ಮುಂದಿನ ರಾಜಕೀಯ ನಡೆ ಬಗ್ಗೆ ಜಿ. ಟಿ. ದೇವೇಗೌಡರ ಮಾತು!
ಮಂಡ್ಯ,ಜುಲೈ 06: "ಜೆಡಿಎಸ್ನ 1.25 ಸಾವಿರ ಮತದಾರರು ನನಗೆ ಮತ ನೀಡಿ ಗೆಲ್ಲಿಸಿದ್ದು, ಅವರ ಅದೇಶದಂತೆ 5 ವರ್ಷಗಳ ಕಾಲ ಜೆಡಿಎಸ್ ಶಾಸಕನಾಗಿರುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೆ ವೇಳೆ ಮತದಾರರ ಅಭಿಪ್ರಾಯ ಪಡೆದು ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳುತ್ತೇನೆ" ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಹೇಳಿದರು.
ಮಂಡ್ಯ ತಾಲ್ಲೂಕಿನ ನಗುವನಹಳ್ಳಿ ಗ್ರಾಮದ ಕಾಲೋನಿಯ ಬಳಿ 5.2 ಕೋಟಿ ರೂ.ಗಳ ವೆಚ್ಚದಲ್ಲಿ ನಗುವನಹಳ್ಳಿ ಗ್ರಾಮದಿಂದ ಮೈಸೂರು ರಿಂಗ್ ರಸ್ತೆ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯರವರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
"ಕಳೆದ 3ವರ್ಷಗಳಿಂದ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗಿಲ್ಲ, ಆದರೂ ನಾನು ಜೆಡಿಎಸ್ ಪಕ್ಷದ ಶಾಸಕನಾಗಿದ್ದೇನೆ. ಕಳೆದ ಬಾರಿಯಂತೆ ಮತದಾರರು ಯಾರ ನಿರ್ಧಾರ ಕೈಗೊಳ್ಳುತ್ತಾರೆ ಅದಕ್ಕೆ ನಾನು ಬದ್ಧನಾಗಿದ್ದೇನೆ" ಎಂದು ಸ್ಪಷ್ಟಪಡಿಸಿದರು.

"ಇತ್ತೀಚೆಗೆ ಕಾಂಗ್ರೆಸ್ನ ಸಿದ್ದರಾಮಯ್ಯ ಅವರ ಜೊತೆ ಚೆನ್ನಾಗಿರುವುದರಿಂದ ಕಾಂಗ್ರೆಸ್ಗೆ ಅಂತಲೂ, ಬಿಜೆಪಿ ಪಕ್ಷದವರು ನನ್ನೊಂದಿಗೆ ಸಂಪರ್ಕದಲ್ಲಿರುವುದರಿಂದ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತಹಾಕಿರುವುದರಿಂದ ಇಲ್ಲಿ ಉಳಿದುಕೊಳ್ಳುತ್ತಾರೆ ಎನ್ನುತ್ತಾರೆ. ಆದರೆ ಮತದಾರರೇ ಅಂತಿಮ" ಎಂದರು.
ವಿವಾದಾದ್ಮಕ ಹೇಳಿಕೆ; ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಮಾಜಿ ಶಾಸಕ ರಾಜಣ್ಣ ನೀಡಿರುವ ವಿವಾದಾದ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, "ಇಂತಹ ಹೇಳಿಕೆ ಮನುಷ್ಯ ಕುಲಕ್ಕೆ ತರವಲ್ಲ. ದೇವೇಗೌಡರು 90ರ ಆಸು-ಪಾಸಿನಲ್ಲಿದ್ದರೂ ಇಂದಿಗೂ ಅವರು ರಾಷ್ಟ್ರ ಸೇವೆ ಹಾಗೂ ರಾಜ್ಯ ಸೇವೆಗಾಗಿ ಹಂಬಲಿಸುತ್ತಾರೆ. ಹಾಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಇತರೆ ಪ್ರಮುಖರೆಲ್ಲರೂ ದೇವೇಗೌಡರಿಗೆ ಗೌರವ ನೀಡುತ್ತಾರೆ. ಅಂತಹ ವ್ಯಕ್ತಿಗೆ ರಾಜಣ್ಣ ಅಗೌರವ ತೋರಿರುವುದು ತರವಲ್ಲ ಕೂಡಲೇ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು" ಎಂದು ಜಿ. ಟಿ. ದೇವೇಗೌಡರು ಒತ್ತಾಯಿಸಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, "ರೈತರು ಮತ್ತು ನಾಡಿನ ಅಭ್ಯುದಯಕ್ಕಾಗಿ ಜೀವನ ಪೂರ್ತಿ ಹೋರಾಡುತ್ತಲೇ ಬಂದಿರುವ ದೇವೇಗೌಡರ ವಿರುದ್ಧ ಮಾತನಾಡುವ ಯೋಗ್ಯತೆ ರಾಜಣ್ಣರವರಿಗೆ ಇಲ್ಲ. ಈ ಹೇಳಿಕೆ ಅವರ ಉದ್ದಟತನವನ್ನು ತೋರುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಹಾಗೂ ಒಕ್ಕಲಿಗ ಸಮುದಾಯ ಅವರಿಗೆ ತಕ್ಕ ಶಾಸ್ತಿ ಮಾಡಲಿದ್ದಾರೆ" ಎಂದರು.

ಗುದ್ದಲಿ ಪೂಜೆ ವೇಳೆ ಶಾಸಕ ಜಿ. ಟಿ. ದೇವೇಗೌಡ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ಪರಸ್ಪರ ಸಿಹಿ ಹಂಚಿಕೊಳ್ಳುವ ಮೂಲಕ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.












Click it and Unblock the Notifications