'ಸಿದ್ದರಾಮಯ್ಯ ಎರಡೂ ಕ್ಷೇತ್ರಗಳಲ್ಲೂ ಸೋಲು ಅನುಭವಿಸಲಿದ್ದಾರೆ'
ಮಂಡ್ಯ, ಮೇ 13 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲೂ ಸೋಲುತ್ತಾರೆ' ಎಂಬ ಹೇಳಿಕೆ ನೀಡುವ ಮೂಲಕ ಮಾಜಿ ಸಚಿವ ಅಂಬರೀಶ್ ಅವರು ಗಮನಸೆಳೆದಿದ್ದಾರೆ. ಅಂಬರೀಶ್ ಅಚ್ಚರಿಯ ಹೇಳಿಕೆ ಕಾಂಗ್ರೆಸ್ ತೊರೆದು ಮುಂದಿನ ದಿನಗಳಲ್ಲಿ ಜೆಡಿಎಸ್ ಸೇರುವುದು ಖಚಿತ ಎಂಬುದನ್ನು ಖಾತರಿಗೊಳಿಸಿದೆ.
ಶನಿವಾರ ತಮ್ಮ ಹುಟ್ಟೂರು ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಮತ ಚಲಾಯಿಸಿದ ನಂತರ ಶಾಸಕ ಡಿ.ಸಿ. ತಮ್ಮಣ್ಣ ಅವರ ಪುತ್ರ ಸಂತೋಷ್ ಅವರ ಮನೆಗೆ ಅಂಬರೀಶ್ ತೆರಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಜಿಲ್ಲೆಯ 7 ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದು, ಅದರಲ್ಲೂ ಮದ್ದೂರು ಕ್ಷೇತ್ರ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಜೆಡಿಎಸ್ ಪಾಲಾಗಿದೆ' ಎಂದು ಹೇಳಿದರು.

'ನನ್ನ ಹೆಂಡತಿ ಮಕ್ಕಳನ್ನು ರಾಜಕೀಯವಾಗಿ ನಿಲ್ಲಿಸಿ ಬೆಳೆಸುವ ಅಗತ್ಯ ನನಗಿಲ್ಲ. ಅವರನ್ನು ಬೇರೆ ಕ್ಷೇತ್ರದಲ್ಲೇ ಬೆಳೆಸುತ್ತೇನೆ. ನಾನು ನನ್ನ ಜನರನ್ನು ಬೆಳೆಸುತ್ತೇನೆ' ಎಂದು ಅಂಬರೀಶ್ ತಿಳಿಸಿದರು.
'ಮಂಡ್ಯದ ಜನ ನನ್ನನ್ನು ಆಡಿಸಿ ಬೆಳೆಸಿದ್ದಾರೆ. ರಾಜಕೀಯವಾಗಿ ನಿವೃತ್ತಿ ಹೊಂದಿದರೂ ಮಂಡ್ಯ ಜನರ ಜೊತೆ ನಿರಂತರ ಸಂಪರ್ಕದಲ್ಲಿರುತ್ತೇನೆ. ಹೊಸಬರು, ಯುವಕರು ಇದ್ದಾರೆ. ಅವರೆಲ್ಲಾ ಬೆಳೆಯಲಿ, ಒಳ್ಳೆಯ ಕೆಲಸಗಳನ್ನು ಮಾಡಲಿ, ನನ್ನ ಶಕ್ತಿ ಮೀರಿ ಕೆಲಸ ಮಾಡಿದ್ದು, ಜನತೆ ಅಷ್ಟೇ ಬೆಂಬಲ ತೋರಿಸಿದ್ದಾರೆ' ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ಮತ್ತು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮತದಾನ ಮುಕ್ತಾಯಗೊಂಡಿದ್ದು, ಮೇ 15ರ ಮಂಗಳವಾರ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications