ತಮಿಳುನಾಡಿನಲ್ಲಿ ಪತ್ತೆಯಾದ ಮಂಡ್ಯದ ವಿಷ್ಣು ವಿಗ್ರಹದ ಹಿಂದಿನ ಕಥೆ, ಪೊಲೀಸರು ಹೇಳಿದ್ದೇನು?
ಮಂಡ್ಯ, ನವೆಂಬರ್, 10: ತಮಿಳುನಾಡಿನಲ್ಲಿ ಪತ್ತೆಯಾಗಿರುವ ಮಂಡ್ಯದ ವಿಷ್ಣುವಿನ ವಿಗ್ರಹ ಯಾವ ದೇವಾಲಯಕ್ಕೆ ಸೇರಿದ್ದು ಎನ್ನುವುದರ ಮೂಲ ಪತ್ತೆ ಆಗುತ್ತಿಲ್ಲ. ಚೋಳರ ಕಾಲಕ್ಕೆ ಸೇರಿದ್ದು ಎನ್ನಲಾದ ಈ ವಿಗ್ರಹ ಪಾಳುಬಿದ್ದ ದೇವಸ್ಥಾನಕ್ಕೆ ಸೇರಿರಬಹುದು ಎಂಬುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ.
ಸಾಮಾನ್ಯವಾಗಿ ವಿಷ್ಣುವಿನ ಎಲ್ಲಾ ಉತ್ಸವ ಮೂರ್ತಿಗಳು ಒಂದೇ ಶೈಲಿಯಲ್ಲಿ ಇರುವುದರಿಂದ ಈ ವಿಗ್ರಹ ಇಂತಹ ದೇವಾಲಯಕ್ಕೆ ಸೇರಿದ್ದು ಎಂದು ನಿರ್ದಿಷ್ಟವಾಗಿ ಹೇಳಲು ಆಗುವುದಿಲ್ಲ. ಯಾವುದೋ ಪಾಳುಬಿದ್ದ ವಿಷ್ಣುವಿನ ದೇವಾಲಯದಿಂದ ಕದ್ದೊಯ್ದಿರಬಹುದು. ಆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗದೆಯೂ ಇರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. 600 ವರ್ಷಗಳಷ್ಟು ಪುರಾತನವಾದ ಈ ವಿಗ್ರಹ ಪಂಚಲೋಹದ ವಿಗ್ರಹವಾಗಿದೆ. ಇದು ಮಂಡ್ಯಕ್ಕೆ ಸೇರಿದ್ದು ಎಂಬ ಮಾಹಿತಿಯನ್ನು ಹೊರತುಪಡಿಸಿದರೆ, ಯಾವ ತಾಲೂಕು, ಯಾವ ಊರಿನದ್ದು ಎಂಬುದು ಯಾರಿಗೂ ಇನ್ನು ನಿಖರ ಮಾಹಿತಿ ಇಲ್ಲ. ತಮಿಳುನಾಡು ಮೂಲದ ವಕೀಲ ನಟರಾಜ್ಗೆ ವಿಗ್ರಹ ನೀಡಿದ ಆ ಪೂಜಾರಿ ಯಾರು ಎನ್ನುವುದು ಗೊತ್ತಿಲ್ಲ.
ತಮಿಳುನಾಡಿನಲ್ಲಿ ಮಂಡ್ಯದ ಬಾಲಾಜಿ ವಿಗ್ರಹ ಪತ್ತೆ: ಪೊಲೀಸರ ಶೋಧ ಕಾರ್ಯ ಹೇಗಿತ್ತು?
ಪೂಜಾರಿಯಿಂದ ವಿಗ್ರಹ ಪಡೆದುಕೊಂಡಿದ್ದ ವಕೀಲ ನಟರಾಜ್ ಕೂಡ ಸಾವನ್ನಪ್ಪಿರುವುದರಿಂದ ವಿಗ್ರಹದ ಮೂಲ ಪತ್ತೆ ಮಾಡುವುದು ಸುಲಭದ ಕೆಲಸವಲ್ಲ ಎಂದು ಹೇಳಲಾಗುತ್ತಿದೆ. ಇದು ಪ್ರತಿಷ್ಠಿತ ದೇವಾಲಯಕ್ಕೆ ಸೇರಿದ ವಿಗ್ರಹವಾಗಿದ್ದರೆ ಅದು ಎಂದೋ ಬಹಿರಂಗಗೊಳ್ಳುತ್ತಿತ್ತು. ಇಲ್ಲದಿದ್ದರೆ ಆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿತ್ತು. ಈ ವಿಗ್ರಹದ ಮೂಲವೇ ಪತ್ತೆ ಆಗದಿರುವುದರಿಂದ ತಮಿಳುನಾಡಿನಲ್ಲಿ ಪತ್ತೆಯಾದ ಮಂಡ್ಯದ ವಿಷ್ಣುವಿನ ವಿಗ್ರಹ ಅನಾಥವಾಗಿ ಉಳಿಯುವಂತಾಗಿದೆ.
