ರಾಧಿಕಾ ಕುಮಾರಸ್ವಾಮಿ ಅಭಿಮಾನಿಯಿಂದ ಉರುಳುಸೇವೆ!
ಮಂಡ್ಯ, ಜನವರಿ 10: ಹಲವು ಗಣ್ಯರಿಗೆ ವಂಚಿಸಿರುವ ಆರೋಪದ ಮೇಲೆ ಸಿಸಿಬಿ ಯುವರಾಜ್ ಬಂಧಿಸಿದೆ. ವಂಚಕನ ಖಾತೆಯಿಂದ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಕೋಟಿಗಟ್ಟಲೆ ಹಣ ವರ್ಗಾವಣೆಗೊಂಡಿದೆ. ಈ ಕುರಿತು ರಾಧಿಕಾ ಅವರನ್ನು ಸಿಸಿಬಿ ವಿಚಾರಣೆ ಸಹ ನಡೆಸಿದೆ.
ಮಂಡ್ಯದ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳ ಬಳಗ ಅವರನ್ನು ಎಲ್ಲಾ ಆರೋಪಗಳು ಮತ್ತು ಸಂಕಷ್ಟಗಳಿಂದ ಮುಕ್ತಗೊಳ್ಳುವಂತೆ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿತು. ಅಭಿಮಾನಿ ವೆಂಕಟೇಶ್ ವಿಶೇಷ ಪೂಜೆ ಸಲ್ಲಿಸಿ, ಉರುಳು ಸೇವೆ ಮಾಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ವೆಂಕಟೇಶ್, "ರಾಜಕೀಯ ನಾಯಕರ ಹೆಸರು ಹೇಳಿಕೊಂಡು ವಂಚನೆ ಮಾಡಿರುವ ಆರೋಪದ ಮೇರೆಗೆ ಸಿಸಿಬಿ ಪೊಲೀಸರ ವಶದಲ್ಲಿರುವ ಯುವರಾಜ್ ಅವರು, ಚಲನಚಿತ್ರ ನಾಯಕಿ ನಟಿ ರಾಧಿಕಾ ಕುಮಾರಸ್ವಾಮಿ ಅವರ ಮೇಲೆ ಆರೋಪಿಸಿರುವುದು ಅವರ ಅಭಿಮಾನಿಗಳಿಗೆ ಬೇಸರವಾಗಿದೆ, ಕನ್ನಡ ಚಿತ್ರರಂಗದಲ್ಲಿ ರಾಧಿಕಾ ಅವರು ತಮ್ಮದೇ ಆದ ಕಲೆ ಮತ್ತು ಕನ್ನಡ ಸೇವೆ ಮಾಡುತ್ತಿದ್ದಾರೆ" ಎಂದರು.

ರಾಧಿಕಾ ಕುಮಾರಸ್ವಾಮಿ ಕೋವಿಡ್-19ರ ಸಂಕಷ್ಟದ ದಿನಗಳಲ್ಲಿ ಬಡವರ ಪರ ನಿಂತು, ಆಹಾರದ ಕಿಟ್, ಆರೋಗ್ಯಸೇವೆಗಳನ್ನು ಮಾಡಿದ್ದಾರೆ ಇಂತಹವರ ಮೇಲೆ ಯಾವುದೇ ದುಷ್ಟಶಕ್ತಿಗಳ ಆರೋಪಗಳು ಬಾರದಿರಲಿ ಎಂದು ವಿಶೇಷ ಪೂಜೆ ಮಾಡಿಸಿದ್ದಾರೆ.
ರಾಧಿಕಾ ಅವರಿಗೆ ಎದುರಾಗಿರುವ ಸಂಕಷ್ಟಗಳು ದೂರವಾಗಿ ಆರೋಪದಿಂದ ಶೀಘ್ರ ಮುಕ್ತಗೊಂಡು ಅಭಿಮಾನಿಗಳ ಸಂತಸಕ್ಕೆ ಪ್ರೇರಣೆ ನೀಡುವ ಸುಖದಿನಗಳು ಬರಲಿ ಎಂದು ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿ ಉರುಳು ಸೇವೆ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಸಂಕಷ್ಟರಿಂದ ಬಹುಬೇಗ ಪಾರಾಗುವಂತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಗೋಮಾತೆಗೆ ಹಣ್ಣು, ಹಂಪಲು ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವಾಲಯದ ಸುತ್ತ ಉರುಳುಸೇವೆ ಮಾಡಿದರು. ರಾಧಿಕಾ ಕುಮಾರಸ್ವಾಮಿ ಅವರ ಹಲವು ಅಭಿಮಾನಿಗಳು ಉಪಸ್ಥಿತರಿದ್ದರು.












Click it and Unblock the Notifications