ಮೇಲುಕೋಟೆಯ ರಾಜಮುಡಿ ಕಿರೀಟಧಾರಣಾ, ಅಷ್ಟತೀರ್ಥೋತ್ಸವದ ಮೇಲೆ ನಿರ್ಬಂಧ
ಮಂಡ್ಯ, ನವೆಂಬರ್ 18: ಕೊರೊನಾ ಸೋಂಕಿನ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿ ರಾಜ್ಯದ ಹಲವು ದೇವಸ್ಥಾನಗಳಲ್ಲಿ ನಡೆಯುವ ಪ್ರಸಿದ್ಧ ಉತ್ಸವಗಳಿಗೆ ನಿರ್ಬಂಧ ಹೇರಲಾಗಿದೆ. ಕೆಲವು ದೇವಸ್ಥಾನದ ಆಡಳಿತ ಮಂಡಳಿಗಳೇ ಸ್ವಯಂ ತೀರ್ಮಾನ ತೆಗೆದುಕೊಂಡು ಹೆಚ್ಚು ಜನ ಸೇರುವುದನ್ನು ತಡೆಗಟ್ಟಲು ಉತ್ಸವಗಳನ್ನು ಸಾಂಪ್ರದಾಯಿಕವಾಗಿ ಮಾತ್ರ ನಡೆಸುತ್ತಿವೆ.
ಇದೀಗ ಮೇಲುಕೋಟೆಯ ಅಷ್ಟತೀರ್ಥೋತ್ಸವಕ್ಕೂ ಕೊರೊನಾ ಅಡ್ಡಿಯಾಗಿದೆ. ತೊಟ್ಟಿಲ ಮಡು ಉತ್ಸವ ಎಂದೇ ಖ್ಯಾತಿ ಪಡೆದಿರುವ ಈ ಅಷ್ಟ ತೀರ್ಥೋತ್ಸವಕ್ಕೆ ನಿರ್ಬಂಧ ಹೇರಲಾಗಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ರಾಜಮುಡಿ ಕಿರೀಟಧಾರಣಾ ಉತ್ಸವ ಹಾಗೂ ಅಷ್ಟತೀರ್ಥೋತ್ಸವ ನಡೆಯುತ್ತದೆ. ಈ ಬಾರಿ ನವೆಂಬರ್ 17ರಿಂದಲೇ ಉತ್ಸವ ಪ್ರಕ್ರಿಯೆಗಳು ಆರಂಭವಾಗಿದ್ದು ನ. 26ರವರೆಗೂ ನಡೆಯಲಿದೆ. ಆದರೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಉತ್ಸವಕ್ಕೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ.

ನ.22ರಂದು ನಡೆಯುವ ರಾಜಮುಡಿ ಕಿರೀಟಧಾರಣಾ ಉತ್ಸವವನ್ನು ದೇವಾಲಯದ ಒಳಪ್ರಾಕಾರದಲ್ಲಿ ಮಾತ್ರ ನಡೆಸಲು ಅವಕಾಶವಿದೆ. ಸುಮಾರು 10 ಕಿ.ಮೀ. ದೂರದ ಮೆರವಣಿಗೆ ಒಳಗೊಂಡಿದ್ದ ಅಷ್ಟ ತೀರ್ಥೋತ್ಸವ ಯಾತ್ರೆಯನ್ನು ನಿರ್ಬಂಧಿಸಿ ನ.24ರಂದು ಸಾಂಪ್ರದಾಯಿಕವಾಗಿ ಮಾತ್ರ ನೆರವೇರಿಸಲು ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ನವೆಂಬರ್ 17ರ ವರದಿಯಂತೆ ಇದುವರೆಗೂ ಒಟ್ಟು 18043 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 17418 ಮಂದಿ ಗುಣಮುಖರಾಗಿದ್ದಾರೆ. ಸದ್ಯಕ್ಕೆ 479 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ ಒಟ್ಟು 146 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.












Click it and Unblock the Notifications