ಮಂಡ್ಯದಲ್ಲಿ ಪಾಂಚಜನ್ಯ ಊದಲಿರುವ ಎಸ್ಸೆಂ ಕೃಷ್ಣ
Recommended Video
ಮಂಡ್ಯ, ಜನವರಿ 09: ಬಿಜೆಪಿ ಪರಿವರ್ತನಾ ಸಮಾವೇಶಗಳ ಮೂಲಕ ರಣ ಕಹಳೆ ಊದಿದ್ದರೂ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಹಳೆ ಹುಲಿ, ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರೆಲ್ಲಿ? ಎಂಬ ಪ್ರಶ್ನೆ ಎದ್ದಿತ್ತು. ಆದರೆ, ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ 'ಪಾಂಚಜನ್ಯ' ಊದಲು ಕೃಷ್ಣ ಸಿದ್ಧರಾಗಿದ್ದಾರೆ ಎಂಬ ಸುದ್ದಿ ಬಂದಿದೆ.
ಮಂಡ್ಯ, ಮದ್ದೂರು ಭಾಗದ ಅಭಿಮಾನಿಗಳು, ಇತ್ತೀಚೆಗೆ ಎಸ್ಸೆಂ ಕೃಷ್ಣರನ್ನು ಭೇಟಿ ಮಾಡಿದ್ದರು. ಈ ವೇಳೆಯಲ್ಲಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಎಸ್ಸೆಂ ಕೃಷ್ಣ ಅವರು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿಯಿದೆ.
ಪರಿವರ್ತನಾ ಯಾತ್ರೆಗೆ ಎಸ್.ಎಂ.ಕೃಷ್ಣ ಗೈರಾಗಿದ್ದೇಕೆ?
ಇತ್ತೀಚೆಗೆ ಕರ್ನಾಟಕ್ಕೆ ಬಂದಿದ್ದ ಕರ್ನಾಟಕದ ಬಿಜೆಪಿ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ನಾಯಕ ಪ್ರಕಾಶ್ ಜಾವ್ಡೇಕರ್ ಅವರು ಮಾಜಿ ಕೇಂದ್ರ ಸಚಿವ ಎಸ್.ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದರು. ಜನವರಿ 28ರಂದು ನಡೆಯಲಿರುವ ಪರಿವರ್ತನಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದರು.
ಈ ನಡುವೆ, ಮದ್ದೂರಿನಿಂದ ಸ್ಪರ್ಧಿಸುವಂತೆ ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಅವರ ಮೇಲೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಆದರೆ, ಪಕ್ಷದ ಹೈಕಮಾಂಡ್ ಹೇಳಿದಂತೆ ಮುಂದಿನ ಹೆಜ್ಜೆ ಇಡುವುದಾಗಿ ಯೋಗೇಶ್ವರ್ ಹೇಳಿದ್ದಾರೆ.