ಪೊಲೀಸ್ ಇಲಾಖೆಯಿಂದ ಶೋಧ ಕಾರ್ಯ
ಜಿಲ್ಲಾ ಪೊಲೀಸ್ ಇಲಾಖೆಯೂ ವಿಗ್ರಹದ ಮೂಲ ಪತ್ತೆಹಚ್ಚುವ ಕಾರ್ಯ ಕೈಗೊಂಡು ಪರಿಶೀಲನೆ ನಡೆಸುತ್ತಿದೆ. ಆದರೆ ಪುರಾತನ ವಿಷ್ಣು ವಿಗ್ರಹ ಕಳುವಾಗಿರುವ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ. ಹಾಗಾಗಿ ವಿಗ್ರಹವಿದ್ದ ದೇಗುಲದ ಮೂಲಸ್ಥಾನ ಪತ್ತೆಯಾಗದೆ ಪೊಲೀಸರಿಗೂ ಪ್ರಕರಣ ಸವಾಲಾಗಿ ಪರಿಣಮಿಸಿದೆ.
ಮಂಡ್ಯದಲ್ಲಿ ಪ್ರಥಮ ಬಾರಿಗೆ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಕ್ಕೆ ಸಿದ್ದತೆ
ಪೊಲೀಸರಿಗೆ ತಲೆನೋವಾದ ವಿಷ್ಣು ವಿಗ್ರಹ
ಈ ಬೆಳವಣಿಗೆಗಳನ್ನು ಗಮನಿಸಿದಾಗ ಈ ವಿಷ್ಣುವಿನ ವಿಗ್ರಹದ ಮೂಲ ದೇಗುಲ ಪಾಳುಬಿದ್ದು ನಾಶವಾಗಿರಬಹುದು. ಇಲ್ಲವೇ ಪಾಳುಬಿದ್ದ ಸ್ಥಿತಿಯಲ್ಲಿ ಈಗಲೂ ಉಳಿದಿರಬಹುದು. ಜನರಿಂದ ದೂರವಾಗಿದ್ದ ದೇಗುಲದಲ್ಲಿದ್ದ ಈ ವಿಗ್ರಹವನ್ನು ತೆಗೆದುಕೊಂಡು ಹೋಗಿ ತಮಿಳುನಾಡು ಮೂಲದ ವಕೀಲನಿಗೆ ಮಾರಾಟ ಮಾಡಿರಬಹುದು. ಆ ವಿಗ್ರಹ ಐದು ವರ್ಷಗಳ ಬಳಿಕ ವಿಗ್ರಹದ ಕಳ್ಳರಿಗೆ ಮಾರಾಟ ಮಾಡಲು ಯತ್ನಿಸುತ್ತಿರುವಾಗ ಸಿಕ್ಕಿರಬಹುದು ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ.
ಪತ್ರಿಕೆಗಳಿಂದ ನಮ್ಮ ಗಮನಕ್ಕೆ ಬಂದಿದೆ
ಮೂಲ ಪತ್ತೆಯಾಗದೆ ವಿಷ್ಣುವಿನ ವಿಗ್ರಹವನ್ನು ಮಂಡ್ಯಕ್ಕೆ ತರುವ ಯಾವುದೇ ಪ್ರಯತ್ನಗಳು ಯಾರಿಂದಲೂ ನಡೆಯುತ್ತಿಲ್ಲ. ಹೀಗಾಗಿ ಮಂಡ್ಯಕ್ಕೆ ಸೇರಿದ ವಿಷ್ಣು ವಿಗ್ರಹ ತಮಿಳುನಾಡಿನಲ್ಲೇ ಉಳಿದಿದೆ. ಮೂಲಸ್ಥಾನ ಪತ್ತೆಯಾಗದೆ ವಿಷ್ಣು ದೇವರು ನೆರೆ ರಾಜ್ಯದಲ್ಲೇ ನೆಲೆ ಕಂಡುಕೊಳ್ಳುವಂತಾಗಿದೆ. ಮಂಡ್ಯ ಮೂಲದ ವಿಗ್ರಹ ತಮಿಳುನಾಡಿನಲ್ಲಿ ಪತ್ತೆ ಆಗಿರುವುದು ಪತ್ರಿಕೆಗಳಿಂದ ನಮ್ಮ ಗಮನಕ್ಕೆ ಬಂದಿದೆ ಎಂದು ಮಂಡ್ಯ ಪೊಲೀಸರು ತಿಳಿಸಿದ್ದಾರೆ.
ವಿಗ್ರಹದ ಮೂಲ ಪತ್ತೆ ಹಚ್ಚಲಾಗುತ್ತಿಲ್ಲ
ಜಿಲ್ಲೆಯಲ್ಲಿ ಐದು ವರ್ಷದ ಕಳ್ಳತನ ಪ್ರಕರಣಗಳನ್ನೆಲ್ಲಾ ಕ್ಲೋಸ್ ಮಾಡಿದ್ದೇವೆ. ವಿಷ್ಣುವಿನ ವಿಗ್ರಹ ಕಳ್ಳತನ ಆಗಿರುವ ಬಗ್ಗೆ ಎಲ್ಲಿಯೂ ದೂರು ದಾಖಲಾಗಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾದ ನಂತರವೂ ಇದು ನಮ್ಮ ದೇಗುಲಕ್ಕೆ ಸೇರಿದ ವಿಗ್ರಹವೆಂದು ಯಾರೂ ನಮ್ಮ ಬಳಿಗೆ ಬಂದಿಲ್ಲ. ಹಾಗಾಗಿ ಈ ವಿಗ್ರಹದ ಮೂಲ ಪತ್ತೆ ಹಚ್ಚಲಾಗುತ್ತಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಹೇಳಿದ್ದಾರೆ.