ಪುಲ್ವಾಮಾ ದಾಳಿ; ಹುತಾತ್ಮ ಗುರು ಸಮಾಧಿಗೆ ಪ್ರತ್ಯೇಕ ಪೂಜೆ
ಮಂಡ್ಯ, ಫೆಬ್ರವರಿ 14; ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ದಾಳಿ ನಡೆದು ಎರಡು ವರ್ಷಗಳು ಕಳೆದಿದ್ದು, ದೇಶದ ಜನರು ಇಂದು ಹುತಾತ್ಮರಾಧ ಯೋಧರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.
ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ. ಎಂ. ದೊಡ್ಡಿ ಸಮೀಪದ ಗುಡಿಗೆರೆ ಗ್ರಾಮದ ಗುರು (33) ಹುತಾತ್ಮರಾಗಿದ್ದರು. ಗುರು ಸಿಆರ್ಪಿಎಫ್ 82ನೇ ಬೆಟಾಲಿಯನ್ ಯೋಧರಾಗಿದ್ದರು.
ಗುರು ಹುತಾತ್ಮರಾದ ಬಳಿಕ ಕರ್ನಾಟಕ ಸರ್ಕಾರ, ವಿವಿಧ ಸಂಘಟನೆಗಳಿಂದ ಅವರ ಕುಟುಂಬಕ್ಕೆ ಅಪಾರವಾದ ಹಣ ಹರಿದು ಬಂತು. ಹಣವ ವಿಚಾರದಲ್ಲಿ ಗುರು ಪತ್ನಿ ಮತ್ತು ತಂದೆ-ತಾಯಿಗಳ ನಡುವೆ ಅಸಮಾಧಾನ ಉಂಟಾಗಿತ್ತು.

ಕಳೆದ ವರ್ಷ ಗುರು ಪತ್ನಿ ಮತ್ತು ತಂದೆ-ತಾಯಿ ಪ್ರತ್ಯೇಕವಾಗಿ ಗುರು ಸಮಾಧಿಗೆ ಪೂಜೆ ಸಲ್ಲಿಸಿದ್ದರು. ಪರಸ್ಪರ ವಿರುದ್ಧ ಆರೋಪಗಳನ್ನು ಮಾಡಿದ್ದರು. ಈ ಮೂಲಕ ಕುಟುಂಬದ ಅಸಮಾಧಾನವನ್ನು ಹೊರಹಾಕಿದ್ದರು.
ಈ ವರ್ಷವೂ ಸಹ ಪತ್ನಿ, ಕುಟುಂಬದವರು ಪ್ರತ್ಯೇಕವಾಗಿ ಗುರು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಕುಟುಂಬದಲ್ಲಿನ ಬಿಕ್ಕಟ್ಟು ಇನ್ನೂ ಅಂತ್ಯವಾಗಿಲ್ಲ. ಗುರು ಅವರ ಪತ್ನಿ ಅತ್ತೆ, ಮಾವನ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ.
ಹುತಾತ್ಮರಾದ ಗುರು ಅವರು ಪ್ರಾಥಮಿಕ ಶಾಲಾ ವ್ಯಾಸಂಗವನ್ನು ಮದ್ದೂರು ತಾಲೂಕಿನ ಭಾರತೀನಗರ ದಿವ್ಯಜ್ಯೋತಿ ಕಾನ್ವೆಂಟ್ನಲ್ಲಿ ಮಾಡಿದ್ದರು. ಸರ್ಕಾರಿ ಪ್ರೌಢಶಾಲೆಯಲ್ಲಿಯೂ ವ್ಯಾಸಂಗ ಮಾಡಿದ್ದರು. ಶ್ರೀರಂಗಪಟ್ಟಣದ ಐಟಿಐ ಕಾಲೇಜಿನಲ್ಲಿ ಓದಿದ್ದರು.
ಎಸ್ಎಸ್ಎಲ್ಸಿ ಆಧಾರದ ಮೇಲೆ ಸಿಆರ್ಪಿಎಫ್ ಸೇರಿದ್ದರು. ಸುಮಾರು7 ವರ್ಷಗಳ ಕಾಲ ಗುರು ಅವರು ದೇಶದ ವಿವಿಧ ಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು.
ಸ್ಮಾರಕ ನಿರ್ಮಾಣ ಆಗಿಲ್ಲ; ಮಂಡ್ಯ ಜಿಲ್ಲಾಡಳಿತ ಗುರು ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡುವ ಭರವಸೆ ನೀಡಿತ್ತು. ಆದರೆ, ಎರಡು ವರ್ಷ ಕಳೆದರೂ ಸ್ಮಾರಕ ನಿರ್ಮಿಸಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications