ಸ್ವತಂತ್ರ ಸಂಗ್ರಾಮದಲ್ಲಿ ಬಿಜೆಪಿ, ಆರೆಸ್ಸೆಸ್ ಭಾಗವಹಿಸಿಲ್ಲ: ರಮ್ಯಾ
ಮಂಡ್ಯ, ಆಗಸ್ಟ್ 30: ಭಾರತ ಸ್ವಾತಂತ್ರ್ಯಸಂಗ್ರಾಮದಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ಭಾಗವಹಿಸಿರಲಿಲ್ಲ. ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದು ನಟಿ, ಮಾಜಿ ಸಂಸದೆ ರಮ್ಯಾ ಅವರು ಮಂಗಳವಾರ ಹೇಳಿದ್ದಾರೆ. ಈ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಆರೆಸ್ಸೆಸ್ ಹಾಗೂ ಬಿಜೆಪಿಯವರು ಬ್ರಿಟಿಷರೊಂದಿಗೆ ಸೇರಿಕೊಂಡಿದ್ದರು ಎಂಬ ಹೇಳಿಕೆ ನೀಡುವ ಮೂಲಕ ಮಾಜಿ ಸಂಸದೆ ರಮ್ಯಾ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೋಂಡಿದ್ದಾರೆ. [ರಮ್ಯಾಗೆ ದೇವೇಗೌಡರ ಬೆಂಬಲ ದುರಾದೃಷ್ಟಕರ: ರೇಣುಕಾ]
ಮಂಗಳವಾರ ನಗರದ ಸಕ್ಕರೆ ವೃತ್ತದಿಂದ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕ 'ವಿದ್ಯಾರ್ಥಿಗಳ ನಡೆ ದೇಶದ ಬೆಳವಣಿಗೆ ಕಡೆ' ಘೋಷಣೆಯಡಿ ನಡೆಸಿದ ಜಾಥಾಕ್ಕೆ ಎನ್ಎಸ್ಯುಐ ಜಿಲ್ಲಾ ಘಟಕ ನೀಡಿದ್ದ ಆಹ್ವಾನದ ಮೇರೆಗೆ ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳೊಂದಿಗೆ ತಿರಂಗ ಹಿಡಿದು ಹೆಜ್ಜೆ ಹಾಕಿ ಮಾತನಾಡಿ ಸ್ವಾತಂತ್ರ್ಯ ಪೂರ್ವದಿಂದಲೂ ಬಿಟಿಷರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಬಿಜೆಪಿ ಮತ್ತು ಆರ್ಎಸ್ಎಸ್ನವರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿರಲಿಲ್ಲ, ಅವರ ಕೊಡುಗೆ ಏನೂ ಇಲ್ಲ ಎಂದು ಹೇಳಿದರು. [ಪಾಕಿಸ್ತಾನ ನರಕವಲ್ಲ, ನನ್ನ ಹೇಳಿಕೆ ಬದ್ಧಳಾಗಿದ್ದೇನೆ: ರಮ್ಯಾ ಲೇಖನ]

ರಮ್ಯಾ ನೋಡಲು ಮುಗಿಬಿದ್ದ ವಿದ್ಯಾರ್ಥಿಗಳು
ರಮ್ಯಾ ನೋಡಲು ವಿದ್ಯಾರ್ಥಿಗಳು ಮುಗಿಬಿದ್ದ ಕಾರಣ ನೂಕುನುಗ್ಗಲು ಉಂಟಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಿಡಿದಿದ್ದ ಧ್ವಜದ ಸ್ವಲ್ಪ ಭಾಗ ಕಿತ್ತು ಬಂದಿತ್ತು. ಇದನ್ನು ಗಮನಿಸಿದ ವಿದ್ಯಾರ್ಥಿ ಸಂಘಟನೆ ಮುಖಂಡರು ಅದನ್ನು ಕಾಣಿಸದಂತೆ ಭದ್ರವಾಗಿ ಹಿಡಿದುಕೊಂಡು ಸಾಗಿದರು. ಎಲ್ಲೂ ಅದು ಪ್ರದರ್ಶನಗೊಳ್ಳದಂತೆ ಎಚ್ಚರಿಕೆ ವಹಿಸಿದ್ದು ಕಂಡುಬಂತು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಕಾಂಗ್ರೆಸ್ಸಿಗರು ಮಾತ್ರ
ಸುಮಾರು 3,500 ಚದರ ಅಡಿ ಉದ್ದದ ತಿರಂಗ ಧ್ವಜವನ್ನು ಹೊತ್ತು ತಂದ ವಿದ್ಯಾರ್ಥಿಗಳು ಸರ್.ಎಂ.ವಿ. ಪ್ರತಿಮೆ ಬಳಿ ಅಂತ್ಯಗೊಳಿಸಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿ, ಆರ್ಎಸ್ಎಸ್ ನವರ ಪಾತ್ರ ಏನೂ ಇಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಕಾಂಗ್ರೆಸ್ಸಿಗರು ಮಾತ್ರ. ಬಿಜೆಪಿಯವರಾಗಲೀ, ಆರ್.ಎಸ್.ಎಸ್.ನವರಿಂದಾಗಲೀ ಸ್ವಾತಂತ್ರ್ಯ ಲಭಿಸಲಿಲ್ಲ ಎಂದು ಕಟುವಾಗಿ ಮಾತನಾಡಿದರು.

ಎಲ್ಲರಿಗೂ ಒಳ್ಳೆಯದನ್ನೇ ಬಯಸಬೇಕು
ನಮ್ಮ ದೇಶದಲ್ಲಿ ವಿವಿಧ ಧರ್ಮ, ಭಾಷೆ, ಜಾತಿ ಸೇರಿದಂತೆ ಎಲ್ಲಾ ರೀತಿಯ ಜನರಿದ್ದಾರೆ. ಎಲ್ಲರನ್ನೂ ನಾವು ಒಂದೇ ರೀತಿ ನೋಡಬೇಕು. ಒಂದೇ ರೀತಿ ಪ್ರೀತಿಸಬೇಕು. ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನೇ ಬಯಸಬೇಕು ಎಂದು ಹೇಳಿದರು.

ರಾಜಕಾರಣದ ಬಗ್ಗೆ ಪ್ರಶ್ನೆಗೆ ನೋ ಕಾಮೆಂಟ್ಸ್
ಮಂಗಳೂರಿನಲ್ಲಿ ನಡೆದ ಘಟನೆ ಹಾಗೂ ಪ್ರಸ್ತುತ ರಾಜಕಾರಣದ ಕುರಿತಂತೆ ಕೇಳಿದ ಪ್ರಶ್ನೆಗೆ ನೋ ಕಾಮೆಂಟ್ಸ್ ಎಂದು ಹೇಳಿ ಜಾರಿಕೊಂಡಿದ್ದಾರೆ. ಇದೀಗ ರಮ್ಯಾ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.











Click it and Unblock the Notifications