಿ ಮನೆ ಸೇರಿದ್ದಾರೆ.

ಕನಗನಮರಡಿಯಿಂದ ಕಿಮೀ ದೂರದಲ್ಲಿರುವ ತಮ್ಮ ಜಮೀನಿಗೆ ಹೋಗಲು ಕುಳ್ಳೇಗೌಡರ ಪತ್ನಿ ಜಯಮ್ಮ ರಾಜಕುಮಾರ ಬಸ್ಅನ್ನೇ ಅವಲಂಬಿಸಿದ್ದರು. ಎಂದಿನಂತೆಯೇ ಜಮೀನಿಗೆ ಹೋಗಲು ಬಸ್ ಹತ್ತಿದವರು ಇಳಿಯಲೇ ಇಲ್ಲ. ಮಂಡ್ಯದಲ್ಲಿರುವ ತನ್ನ ತಮ್ಮನಿಗೆ ರಾಗಿ ಕೊಟ್ಟು ಬರಲು ಬಸ್ ಹತ್ತಿದ್ದ ರತ್ನಮ್ಮ 10 ನಿಮಿಷದಲ್ಲಿಯೇ ರಾಗಿಯೊಂದಿಗೆ ಕಾಲುವೆಯಲ್ಲಿ ತೇಲಿದರು.

ಮೈಸೂರಿನ ವಿಕ್ರಮ್ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪ್ಯಾರಮೆಡಿಕಲ್ ಓದುತ್ತಿದ್ದ ಗಾಣದ ಹೊಸೂರು ಗ್ರಾಮದ ಶಿವಪ್ಪ ಮತ್ತು ಸುಮತಿ ದಂಪತಿಯ ಪುತ್ರಿ ಕೂಡ ವಿಧಿವಶರಾಗಿದ್ದಾರೆ. ಡಾಮಡಹಳ್ಳಿಯ ಅಜ್ಜಿ ಮಂಜುಳಮ್ಮ ಅವರೊಂದಿಗೆ ಮಗಳ ಮಗಳಾದ ಅನುಷ ಮತ್ತು ಮಗನ ಮಗಳಾದ ಪ್ರೇಕ್ಷ ಮೂವರು ವದೆ ಸಮುದ್ರಕ್ಕೆ ನೆಂಟರ ಮನೆಗೆ ಹೋಗುತ್ತಿದ್ದವರು ಅರ್ಧದಾರಿಯಲ್ಲಿಯೇ ತಮ್ಮ ಬದುಕಿನ ಪಯಣ ಮುಗಿಸಿದ್ದಾರೆ.

 ಚಾಲಕ ಮಹದೇವು ನಾಪತ್ತೆ

ಚಾಲಕ ಮಹದೇವು ನಾಪತ್ತೆ

ಬಸ್ ದುರಂತದಲ್ಲಿ ಇನ್ನಷ್ಟು ಶಾಲಾ ಮಕ್ಕಳ ಸಾವಾಗುವುದನ್ನು ಬಿಸಿಯೂಟ ತಪ್ಪಿಸಿದೆ ಎನ್ನುವ ಮಾತು ಕೇಳಿಬಂದಿದೆ. ವದೇಸಮುದ್ರ, ಚಿಕ್ಕಕೊಪ್ಪಲು ಸೇರಿ ಈ ಭಾಗದಿಂದ ಹಲವು ವಿದ್ಯಾರ್ಥಿಗಳು ಚಿಕ್ಕಬ್ಯಾಡರಹಳ್ಳಿ ಪ್ರೌಢಶಾಲೆಗೆ ಈ ಬಸ್ ನಲ್ಲಿಯೇ ತೆರಳುತ್ತಿದ್ದರು. ಶನಿವಾರ ಬೇಗ ತರಗತಿ ಮುಗಿಸಿದ ವಿದ್ಯಾರ್ಥಿಗಳು ಮನೆಗೆ ತೆರಳುವ ಧಾವಂತದಲ್ಲಿದ್ದರು.

ಆದರೆ, ಶಿಕ್ಷಕರು ಸ್ಪೆಷಲ್ ಕ್ಲಾಸ್ ಇದೆ ಯಾರೂ ಮನೆಗೆ ತೆರಳಬಾರದು ಎಂದು ಕಟ್ಟಪ್ಪಣೆ ನೀಡಿದ್ದಾರೆ. ಬಿಸಿಯೂಟ ಮಾಡಿಕೊಂಡು ಹೋಗಲೆಂದು ಶಿಕ್ಷಕರು ಈ ಮಾತು ಹೇಳಿದ್ದಾರೆನ್ನಲಾಗಿದೆ. ಶಿಕ್ಷಕರ ಒತ್ತಡಕ್ಕೆ ಮಣಿದು ಮಕ್ಕಳು ಶಾಲೆಯಲ್ಲಿ ಉಳಿದುಕೊಳ್ಳುವುದರ ಜತೆಗೆ ಬಿಸಿಯೂಟ ಸೇವಿಸಿದ್ದಾರೆ. ಇದರಿಂದ ಅಪಘಾತಕ್ಕೀಡಾದ ಬಸ್ ಚಿಕ್ಕಬ್ಯಾಡರಹಳ್ಳಿ ಗ್ರಾಮದಿಂದ ಹೊರಟು ಹೋಗಿದೆ.

ಬಸ್ ಅಪಘಾತ ಪ್ರಕರಣ ಸಂಬಂಧ ನಿರ್ವಾಹಕ ತಾಂಡವ ಎಂಬಾತನನ್ನು ಪಾಂಡವಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ನಂತರ ತಲೆ ತಪ್ಪಿಸಿಕೊಂಡಿದ್ದ ಹೊಳಲು ಗ್ರಾಮದ ತಾಂಡವನನ್ನು ಪತ್ನಿಯ ಮನೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಚಾಲಕ ಮಹದೇವು ನಾಪತ್ತೆಯಾಗಿದ್ದು, ಆತನಿಗಾಗಿ ತೀವ್ರ ಶೋಧ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+