ಕೆ.ಆರ್.ಪೇಟೆಯಲ್ಲಿ ಆಲಿಕಲ್ಲು ಮಳೆಗೆ ಧರೆಗುರುಳಿದ ತೆಂಗಿನ ಮರಗಳು
ಮಂಡ್ಯ, ಏಪ್ರಿಲ್ 12 : ಜಿಲ್ಲೆಯ ವಿವಿದೆಡೆ ಗಾಳಿ ಸಹಿತ ಮಳೆಯಾಗಿದ್ದು, ಕೆ.ಆರ್.ಪೇಟೆ ತಾಲೂಕಿನಾದ್ಯಂತ ಮಂಗಳವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ತೆಂಗು, ಅಡಿಕೆ ಮರಗಳು ನೆಲಕ್ಕುರುಳಿದ್ದು, ಮನೆಗಳ ಮೇಲ್ಛಾವಣಿ ಹಾರಿಹೋಗಿವೆ.
ಮಳೆಗಾಗಿ ಪರಿತಪಿಸುತ್ತಿದ್ದ ಮಂದಿ ಇದೀಗ ಮಳೆಯಿಂದಾಗಿರುವ ಅನಾಹುತದಿಂದ ಕಂಗಾಲಾಗಿದ್ದು, ನಷ್ಟಕ್ಕೀಡಾದವರು ತಲೆಮೇಲೆ ಕೈಹೊತ್ತು ಕೂತಿದ್ದಾರೆ. ಇನ್ನು ಈ ಬಿರು ಬೇಸಿಗೆಯಲ್ಲಿ ಮಳೆ ಸುರಿದಿದ್ದರಿಂದ ಕೆಲವರು ಸಂಭ್ರಮದಲ್ಲಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಮಡುವಿನಕೋಡಿ ಗ್ರಾಮದ ಎಂ.ಬಿ.ಶಶಿಧರ್ ಎಂಬ ರೈತರಿಗೆ ಸೇರಿದ ಸುಮಾರು 100 ತೆಂಗಿನ ಮರಗಳು ಬುಡಸಮೇತ ನೆಲಕ್ಕುರುಳಿ ಬಿದ್ದಿವೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಚಂದಗೋನಹಳ್ಳಿಯಮ್ಮ ಶ್ರೀ ಕ್ಷೇತ್ರದಲ್ಲಿ ನಿರ್ಮಿಸಲಾಗಿದ್ದ ಸುಮಾರು 30 ತಾತ್ಕಾಲಿಕ ಊಟದ ಶೆಡ್ ಗಳ ತಗಡಿನ ಮತ್ತು ಸಿಮೆಂಟ್ ಶೀಟಿನ ಮೇಲ್ಛಾವಣಿಗಳು ಹಾರಿ ಹೋಗಿ ಊಟಕ್ಕೆ ಕುಳಿತಿದ್ದ ಹಲವು ಮಂದಿಗೆ ಶೀಟುಗಳು ಬಡಿದು ಗಾಯಗಳಾಗಿವೆ.
ದೇವರ ಹರಕೆ ಪರ ಮಾಡುತ್ತಿದ್ದ ಸಾಲಿಗ್ರಾಮದ ದೇವಮ್ಮ ಅವರ ಎರಡು ವರ್ಷದ ಮಗುವನ್ನು ಸೀರೆಯಲ್ಲಿ ಕಟ್ಟಿದ್ದ ತೊಟ್ಟಿಲಲ್ಲಿದ್ದ ಮಗು ಬಿರುಗಾಳಿಯ ರಭಸಕ್ಕೆ ಸುಮಾರು 50 ಮೀಟರ್ ದೂರಕ್ಕೆ ಹಾರಿ ಹೋಗಿದ್ದು ಅಲ್ಲೇ ದೇವರ ದರ್ಶನಕ್ಕೆ ಬಂದಿದ್ದ ಹೊಳೆನರಸೀಪುರ ರವಿಕುಮಾರ್ ಎಂಬುವವರು ಮಗುವನ್ನು ರಕ್ಷಣೆ ಮಾಡಿ ಮಗುವಿನ ತಾಯಿಗೆ ಒಪ್ಪಿಸಿದ್ದಾರೆ.
ಮುರಕನಹಳ್ಳಿ ಗ್ರಾಮದಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳ ಹಂಚುಗಳು ಹಾರಿಹೋಗಿವೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.