30 ಮಂದಿ ಪ್ರಾಣ ಹೋಗಿದ್ದ ಕನಗನಮರಡಿ ನಾಲೆಯ ಕಂಡರೆ ಭಯವೋ ಭಯ
Recommended Video
ಕಳೆದ ವಾರ (ನವೆಂಬರ್ 24) ಈ ಸಮಯದಲ್ಲಿಯೇ ರಾಜ್ಯವನ್ನೇ ತಲ್ಲಣಗೊಳಿಸಿದ ಅತೀ ದೊಡ್ಡ ಅಪಘಾತವೊಂದು ಘಟಿಸಿತು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿಯ ನುಗ್ಗಹಳ್ಳಿ ಗೇಟ್ ಬಸ್ ದುರಂತದಲ್ಲಿ 30 ಮಂದಿ ಮೃತಪಟ್ಟಿದ್ದರು. ಇದಾದ ನಂತರ ಇದೇ ಜಾಗದಲ್ಲಿ ಮತ್ತೆ 2 ಅಪಘಾತ ನಡೆದದ್ದು, ಸ್ಥಳೀಯರಲ್ಲಿ ಭಯ ಹೆಚ್ಚಾಗುವಂತೆ ಮಾಡಿದೆ.
ಕನಗನಮರಡಿ, ವದೆಸಮುದ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಇದರ ಮಧ್ಯೆ ಇಲ್ಲಸಲ್ಲದ ಗಾಳಿಸುದ್ದಿ ಹರಿದಾಡುತ್ತಿವೆ. ಬಸ್ ದುರಂತ ನಡೆದ ಸ್ಥಳದಲ್ಲಿಯೇ ಕಳೆದ ಗುರುವಾರ ಸಂಜೆ ಮತ್ತೊಂದು ಅಪಘಾತ ಸಂಭವಿಸಿದ್ದು, ಸಂಜೆ 5.30ರ ನಂತರ ಆ ರಸ್ತೆಯಲ್ಲಿ ಸಂಚರಿಸಲು ಹೆದರುತ್ತಿದ್ದಾರೆ. ಹಗಲು ಸಮಯದಲ್ಲಿ ಬಸ್ ಬಿದ್ದ ನಾಲೆಯ ರಸ್ತೆಯಲ್ಲಿ ನಿಲ್ಲಲು ಸಹ ಜನರು ಭಯ ಬೀಳುತ್ತಿದ್ದು, ಒಬ್ಬೊಬ್ಬರೇ ಬರುವುದನ್ನು ನಿಲ್ಲಿಸಿದ್ದಾರೆ.
ವ್ಯವಸಾಯ ಮಾಡುವವರು ಸಹ ಮೂರ್ನಾಲ್ಕು ಮಂದಿ ಜೊತೆಯಲ್ಲಿಯೇ ತೆರಳಿ, ವಾಪಸ್ ಆಗುವ ಸನ್ನಿವೇಶ ಉಂಟಾಗಿದೆ. ವದೆಸಮುದ್ರದ ಗಾಮಸ್ಥರು ಕನಗನಮರಡಿಗೆ ಹಾಗೂ ಕನಗನಮರಡಿ ಗ್ರಾಮಸ್ಥರು ವದೆಸಮುದ್ರಕ್ಕೆ ಹೋಗಲು ಕೂಡ ಹಿಂದೇಟು ಹಾಕುತ್ತಿದ್ದಾರೆ.
ಕನಗನಮರಡಿ ಬಸ್ ದುರಂತ ನಡೆದ ಜಾಗದಲ್ಲೇ ಮತ್ತೊಂದು ಅಪಘಾತ
ವದೆಸಮುದ್ರ ಗ್ರಾಮದಲ್ಲಿ ಮೃತಪಟ್ಟ ಕುಟುಂಬಸ್ಥರು ಮಾತ್ರ 11ನೇ ದಿನದ ಕಾರ್ಯ ಮಾಡುವ ಉದ್ದೇಶದಿಂದ ಹೊರಗೆ ಹೋಗಿ ಮಧ್ಯಾಹ್ನವೇ ವಾಪಸ್ ಬಂದು ಊರು ಸೇರುತ್ತಿದ್ದಾರೆ. ಅದು ಬಿಟ್ಟರೆ ಬೇರೆಯಾರೂ ಸಹ ಹೋಗುತ್ತಿಲ್ಲ.
