ಪುಲ್ವಾಮದ ಉಗ್ರರ ದಾಳಿ : ಮಂಡ್ಯದ ಸಿಆರ್ಪಿಎಫ್ ಜವಾನ ಹುತಾತ್ಮ
Recommended Video

ಮಂಡ್ಯ, ಫೆಬ್ರವರಿ 14 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕ ಮೂಲದ ಸಿಆರ್ಪಿಎಫ್ ಜವಾನರೊಬ್ಬರು ಹುತಾತ್ಮರಾಗಿದ್ದಾರೆ. ದಾಳಿಯಲ್ಲಿ ಒಟ್ಟು 44 ಯೋಧರು ವೀರಮರಣವನ್ನಪ್ಪಿದ್ದಾರೆ.
ಗುರುವಾರ ಪುಲ್ವಾಮದಲ್ಲಿ ನಡೆದ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದುರು ತಾಲೂಕಿನ ಗುಡಿಗೆರೆ ಗ್ರಾಮದ ಎಚ್.ಗುರು (33) ಹುತಾತ್ಮರಾಗಿದ್ದಾರೆ. ಎಚ್.ಗುರು ಅವರು ಹೊನ್ನಯ್ಯ ಎಂಬುವವರ ಪುತ್ರ.
82ನೇ ಬೆಟಾಲಿಯನ್ನಲ್ಲಿ ಗುರು ಕಾರ್ಯ ನಿರ್ವಹಿಸುದ್ದರು. 6 ತಿಂಗಳ ಹಿಂದೆ ಅವರು ವಿವಾಹವಾಗಿದ್ದರು. ಗುರು ಹುತಾತ್ಮರಾದ ಸುದ್ದಿ ತಿಳಿದು ಕುಟುಂಬಸ್ಥರು ತೀವ್ರವಾದ ದುಃಖದಲ್ಲಿದ್ದಾರೆ.

ಎಚ್.ಗುರು ಅವರು ಹುತಾತ್ಮರಾದ ಬಗ್ಗೆ ಕುಟುಂಬದವರಿಗೆ ಸೇನೆಯಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ವಿವಾಹದ ಬಳಿಕ ಅವರು ರಜೆ ಹಾಕಿದ್ದರು. ಫೆ.10ರಂದು ಅವರು ಪುನಃ ವಾಪಸ್ ತೆರಳಿದ್ದರು ಎಂದು ಸ್ನೇಹಿತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
5 ವರ್ಷಗಳಿಂದ ಎಚ್.ಗುರು ಅವರು ಸಿಆರ್ಪಿಎಫ್ನಲ್ಲಿ ಸೇವೆ ಸಲ್ಲಿಸಿದ್ದರು. ಮೊದಲು ಅವರು ಜಾರ್ಖಂಡ್ನಲ್ಲಿ 94 ನೇ ಬೆಟಾಲಿಯನ್ನಲ್ಲಿದ್ದರು. ಬಳಿಕ 82ನೇ ಬೆಟಾಲಿಯನ್ ಸೇರಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು.
ಗುರುವಾರ ಮಧ್ಯಾಹ್ನ ಪುಲ್ವಾಮದ ಅವಂತಿಪುರ್ನಲ್ಲಿ ಉಗ್ರರು ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 44 ಯೋಧರು ಮೃತಪಟ್ಟಿದ್ದಾರೆ. ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.












Click it and Unblock the Notifications