ಮಂಡ್ಯ ಚುನಾವಣೆ : ಸಿದ್ದರಾಮಯ್ಯ ಸಭೆ ವಿಫಲ, ಕಾಂಗ್ರೆಸ್ ಪ್ರಚಾರವಿಲ್ಲ!
Recommended Video

ಮಂಡ್ಯ, ಅಕ್ಟೋಬರ್ 26 : ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಬಿಸಿ ತುಪ್ಪವಾಗಿದೆ. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬೆಂಬಲಿಸುವಂತೆ ಪಕ್ಷದ ನಾಯಕರು ನೀಡಿದ್ದ ಸೂಚನೆ ಜಾರಿಗೆ ಬಂದಿಲ್ಲ, ಪ್ರಚಾರದಲ್ಲಿ ಕಾಂಗ್ರೆಸ್ ನಾಯಕರು ಕಾಣಿಸಿಕೊಳ್ಳುತ್ತಿಲ್ಲ.
ಬುಧವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡ್ಯಕ್ಕೆ ಭೇಟಿ ನೀಡಿದ್ದರು. ಜಿಲ್ಲಾ ನಾಯಕರ ಜೊತೆ ಸಭೆ ನಡೆಸಿ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅವರ ಪರವಾಗಿ ಪ್ರಚಾರ ನಡೆಸುವಂತೆ ಸೂಚಿಸಿದ್ದರು.
ಸಿದ್ದರಾಮಯ್ಯ ಮುಂದೆ ನಾವೆಲ್ಲರೂ ಒಂದೇ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ, ಯಾರೂ ಇನ್ನೂ ಪ್ರಚಾರಕ್ಕೆ ಹೋಗಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ 7 ದಿನಗಳು ಬಾಕಿ ಇವೆ. ಕಾಂಗ್ರೆಸ್ ನಾಯಕರು ಪ್ರಚಾರ ನಡೆಸಲಿದ್ದಾರೆಯೇ? ಎಂಬುದೇ ಸದ್ಯದ ಪ್ರಶ್ನೆ.
ನವೆಂಬರ್ 3ರಂದು ನಡೆಯಲಿರುವ ಮಂಡ್ಯ ಉಪ ಚುನಾವಣೆಗೆ ಎಲ್.ಆರ್.ಶಿವರಾಮೇಗೌಡ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿ. ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ಅವರು ಅಭ್ಯರ್ಥಿಯಾಗಿದ್ದಾರೆ. ನವೆಂಬರ್ 6ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.....

ಪ್ರತಿಷ್ಠೆಯ ಪ್ರಶ್ನೆ ಅಡಗಿದೆ
ಮಂಡ್ಯ ಜಿಲ್ಲೆಯ ರಾಜಕೀಯವೇ ಹಾಗೆ. ಅಲ್ಲಿನ ನಾಯಕರು ಪ್ರತಿಷ್ಠೆಯನ್ನು ಪಣಕ್ಕಿಟ್ಟಂತೆ ಚುನಾವಣೆಯಲ್ಲಿ ಹೋರಾಡುತ್ತಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವೆ ಭಾರೀ ವಾಗ್ವಾದ ನಡೆದಿತ್ತು. ಆದರೆ, ಚುನಾವಣೆ ಮುಗಿದ ಬಳಿಕ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈಗ ಲೋಕಸಭೆ ಉಪ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಳ್ಳಲಾಗಿದೆ. ಆದ್ದರಿಂದ, ಪಕ್ಷದ ನಾಯಕರ ಒಟ್ಟಾಗಿ ಪ್ರಚಾರ ಮಾಡಲು ಪ್ರತಿಷ್ಠೆ ಅಡ್ಡಿಯಾಗಿದೆ.

ಹೆಸರಿಗೆ ಮಾತ್ರ ಮೈತ್ರಿ ಪಕ್ಷದ ಸಭೆ
ಜೆಡಿಎಸ್ ನಾಯಕರು ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಜಿಲ್ಲೆಯಲ್ಲಿ ಸರಣಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಸಭೆ ಎಂದು ಇದಕ್ಕೆ ಕರೆಯಲಾಗುತ್ತಿದೆ. ಆದರೆ, ಯಾವ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಪ್ರಮುಖ ನಾಯಕರು ಹಾಗಿರಲಿ, 2 ಮತ್ತು 3ನೇ ಹಂತದ ನಾಯಕರು ಸಹ ಜೆಡಿಎಸ್ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿಲ್ಲ.