ಸಂಜೆಯಾದರೆ ಅತ್ತ ಜನರು ಸಂಚರಿಸುತ್ತಿಲ್ಲ
ಬಸ್ ಬರುವ ಸಮಯ ನೋಡಿಕೊಂಡು ಹೋಗುತ್ತಿದ್ದಾರೆ. ಕೆಲಸಕ್ಕೆ ಹೋಗುವವರು ಸಹ ಕೆಲಸಕ್ಕಾಗಿ ಹೊರಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಾಗಿ ಒನ್ ಇಂಡಿಯಾ ಕನ್ನಡದಿಂದ ಕನಗನಮರಡಿಯ ಗ್ರಾಮಸ್ಥರಾರ ರಾಚಪ್ಪರನ್ನು ಮಾತನಾಡಿಸಿದಾಗ ಅವರು ಹೇಳುವುದಿಷ್ಟು, ಆ ಜಾಗಕ್ಕೆ ಹೋದಾಗ ನಮ್ಮ ಕುಟುಂಬಸ್ಥರು, ನಮ್ಮೂರಿನ ಮಕ್ಕಳು ಸತ್ತು ಹೋಗಿರುವುದೇ ನೆನಪಾಗುತ್ತದೆ. ಹಾಗಾಗಿ ನಾವೆಲ್ಲರೂ ಅತ್ತ ಕಡೆ ಸಂಜೆಯಾದರೇ ಸುಳಿಯುತ್ತಿಲ್ಲ ಎಂದು ಹನಿಗಣ್ಣಾದರು. ವದೆ ಸಮುದ್ರದ ಗಿರೀಶ್ ಮಾತನಾಡಿ, ನಮ್ಮೂರಿಗೆ ಇದೊಂದು ಶಾಪದಂತಿದೆ. ನಮಗೆ ಆ ನಾಲೆಯನ್ನು ನೋಡಿದರೆ ಸಾಕು ಭಯವಾಗುತ್ತಿದೆ. ಆ ನಾಲೆ ಬೇಕೆಂದು ಪ್ರತಿಭಟನೆ ಮಾಡಿದ್ದೆವು. ಈಗ ಆ ನಾಲೆ ಏತಕ್ಕಾದರೂ ನಮ್ಮೂರಿಗೆ ಜವರಾಯನಾಗಿ ಒಕ್ಕರಿಸಿತೋ ಎಂದು ಹಿಡಿಶಾಪ ಹಾಕುತ್ತಿದ್ದೇವೆ ಎನ್ನುತ್ತಾರೆ.
ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ
ವದೆ ಸಮುದ್ರ ಗ್ರಾಮದಲ್ಲಿ ಸುಮಾರು 14 ಮಂದಿ ಸಾವನ್ನಪ್ಪಿದ್ದರು. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮದಿಂದ ಕನಗನಮರಡಿಗೆ ಸುಮಾರು 15ರಿಂದ 20 ಮಕ್ಕಳು ಶಾಲೆಗೆ ಹೋಗುತ್ತಾರೆ. ಆದರೆ ಈ ದುರಂತದಿಂದ ಭಯಗೊಂಡಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ.
ಅಗತ್ಯ ಸಮಯಕ್ಕೆ ಸಂಚರಿಸದ ಬಸ್ಸುಗಳು
ಆ ಘಟನೆ ನಡೆದ ನಂತರ ಸರಕಾರದ ಸಾರಿಗೆ ನಿಗಮದಿಂದಲೇ ಎರಡು ಬಸ್ಸುಗಳನ್ನು ಸಂಚಾರಕ್ಕೆ ನಿಯೋಜಿಸಿದೆ. ಆದರೆಆ ಎರಡು ಬಸ್ಸುಗಳು ತಮಗೆ ಅಗತ್ಯವಾದ ಸಮಯದಲ್ಲಿ ಬರುವುದೇ ಇಲ್ಲ. ಬೇಕಾಬಿಟ್ಟಿಯಾಗಿ ಓಡಾಡುತ್ತಿವೆ. ಗಾಮಸ್ಥರೆಲ್ಲ ಸೇರಿ ಸಮಯ ನಿಗದಿ ಮಾಡಿ, ಆ ಸಮಯದಲ್ಲಿಯೇ ಸಂಚರಿಸಿದರೆ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಸಾರಿಗೆ ಅಧಿಕಾರಿಗಳಿಗೆ ಮನವಿ ನೀಡಿದರೂ ಇಲ್ಲಿಯವರೆಗೂ ಕ್ರಮ ಕೈಗೊಂಡಿಲ್ಲ. ಇದರಿಂದ ಶಾಲೆಯ ಶಿಕ್ಷಕರು ಸಹ ಬಸ್ ಸಿಕ್ಕಿದರೆ ಶಾಲೆಗೆ ಬನ್ನಿ, ಇಲ್ಲವಾದರೆ ಬೇಡ ಎಂದು ಮಕ್ಕಳಿಗೆ ಹೇಳಿದ್ದಾರೆ ಎಂದು ಗಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಅಪಘಾತ ನಡೆದ ಜಾಗಕ್ಕೆ ಮಾತ್ರ ತಡೆಗೋಡೆ
ಬಸ್ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ನಾಲೆಯುದ್ದಕ್ಕೂ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ಚಿಕ್ಕಬ್ಯಾಡರಹಳ್ಳಿಯಿಂದ ತಿರುಮಲಾಪುರ, ಕನಗನಮರಡಿ, ಸಿಂದಳ್ಳಿ, ಹುಳ್ಳೇನಹಳ್ಳಿ ಹಾಗೂಶಿವಳ್ಳಿ ಮೂಲಕ ಮಂಡ್ಯಕ್ಕೆ ಸಂಪರ್ಕ ರಸ್ತೆಯಾಗಿದೆ. ಹುಳ್ಳೇನಹಳ್ಳಿಯವರೆಗೂ ನಾಲೆ ಇದೆ. ಆದರೆ ಎಲ್ಲಿಯೂ ತಡೆಗೋಡೆ ಇಲ್ಲದಿರುವುದರಿಂದ ವಾಹನ ಸವಾರರು ಭಯದಿಂದಲೇ ಸಂಚರಿಸ ಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಕೂಡಲೇ ನಾಲೆಯುದ್ದಕ್ಕೂ ತಡೆಗೋಡೆ ನಿರ್ಮಿಸುವ ಮೂಲಕ ಸಂಭವನೀಯ ಅನಾಹುತ ತಪ್ಪಿಸಬೇಕು ಎನ್ನುತ್ತಾರೆ ಗ್ರಾಮಸ್ಥರು.