ಸಿಎಂ ತವರು ಕ್ಷೇತ್ರ ಗೆಲ್ಲಲು ಬಿಜೆಪಿಯಿಂದ ಒಕ್ಕಲಿಗ-ಲಿಂಗಾಯತಾಸ್ತ್ರ
ಮಂಡ್ಯ, ನವೆಂಬರ್ 22: ಉಪ ಚುನಾವಣೆಯ ಮತದಾನ ದಿನ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳು ದಿನದಿಂದ ದಿನಕ್ಕೆ ತಮ್ಮ ಚುನಾವಣಾ ಕಾರ್ಯತಂತ್ರಗಳನ್ನು ಬದಲಿಸುತ್ತಿವೆ.
ಅದೇ ರೀತಿ ಜೆಡಿಎಸ್ ಭದ್ರಕೋಟೆಯಾಗಿರುವ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರವನ್ನು ಶತಾಯಗತಾಯ ಗೆಲ್ಲಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಭಾರತೀಯ ಜನತಾ ಪಕ್ಷ ಒಂದು ಮಾಸ್ಟರ್ ಪ್ಲಾನ್ ರೂಪಿಸಿಕೊಂಡಿದೆ.
ಹೆಚ್ಚು ಒಕ್ಕಲಿಗ ಮತಗಳನ್ನು ಹೊಂದಿರುವ ಕೆ.ಆರ್.ಪೇಟೆ ಉಪ ಕದನ ರಂಗೇರಿದೆ. ಸಿಎಂ ಯಡಿಯೂರಪ್ಪ ಮೂಲತಃ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆಯವರಾಗಿದ್ದು, ಇಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿಯನ್ನು ಕೊನೆ ಕ್ಷಣದಲ್ಲಿ ಬದಲಾಯಿಸಿ ಒಕ್ಕಲಿಗ ಮತಬ್ಯಾಂಕ್ ಗೆ ಕೈ ಹಾಕಿದೆ.
ಸಚಿವ ಮಾಧುಸ್ವಾಮಿಗೆ ವಹಿಸಲಾಗಿದ್ದ ಕೆ.ಆರ್.ಪೇಟೆ ಉಸ್ತುವಾರಿಯನ್ನು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಹೆಗಲಿಗೆ ವಹಿಸಲಾಗಿದೆ.
ಉಪ ಮುಖ್ಯಮಂತ್ರಿಗೆ ಚುನಾವಣಾ ಉಸ್ತುವಾರಿ ಹೇಗಲೇರಿಸುವ ಹಿಂದೆ ಬಿಜೆಪಿಯು ಭಾರೀ ಕಾರ್ಯತಂತ್ರವನ್ನು ಹೊಂದಿದೆ. ಒಕ್ಕಲಿಗ ಕೋಟೆಯಲ್ಲಿ ಒಕ್ಕಲಿಗ ಅಸ್ತ್ರವನ್ನೇ ಬಿಜೆಪಿ ಪ್ರಯೋಗಿಸಿದೆ. ಯುವ ಸಮುದಾಯದ ಮತಗಳನ್ನು ಬೇಟೆಯಾಡಲು ಈ ತಂತ್ರ ರೂಪಿಸಿದೆ.
ಇವರಿಗೆ ಜೊತೆಯಾಗಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ರನ್ನು ಸಹ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಈ ಮೂಲಕ ಒಕ್ಕಲಿಗ-ಲಿಂಗಾಯತ ಮತಗಳನ್ನು ಗಟ್ಟಿಯಾಗಿಸಿಕೊಳ್ಳಲು ಪ್ರಯತ್ನಿಸಿದೆ.

ಕೆ.ಆರ್.ಪೇಟೆ ಕ್ಷೇತ್ರದಲ್ಲಿ 90 ಸಾವಿರಕ್ಕೂ ಅಧಿಕ ಒಕ್ಕಲಿಗ ಮತಗಳಿವೆ. ಅಶ್ವತ್ಥ ನಾರಾಯಣ ಬಿಜೆಪಿಯ ಪ್ರಭಾವಿ ನಾಯಕನಾಗಿದ್ದು, ಒಕ್ಕಲಿಗ ಮತಗಳನ್ನು ಸೆಳೆದರೆ ಸುಲಭವಾಗಿ ಗೆಲ್ಲಬಹುದು, ಅದರಲ್ಲೂ ಒಕ್ಕಲಿಗ ಯುವಕರನ್ನು ಬಿಜೆಪಿಯತ್ತ ಸೆಳೆಯಲು ಈ ಅಸ್ತ್ರ ಪ್ರಯೋಗಿಸಿದೆ. ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಜೊತೆ ಅಶ್ವತ್ಥ್ ನಾರಾಯಣ ಮತ ಬೇಟೆಗಿಳಿಯಲಿದ್ದಾರೆ
ಈ ಹಿಂದೆ ಸಚಿವ ಮಾಧುಸ್ವಾಮಿಗೆ ಕೆ.ಆರ್.ಪೇಟೆ ಕ್ಷೇತ್ರದ ಚುನಾವಣಾ ಉಸ್ತುವಾರಿ ಕೊಡಲಾಗಿತ್ತು, ಆದರೆ ಕುರುಬ ಸಮುದಾಯದ ವಿವಾದವನ್ನು ಮೈಮೇಲೆ ಎಳೆದುಕೊಂಡರು.
40 ಸಾವಿರಕ್ಕೂ ಅಧಿಕ ಕುರುಬ ಮತಗಳು ಕೆ.ಆರ್.ಪೇಟೆ ಕ್ಷೇತ್ರದಲ್ಲಿವೆ. ಕುರುಬ ಸಮುದಾಯದ ವಿರೋಧ ಎದುರಿಸಿದ್ದಲ್ಲದೇ, ಸ್ಥಳೀಯ ಬಿಜೆಪಿ ಮುಖಂಡರು ಮಾಧುಸ್ವಾಮಿಗೆ ಅಪಸ್ವರ ಎತ್ತಿದ್ದರು.
ಸಿಎಂ ಪುತ್ರ ವಿಜಯೇಂದ್ರಗೆ ಉಸ್ತುವಾರಿ ಕೊಟ್ಟರೆ ಸ್ವತಃ ಮುಖ್ಯಮಂತ್ರಿಗೇ ಉಸ್ತುವಾರಿ ಕೊಟ್ಟಂತೆ. ಅಂದ ಮೇಲೆ ಮತ್ತೊಬ್ಬ ಲಿಂಗಾಯತ ಸಮುದಾಯದವರ ಅವಶ್ಯಕತೆ ಇಲ್ಲ ಎಂದು ಅಲ್ಲಿನ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೇ ಮಾಧುಸ್ವಾಮಿಯಿಂದ ಆಗಿದ್ದ ಮುಜುಗರ ತಪ್ಪಿಸಿಕೊಳ್ಳಲು ಅವರನ್ನು ಚುನಾವಣಾ ಉಸ್ತುವಾರಿಯಿಂದ ಕೈಬಿಡಲಾಗಿದೆ.












Click it and Unblock the Notifications