ಜೆಡಿಎಸ್ನಿಂದ ಅಮಾನತುಗೊಂಡವರು
ಅಂಬರೀಶ್, ರಮ್ಯಾ ಬಳಿಕ ಸದ್ಯ ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಆತ್ಮಾನಂದ ಮುಂತಾದವರು ಜಿಲ್ಲಾ ಕಾಂಗ್ರೆಸ್ನ ಪ್ರಮುಖ ನಾಯಕರಾಗಿದ್ದಾರೆ. ಆದರೆ, ಚುನಾವಣಾ ಪ್ರಚಾರ ಬ್ಯಾನರ್ಗಳಲ್ಲಿ ಅಂಬರೀಶ್, ಆತ್ಮಾನಂದ ಬಿಟ್ಟು ಬೇರೆ ನಾಯಕರ ಚಿತ್ರಗಳು ಕಾಣುತ್ತಿಲ್ಲ. ಅದರಲ್ಲೂ ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಅವರು ಜೆಡಿಎಸ್ನಿಂದ ಅಮಾನತುಗೊಂಡು ಕಾಂಗ್ರೆಸ್ ಸೇರಿದವರು ಅವರನ್ನು ಜೆಡಿಎಸ್ ನಾಯಕರು ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲ.

ಹೊಂದಾಣಿಕೆ ಕಷ್ಟ
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಕಾಂಗ್ರೆಸ್ ನಾಯಕರ ವರ್ತನೆ ಬಗ್ಗೆ ಹೇಳಿಕೆ ನೀಡಿದ್ದು, 'ಕಾಂಗ್ರೆಸ್ ಕಾರ್ಯರ್ತರ ನಡುವೆ ಹೊಂದಾಣಿಕೆ ಕಷ್ಟ ಆಗುತ್ತಿರುವುದು ನಿಜ. ಮೊದಲಿನಿಂದಲೂ ಅವರ ಜೊತೆ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈಗ ಒಟ್ಟಾಗಿ ಹೋಗಲು ಮುಜುಗರ ಉಂಟಾಗುತ್ತಿದೆ. ಆದರೂ ಪಕ್ಷದ ವರಿಷ್ಠರ ಸೂಚನೆ ಪಾಲಿಸಲು ಪ್ರಯತ್ನ ನಡೆಸುತ್ತಿದ್ದೇವೆ' ಎಂದು ಹೇಳಿದ್ದಾರೆ.

ಜೆಡಿಎಸ್ ವಿರುದ್ಧ ಆರೋಪ
ಮಂಡ್ಯ ಕಾಂಗ್ರೆಸ್ ನಾಯಕರ ನಿರ್ಧಾರಕ್ಕೆ ಜೆಡಿಎಸ್ ನಾಯಕರೇ ಕಾರಣ ಎಂಬ ಆರೋಪವಿದೆ. ರಾಮನಗರ, ಜಮಖಂಡಿಯಲ್ಲಿ ಮೈತ್ರಿ ಚೆನ್ನಾಗಿದೆ. ಆದರೆ, ಮಂಡ್ಯದಲ್ಲಿ ಜೆಡಿಎಸ್ ನಾಯಕರು ವಿಧಾನಸಭೆ ಚುನಾವಣೆ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಆದ್ದರಿಂದ, ಇಬ್ಬರ ನಡುವೆ ಸಮನ್ವಯ ಸಾಧ್ಯವಾಗುತ್ತಿಲ್ಲ. ನಾಯಕರ ವರ್ತನೆಯಿಂದ ಬೇಸತ್ತು ಕಾಂಗ್ರೆಸ್ ನಾಯಕರು ಪ್ರಚಾರದಿಂದ ದೂರವಾಗಿದ್ದಾರೆ.












Click it and Unblock the Notifications